


ಹೊಸಪೇಟೆ, 01 ಜುಲೈ (ಹಿ.ಸ.):
ಆ್ಯಂಕರ್ : ತಾಲ್ಲೂಕಿನ ಕಮಲಾಪುರ ಪಟ್ಟಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಪಟ್ಟಣದ ಸ್ವಾತಂತ್ರ್ಯ ಹೋರಾಟಗಾರರಾದ ದೇಸಾಯಿ ಗುಂಡೂರಾವ್ ಅವರ ಕುಟುಂಬದ ಮತದಾರರಿಗೆ ಮತ್ತು ಹಳೆ ಮಲಪನಗುಡಿಯ ಪ್ರಸಿದ್ಧ ಡೊಳ್ಳು ಕುಣಿತ ಕಲಾವಿದರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕಾರ್ ಮಂಚಪ್ಪ ಅವರ ಕುಟುಂಬದ ಮತದಾರರಿಗೂ ಪ್ರಥಮ ಹಂತದಲ್ಲಿ ಗಣತಿ ನಮೂನೆ (ಎನ್ಯಾಮುರೇಷನ್ ಫಾರ್ಮ್) ನೀಡುವ ಮೂಲಕ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಈ ಪ್ರಕ್ರಿಯೆಯಲ್ಲಿ 1234 ಬಿಎಲ್ಓ (ಬೂತ್ ಮಟ್ಟದ ಅಧಿಕಾರಿಗಳು) ಗಳು ಕಾರ್ಯನಿರ್ವಹಿಸಲಿದ್ದು, ಅವರು ಜಿಲ್ಲೆಯ ಪ್ರತಿಯೊಬ್ಬರ ಮನೆ ಮನೆಗೆ ಖುದ್ದಾಗಿ ಭೇಟಿ ನೀಡಿ, ಮತದಾರರ ವಿವರಗಳನ್ನು ಪರಿಶೀಲಿಸುವರು. ಅಧಿಕಾರಿಗಳು ಮನೆ ಮನೆ ಭೇಟಿ ನೀಡಿದಾಗ ನಿಗದಿತ ನಮೂನೆಯಲ್ಲಿ ಕುಟುಂಬದ ಹಾಲಿ ಮತದಾರರ ಸರಿಯಾದ ವಿವರಗಳನ್ನು ಭರ್ತಿ ಮಾಡಬೇಕು. ಒಂದಕ್ಕಿಂತ ಹೆಚ್ಚು ಕಡೆ ಹೆಸರಿರುವುದು, ಮರಣ ಹೊಂದಿದವರ ಅಥವಾ ಶಾಶ್ವತವಾಗಿ ವಲಸೆ ಹೋದವರ ಹೆಸರುಗಳು ಪಟ್ಟಿಯಲ್ಲೇ ಮುಂದುವರಿದಿರುವುದನ್ನು ಗುರುತಿಸಿ ತೆಗೆದು ಹಾಕಲು ಸಹಕಾರಿಯಾಗಿದೆ.
ಒಂದೇ ಕುಟುಂಬದ ಎಲ್ಲಾ ಮತದಾರರ ಹೆಸರುಗಳು ಒಂದೇ ಕಡೆ ಮತ್ತು ಸರಿಯಾದ ಕ್ರಮದಲ್ಲಿ ಇರುವಂತೆ ಜೋಡಿಸಲು ಅವಕಾಶ ಕಲ್ಪಿಸಿದೆ. ಆಧಾರ್ ಕಾರ್ಡ್ ಅಥವಾ ಇತರ ಅಧಿಕೃತ ದಾಖಲೆಗಳೊಂದಿಗೆ ಮತದಾರರ ಗುರುತಿನ ಚೀಟಿಯ ಮಾಹಿತಿ ಹೊಂದಾಣಿಕೆಯಾಗದಿದ್ದರೇ, ತಿದ್ದುಪಡಿ ಮಾಡಲು ಹಾಗೂ ಅರ್ಹ ಹೊಸ ಮತದಾರರನ್ನು ಸೇರ್ಪಡೆಗೊಳಿಸಲು ಇದು ಉತ್ತಮ ಅವಕಾಶ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ತಹಶೀಲ್ದಾರ್ ಶೃತಿ. ಎಂ, ಬೂತ್ ಮಟ್ಟದ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್