
ಅಯೋಧ್ಯೆ, 21 ಆಗಸ್ಟ್ (ಹಿ.ಸ.):
ಆ್ಯಂಕರ್:
ಶ್ರೀರಾಮ ಜನ್ಮಭೂಮಿ ನಿರ್ಮಾಣ ಸಮಿತಿ ಸಭೆಯ ಎರಡನೇ ದಿನವಾದ ಶುಕ್ರವಾರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ರಾಮಮಂದಿರ ನಿರ್ಮಾಣ ಕಾಮಗಾರಿಯ ಪ್ರಗತಿ ಕುರಿತು ಮಾಹಿತಿ ನೀಡಿದರು.
ಸರ್ಕಿಟ್ ಹೌಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವು ಕೋಟ್ಯಂತರ ಭಕ್ತರ ಕನಸು ನನಸಾಗುವ ಕ್ಷಣವಾಗಿದೆ ಎಂದರು. ಶ್ರೀರಾಮ ಮಂದಿರ ಟ್ರಸ್ಟ್ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಬಿಡುಗಡೆ ಮಾಡಿರುವ ಪತ್ರದಲ್ಲಿ ತಮ್ಮ ಹೆಸರು ಉಲ್ಲೇಖಿಸಿರುವ ಕುರಿತು ಕೇಳಿದ ಪ್ರಶ್ನೆಗೆ, ತಾವು ಆ ಪತ್ರವನ್ನು ನೋಡಿಲ್ಲ. ನೀವು ವಿವಾದ ಸೃಷ್ಟಿಸಲು ಬಯಸುತ್ತಿದ್ದೀರಿ ಎಂದು ಪ್ರತಿಕ್ರಿಯಿಸಿದರು.
ಮಂದಿರ ನಿರ್ಮಾಣಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಹಣ ಬಳಸಿಲ್ಲ. ಟ್ರಸ್ಟ್ ಸಂಗ್ರಹಿಸಿದ ಹಣದಿಂದಲೇ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ನಿಗದಿಪಡಿಸಲಾಗಿದ್ದ ಸುಮಾರು 70 ನಿರ್ಮಾಣ ಕಾಮಗಾರಿಗಳ ಪೈಕಿ 60ಕ್ಕೂ ಹೆಚ್ಚು ಕಾಮಗಾರಿಗಳು ಪೂರ್ಣಗೊಂಡಿವೆ. ಪೂರ್ಣಗೊಂಡ ಕಾಮಗಾರಿಗಳನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಹಸ್ತಾಂತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅವುಗಳ ನಿರ್ವಹಣೆಯನ್ನು ಟ್ರಸ್ಟ್ ನೋಡಿಕೊಳ್ಳಲಿದೆ ಎಂದರು.
ಮಳೆಗಾಲದಲ್ಲಿ ಮಂದಿರ ಆವರಣದಲ್ಲಿ ನೀರು ನಿಲ್ಲುವ ಸಮಸ್ಯೆ ನಿವಾರಿಸಲು ಒಳಚರಂಡಿ ಮತ್ತು ಮಳೆನೀರು ಹರಿವು ವ್ಯವಸ್ಥೆಯನ್ನು ಮುಖ್ಯ ಚರಂಡಿಗೆ ಸಂಪರ್ಕಿಸುವ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಸ್ತುಸಂಗ್ರಹಾಲಯ, ಸಭಾಂಗಣ ಹಾಗೂ ಟ್ರಸ್ಟ್ ಕಚೇರಿ ನಿರ್ಮಾಣಕ್ಕೆ ಈಗ ವಿಶೇಷ ಗಮನ ನೀಡಲಾಗುತ್ತಿದೆ. ವಸ್ತುಸಂಗ್ರಹಾಲಯದ ಏಳನೇ ಗ್ಯಾಲರಿ ನಿರ್ಮಾಣಕ್ಕೆ ಸುಮಾರು ₹5 ಕೋಟಿ ವೆಚ್ಚವಾಗಲಿದೆ. ಪ್ರವೇಶ ಶುಲ್ಕ ವಿಧಿಸಬೇಕೇ ಎಂಬುದನ್ನು ಟ್ರಸ್ಟ್ ನಿರ್ಧರಿಸಲಿದೆ ಎಂದರು.
ರಾಮಮಂದಿರ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಕಾತಿ ಸಂದರ್ಶನದ ಕುರಿತು ಕೇಳಿದ ಪ್ರಶ್ನೆಗೆ, ತಾವು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ ಹಾಗೂ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ನೃಪೇಂದ್ರ ಮಿಶ್ರಾ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.