
ಬಳ್ಳಾರಿ, 05 ಜೂನ್ (ಹಿ.ಸ.) :
ಆ್ಯಂಕರ್ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಸರ್ವರಿಗೂ ಸೂರು’ ಅಭಿಯಾನದಡಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)-2.0 ಅಡಿ ನಗರ ಪ್ರದೇಶದ ವಸತಿ ರಹಿತ ಹಾಗೂ ನಿವೇಶನ ರಹಿತ ಫಲಾನುಭವಿಗಳ ಸಮೀಕ್ಷೆ ನಡೆಸುವ ಮತ್ತು ಆನ್ಲೈನ್ ಪೋರ್ಟಲ್ನಲ್ಲಿ ವಿವರ ದಾಖಲಿಸುವ ಕೊನೆಯ ದಿನಾಂಕವನ್ನು ಜೂ.30 ರವರೆಗೆ ವಿಸ್ತರಿಸಲಾಗಿದೆ.
ಹಲವಾರು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮೀಕ್ಷೆ ಸಮರ್ಪಕವಾಗಿ ನಡೆಯದ ಕಾರಣ ಅರ್ಹ ಫಲಾನುಭವಿಗಳು ವಂಚಿತರಾಗಿರುವುದು ನಿಗಮದ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಕಾಲಾವಕಾಶವನ್ನು ವಿಸ್ತರಿಸಿ ಆದೇಶಿಸಲಾಗಿದೆ.
ಮಾರ್ಗಸೂಚಿ ಮತ್ತು ನಿಯಮ :
ಪಿಎಂ ಆವಾಸ್ ನಗರ 1.0 ಯೋಜನೆಯ ಸಮೀಕ್ಷೆಯಲ್ಲಿದ್ದು, ಇದುವರೆಗೆ ವಸತಿ ಸೌಲಭ್ಯ ಪಡೆಯದ ಎಲ್ಲಾ ಅರ್ಹ ಫಲಾನುಭವಿಗಳನ್ನು ಕಡ್ಡಾಯವಾಗಿ ಪಿಎಂ ಆವಾಸ್ ನಗರ 2.0 ಸಮೀಕ್ಷೆಯಡಿ ಮರುಸೇರಿಸಬೇಕು.
ಸ್ವಂತ ನಿವೇಶನ ಹೊಂದಿರುವ ಫಲಾನುಭವಿಗಳು ಹಕ್ಕುಪತ್ರ, ಕ್ರಯಪತ್ರ, ದಾನಪತ್ರ, ಉಡುಗೊರೆ ಪತ್ರ ಅಥವಾ ಖಾತಾ ಪತ್ರಗಳನ್ನು ಹೊಂದಿರಬೇಕು. ಸೂಕ್ತ ದಾಖಲೆಗಳಿಲ್ಲದಿದ್ದರೆ ಅವರನ್ನು ‘ನಿವೇಶನ ರಹಿತ' ಎಂದು ಪರಿಗಣಿಸಿ, ಅರ್ಜಿಗಳನ್ನು ವೆಲಿಡೇಟ್ ಮಾಡದೆ ಬಾಕಿ ಉಳಿಸಿಕೊಳ್ಳಬೇಕು. ನಿವೇಶನ ವಿತರಿಸಲು ಜಮೀನು ಲಭ್ಯವಿರುವ ಪ್ರಕರಣಗಳಲ್ಲಿ ಮಾತ್ರ ವಿವರಗಳನ್ನು ನಮೂದಿಸಿ ವೆಲಿಡೇಟ್ ಮಾಡಬೇಕು. ಜಮೀನು ಲಭ್ಯವಿಲ್ಲದಿದ್ದಲ್ಲಿ ಅಂತಹ ಅರ್ಜಿಗಳನ್ನು ಬಾಕಿ ಇಡಬೇಕು.
ಈ ಹಿಂದೆ ಪಿಎಂ ಆವಾಸ್ ಯೋಜನೆಗೆ ಆಯ್ಕೆಯಾಗಿಯೂ ಮನೆ ನಿರ್ಮಿಸದೆ, ದಿನಾಂಕ 31-12-2023 ರ ನಂತರ ಕೇಂದ್ರ ಸರ್ಕಾರದಿಂದ ಮನೆ ರದ್ದುಗೊಂಡಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅನರ್ಹರು. ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ವಸತಿ ಯೋಜನೆಗಳಡಿ ಈಗಾಗಲೇ ಸೌಲಭ್ಯ ಪಡೆದಿರುವ ಕುಟುಂಬಗಳು ಈ ಸಮೀಕ್ಷೆಗೆ ಅನರ್ಹರಾಗಿರುತ್ತಾರೆ.
ಒಂದು ವೇಳೆ ಯಾವುದೇ ಅರ್ಹ ಫಲಾನುಭವಿಗಳು ಸಮೀಕ್ಷೆಯಿಂದ ಕೈಬಿಟ್ಟು ಹೋಗಿ ದೂರುಗಳು ಬಂದಲ್ಲಿ, ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯ ಆಯುಕ್ತರು, ಪೌರಾಯುಕ್ತರು ಹಾಗೂ ಮುಖ್ಯಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್