







ಬಳ್ಳಾರಿ, 04 ಜುಲೈ (ಹಿ.ಸ.)
ಆ್ಯಂಕರ್: ಪರಿಸರ ಸಂರಕ್ಷಣೆ, ಮರಗಳನ್ನು ಬೆಳೆಸುವುದು ಕೇವಲ ವರ್ಷಕ್ಕೊಮ್ಮೆ ಮಾಡುವ ಸಾಂಕೇತಿಕ ಆಚರಣೆಯಾಗಬಾರದು. ಬದಲಿಗೆ ಅದು ನಮ್ಮ ದೈನಂದಿನ ಜೀವನಶೈಲಿಯಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರು ಕರೆ ನೀಡಿದರು.
ವನಮಹೋತ್ಸವ 2026 ರ ಅಂಗವಾಗಿ ಬಳ್ಳಾರಿ ಪ್ರಾದೇಶಿಕ ಅರಣ್ಯ ವಿಭಾಗದ ವತಿಯಿಂದ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ರೇಡಿಯೋ ಪಾರ್ಕ್ ಬಳಿಯ ಪ್ರಾದೇಶಿಕ ಅರಣ್ಯ ವಿಭಾಗ ಕಚೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಗ್ರೀನ್ ಮಾರ್ಚ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಳ್ಳಾರಿಯಲ್ಲಿ ದಿನದಿಂದ ದಿನಕ್ಕೆ ತಾಪಮಾನವು ಗಣನೀಯವಾಗಿ ಹೆಚ್ಚಾಗುತ್ತಿದೆ. ಇದಕ್ಕೆ ಹಸಿರು ಕ್ರಾಂತಿಯೊAದೇ ಸೂಕ್ತ ಪರಿಹಾರ. ನಾವು ಎಷ್ಟು ಹೆಚ್ಚು ಮರ-ಗಿಡಗಳನ್ನು ನೆಟ್ಟು ಪೋಷಿಸುತ್ತೇವೆಯೋ, ಅಷ್ಟು ಹಿತಕರವಾದ ವಾತಾವರಣವನ್ನು ನಮ್ಮ ಮುಂದಿನ ಪೀಳಿಗೆಗೆ ನೀಡಬಹುದು ಎಂದು ತಿಳಿಸಿದರು.
ಗಿಡಗಳನ್ನು ನೆಡುವ ಪ್ರಕ್ರಿಯೆಯಲ್ಲಿ ಮಕ್ಕಳ ಪಾತ್ರ ದೊಡ್ಡದಿದೆ. ಮಕ್ಕಳ ಬೆಳವಣಿಗೆಯ ಜೊತೆ ಜೊತೆಗೆ ಅವರು ನೆಟ್ಟ ಸಸಿಗಳು ಬೆಳೆಯುವುದನ್ನು ನೋಡುವುದೇ ಒಂದು ಸಂಭ್ರಮ. ನಮ್ಮ ಶಾಲಾ ದಿನಗಳಲ್ಲಿ ಸಸಿಗಳನ್ನು ನೆಟ್ಟು, ಅವುಗಳ ಬೆಳವಣಿಗೆಯನ್ನು ಪ್ರಾಯೋಗಿಕವಾಗಿ ದಾಖಲಿಸುವ ಚಟುವಟಿಕೆಗಳಿದ್ದವು. ಇಂತಹ ಹವ್ಯಾಸಗಳು ಇಂದಿನ ಮಕ್ಕಳಿಗೂ ಅತ್ಯಗತ್ಯ ಎಂದರು.
ಪ್ರತಿ ವರ್ಷ ಅರಣ್ಯ ಇಲಾಖೆಯು ಸಸಿಗಳನ್ನು ನೆಡುವ ಇಂತಹ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಪ್ರತಿಯೊಬ್ಬ ನಾಗರಿಕನೂ ಕೇವಲ ಸಸಿ ನೆಡುವುದಷ್ಟೇ ಅಲ್ಲದೆ, ಅದನ್ನು ಹೆಮ್ಮರವಾಗಿಸುವವರೆಗೆ ಪೋಷಿಸುವ ಜವಾಬ್ದಾರಿ ಹೊರಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಪರಿಸರ ಇದ್ದರೆ ನಾವು ಇರುತ್ತೇವೆ, ಪರಿಸರ ಇಲ್ಲದಿದ್ದರೆ ನಮ್ಮ ಅಸ್ತಿತ್ವವೇ ಇರಲ್ಲ, ಸುಸ್ಥಿರ ಅಭಿವೃದ್ಧಿಯ ಹಾದಿಯಲ್ಲಿ ಸಾಗಿದರೆ ಮಾತ್ರ ನಮ್ಮ ಭವಿಷ್ಯ ಚೆನ್ನಾಗಿರಲು ಸಾಧ್ಯ. ಇದಕ್ಕಾಗಿ ಯುವ ಪೀಳಿಗೆಯು ಅರಣ್ಯೀಕರಣ, ಸಾಮಾಜಿಕ ಅರಣ್ಯೀಕರಣ ಹಾಗೂ ಸಸಿ ನೆಡುವ ಕಾರ್ಯಕ್ರಮಗಳಿಗೆ ನಿರಂತರ ಬೆಂಬಲ ನೀಡಬೇಕು ಎಂದು ಆಶಿಸಿದರು.
ವಿದ್ಯಾರ್ಥಿಗಳು ನೀವಿನ್ನೂ ವೋಟ್ ಮಾಡದೇ ಇರಬಹುದು, ಆದರೆ ಎಸ್ಐಆರ್ ಬಗ್ಗೆ ಜಾಗೃತಿ ಇರಬೇಕು. ನಿಮ್ಮ ಕುಟುಂಬದ ಸದಸ್ಯರ ಹೆಸರು ಹಳೆಯ ಮತದಾರರ ಪಟ್ಟಿಯಲ್ಲಿ ಎಲ್ಲಿದೆ ಎಂಬುದನ್ನು ಪರಿಶೀಲಿಸಿ, ಎನ್ಯೂಮರೇಷನ್ ಫಾರ್ಮ್ಸ್ ಹಾಗೂ ಪ್ರೊಜನಿ ಮ್ಯಾಪಿಂಗ್ ಪ್ರಕ್ರಿಯೆಗಳನ್ನು ಸರಿಯಾಗಿ ಭರ್ತಿ ಮಾಡಲು ಸಹಾಯ ಮಾಡಬೇಕು. ಒಂದು ವೇಳೆ ಈ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತಪ್ಪುಗಳಾದರೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳಿಂದಲೂ ವಂಚಿತರಾಗಬೇಕಾಗಬಹುದು ಎಂದು ಎಸ್ಐಆರ್ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸಿದರು.
ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್ ಬಸವರಾಜ ಅವರು ಮಾತನಾಡಿ, ದೇಶಾದ್ಯಂತ ಜುಲೈ 1 ರಿಂದ 7 ನೇ ತಾರೀಖಿನವರೆಗೆ ವನಮಹೋತ್ಸವ ಸಪ್ತಾಹವನ್ನು ಆಚರಿಸಲಾಗುತ್ತಿದ್ದು, ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆ ಮತ್ತು ಹಸಿರನ್ನು ಹೆಚ್ಚಿಸುವ ಕುರಿತು ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಿದರೂ, ದೇಶಾದ್ಯಂತ ಸಂಪೂರ್ಣವಾಗಿ ಮಳೆಗಾಲ ಆರಂಭವಾಗುವುದು ಜೂನ್ ಅಂತ್ಯಕ್ಕೆ. ಈ ಹಿನ್ನೆಲೆಯಲ್ಲಿ, ಗಿಡಗಳನ್ನು ನೆಟ್ಟು ಪೋಷಿಸಲು ಜುಲೈ ಮೊದಲ ವಾರ ಅತ್ಯಂತ ಸೂಕ್ತವಾದ ಸಮಯವೆಂದು ಪರಿಗಣಿಸಿ ಈ ಸಪ್ತಾಹವನ್ನು ಆಚರಿಸಲಾಗುತ್ತದೆ. ಪ್ರಕೃತಿಯನ್ನು ಇಂದಿನ ಸ್ಥಿತಿಗಿಂತಲೂ ಉತ್ತಮ ರೀತಿಯಲ್ಲಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಬಳಿಕ ಗಣ್ಯರು ‘ಗ್ರೀನ್ ಮಾರ್ಚ್' (ಪರಿಸರ ಜಾಥಾ) ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಜಾಥಾವು ಪ್ರಾದೇಶಿಕ ಅರಣ್ಯ ವಿಭಾಗ ಕಚೇರಿ ಆವರಣದಿಂದ ಆರಂಭಗೊ0ಡು, ಕೌಲ್ ಬಜಾರ್ ಮಾರ್ಗವಾಗಿ ಸಾಗಿ ಟಿ.ಬಿ. ಸಾನಿಟೋರಿಯಂ ಆವರಣದಲ್ಲಿ ಅಂತ್ಯಗೊಂಡಿತು. ಬಳಿಕ ಅಲ್ಲಿ ಸಸಿಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಯ ಸಂಕಲ್ಪ ಮಾಡಲಾಯಿತು ಹಾಗೂ ಜಾಥದಲ್ಲಿ ಭಾಗವಹಿಸಿದವರೆಲ್ಲರಿಗೂ ಸಸಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಕೆ. ಗಿರೀಶ್ ಕುಮಾರ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಶಾಲಾ- ಕಾಲೇಜುಗಳ ಪ್ರಾಂಶುಪಾಲರು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್