
ಜಮ್ಮು, ಜುಲೈ 25(ಹಿ.ಸ.):
ಆ್ಯಂಕರ್:
ನಿರಂತರ ಮಳೆ ಹಾಗೂ ಪ್ರತಿಕೂಲ ಹವಾಮಾನದಿಂದ ಕಳೆದ ಆರು ದಿನಗಳಿಂದ ಸ್ಥಗಿತಗೊಂಡಿದ್ದ ವಾರ್ಷಿಕ ಅಮರನಾಥ ಯಾತ್ರೆ ಶನಿವಾರ ಮತ್ತೆ ಆರಂಭವಾಗಿದೆ. ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ 18ನೇ ತಂಡದ 6,269 ಮಂದಿ ಯಾತ್ರಾರ್ಥಿಗಳು ಕಟ್ಟುನಿಟ್ಟಿನ ಭದ್ರತೆಯೊಂದಿಗೆ ಬಾಲ್ಟಾಲ್ ಮೂಲ ಶಿಬಿರದತ್ತ ಪ್ರಯಾಣ ಬೆಳೆಸಿದರು.
ಜುಲೈ 19ರಿಂದ ಭಾರೀ ಮಳೆ, ಭೂಕುಸಿತ ಮತ್ತು ಸುರಕ್ಷತಾ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಅನಂತನಾಗ ಜಿಲ್ಲೆಯ 48 ಕಿಲೋಮೀಟರ್ ಉದ್ದದ ಪಹಲ್ಗಾಮ್ ಮಾರ್ಗ ಹಾಗೂ ಗಂದೇರ್ಬಲ್ ಜಿಲ್ಲೆಯ 14 ಕಿಲೋಮೀಟರ್ ಉದ್ದದ ಬಾಲ್ಟಾಲ್ ಮಾರ್ಗಗಳಲ್ಲಿ ಸಂಚಾರವನ್ನು ನಿಲ್ಲಿಸಲಾಗಿತ್ತು.
18ನೇ ತಂಡದಲ್ಲಿ 1,470 ಮಹಿಳೆಯರು, 25 ಮಕ್ಕಳು ಹಾಗೂ 54 ಸಾಧುಗಳು ಸೇರಿದ್ದಾರೆ. ಒಟ್ಟು 223 ವಾಹನಗಳ ಬೆಂಗಾವಲು ಪಡೆಯೊಂದಿಗೆ ಮುಂಜಾನೆ ಸುಮಾರು 2.40 ಗಂಟೆಗೆ ಯಾತ್ರಾರ್ಥಿಗಳು ಬಾಲ್ಟಾಲ್ ಮೂಲ ಶಿಬಿರದತ್ತ ಹೊರಟರು. ಸದ್ಯ ಪಹಲ್ಗಾಮ್ ಮಾರ್ಗಕ್ಕೆ ಯಾವುದೇ ವಾಹನಗಳನ್ನು ಕಳುಹಿಸಲಾಗಿಲ್ಲ.
ಹವಾಮಾನದಲ್ಲಿ ಸುಧಾರಣೆ ಕಂಡುಬಂದಿದ್ದು, ಉದಂಪುರ–ರಾಂಬನ್ ಭಾಗದಲ್ಲಿ ಭೂಕುಸಿತದಿಂದ ಮೂರು ದಿನಗಳ ಕಾಲ ಬಂದ್ ಆಗಿದ್ದ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಪುನಃ ಸಂಚಾರಕ್ಕೆ ತೆರೆಯಲ್ಪಟ್ಟ ಹಿನ್ನೆಲೆಯಲ್ಲಿ ಯಾತ್ರೆ ಮತ್ತೆ ಆರಂಭವಾಗಿದೆ.
ಜುಲೈ 2ರಂದು ಉಪರಾಜ್ಯಪಾಲ ಮನೋಜ್ ಸಿನ್ಹಾ ಅವರು ಭಗವತಿ ನಗರ ಮೂಲ ಶಿಬಿರದಿಂದ ಮೊದಲ ತಂಡದ ಯಾತ್ರಾರ್ಥಿಗಳಿಗೆ ಹಸಿರು ನಿಶಾನೆ ತೋರಿಸಿ ಯಾತ್ರೆಗೆ ಚಾಲನೆ ನೀಡಿದ್ದರು. ಈ ವರ್ಷದ ಅಮರನಾಥ ಯಾತ್ರೆ ಆಗಸ್ಟ್ 28ರಂದು ರಕ್ಷಾಬಂಧನದ ದಿನ ಮುಕ್ತಾಯಗೊಳ್ಳಲಿದೆ.
ಈವರೆಗೆ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಭಕ್ತರು ಅಮರನಾಥ ಗುಹಾ ದೇವಾಲಯದಲ್ಲಿ ದರ್ಶನ ಪಡೆದಿದ್ದು, ಅವರಲ್ಲಿ ಸುಮಾರು 1.20 ಲಕ್ಷ ಮಂದಿ ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದಲೇ ಯಾತ್ರೆ ಆರಂಭಿಸಿದ್ದಾರೆ.
ಯಾತ್ರಾರ್ಥಿಗಳು ಆಡಳಿತ ಹಾಗೂ ಭದ್ರತಾ ಪಡೆಗಳ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಯಾತ್ರಾ ಮಾರ್ಗಗಳಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್), ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಇತರೆ ಭದ್ರತಾ ಪಡೆಗಳ ಸಾವಿರಾರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ರತಿಕೂಲ ಹವಾಮಾನದಿಂದ ಯಾತ್ರೆ ಸ್ಥಗಿತಗೊಂಡಿದ್ದ ಅವಧಿಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತರು ಜಮ್ಮು-ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ತಂಗಿದ್ದು, ಯಾತ್ರೆ ಪುನರಾರಂಭವಾಗುವುದಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಈಗ ಯಾತ್ರೆ ಮರುಾರಂಭವಾಗಿರುವುದರಿಂದ ಭಕ್ತರಲ್ಲಿ ಸಂತಸ ಮನೆಮಾಡಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.