
ನವದೆಹಲಿ, 23 ಆಗಸ್ಟ್ (ಹಿ.ಸ.):
ಆ್ಯಂಕರ್:ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಅವರು, “ಇನ್ನಷ್ಟು ದೊಡ್ಡ ಕನಸುಗಳನ್ನು ಕಾಣೋಣ, ಮತ್ತಷ್ಟು ಹೊಸ ಆವಿಷ್ಕಾರಗಳನ್ನು ಮಾಡೋಣ ಹಾಗೂ ಹೊಸ ಗಡಿಗಳನ್ನು ದಾಟೋಣ” ಎಂದು ಕರೆ ನೀಡಿದ್ದಾರೆ.
2023ರ ಆಗಸ್ಟ್ 23ರಂದು ಭಾರತ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಸಮೀಪ ಯಶಸ್ವಿಯಾಗಿ ಇಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿತ್ತು. ಇದರೊಂದಿಗೆ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ವಿಶ್ವದ ನಾಲ್ಕನೇ ದೇಶ ಹಾಗೂ ಚಂದ್ರನ ದಕ್ಷಿಣ ಧ್ರುವದ ಸಮೀಪ ಇಳಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು.
ವಿಕ್ರಮ್ ಲ್ಯಾಂಡರ್ನಿಂದ ಪ್ರಜ್ಞಾನ ರೋವರ್ ಅನ್ನು ಚಂದ್ರನ ಮೇಲ್ಮೈಗೆ ಇಳಿಸಿ, ಚಂದ್ರನ ಕುರಿತು ಮಹತ್ವದ ಅಧ್ಯಯನ ನಡೆಸಲಾಯಿತು. ಈ ಐತಿಹಾಸಿಕ ಸಾಧನೆಯ ಸ್ಮರಣಾರ್ಥ ಆಗಸ್ಟ್ 23ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಿಸುವುದಾಗಿ ಪ್ರಧಾನಿ ಮೋದಿ 2023ರ ಆಗಸ್ಟ್ 26ರಂದು ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿಗೆ ಭೇಟಿ ನೀಡಿದ ವೇಳೆ ಘೋಷಿಸಿದ್ದರು.
ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ದೇಶವನ್ನು ಜಾಗತಿಕ ಮಟ್ಟದ ಮುಂಚೂಣಿ ಬಾಹ್ಯಾಕಾಶ ಶಕ್ತಿಯನ್ನಾಗಿ ರೂಪಿಸುವ ಸಂಕಲ್ಪವನ್ನು ಪುನರುಚ್ಚರಿಸುವಂತೆ ಇಸ್ರೋ ಕರೆ ನೀಡಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.