


ಕೊಪ್ಪಳ, 03 ಜೂನ್ (ಹಿ.ಸ.) :
ಆ್ಯಂಕರ್ : ನಗರದ ಎನ್.ಜಿ.ಓ ಕಾಲೋನಿಯಲ್ಲಿನ ಅಪ್ಪಾಜಿ ನಿಲಯದ ನಾಗರಾಜ ನಾಯಕ ಡಿ. ಡೊಳ್ಳಿನ ಅವರ ಮನೆಯಲ್ಲಿ ಮನೆಗೊಂದು ಗ್ರಂಥಾಲಯ ಉದ್ಘಾಟಿಸಿ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾದ ಡಾ. ಮಾನಸ ಅವರು, ಪ್ರತಿ ಮನೆಯಲ್ಲೂ ಇರಲಿ ಪುಸ್ತಕ ಕೋಣೆ ಎಂದರು.
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿದ್ದ ಮನೆಗೊಂದು ಗ್ರಂಥಾಲಯ ಗ್ರಂಥಾಲಯ ಅನುಷ್ಠಾನ ಸಮಾರಂಭದಲ್ಲಿ ನಾಗರಾಜ ನಾಯಕ ಡಿ. ಡೊಳ್ಳಿನ ಅವರ ಮನೆಯಲ್ಲಿ ಏರ್ಪಡಿಸಲಾಗಿದ್ದ ಪುಸ್ತಕ ಪ್ರದರ್ಶನಕ್ಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾದ ಡಾ.ಮಾನಸ ಅವರು, ನಮ್ಮೆಲ್ಲರ ಮನೆಯಲ್ಲಿ ಭಕ್ತಿಗಾಗಿ ದೇವರ ಕೋಣೆ ಇರುವಂತೆ, ಪುಸ್ತಕಕ್ಕೂ ಮೀಸಲು ಜಾಗ ಇರಲಿ. ಪುಸ್ತಕ ಕೋಣೆ ಇರಲಿ. ಇದು ಭಾರತ ಭಾಗ್ಯವಿಧಾತ ಡಾ.ಬಿ.ಆರ್. ಅಂಬೇಡ್ಕರ್ ಅವರ ಕನಸು. ಓದು ಮನುಷ್ಯನನ್ನು ಪ್ರಜ್ಞಾವಂತನನ್ನಾಗಿಸುತ್ತದೆ.
ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಓದು ತುಂಬಾ ಸಹಕಾರಿಯಾಗಲಿದೆ. ಇಂದಿನ ಒತ್ತಡದ ಬದುಕಿನಲ್ಲಿ ಓದು ಮಾತ್ರ ನಮ್ಮನ್ನು ಶಾಂತವಾಗಿರುವಂತೆ ಮಾಡುತ್ತದೆ. ಪುಸ್ತಕಗಳು ಉತ್ತಮ ಸ್ನೇಹಿತರಿದ್ದಂತೆ ಓದು ಮತ್ತು ಲೇಖಕ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ವರೆಗೂ ಲೇಖಕನಿಗೆ ಸಿಕ್ಕ ಗೌರವ ಓದುಗನಿಗೆ ಸಿಗುತ್ತಿರಲಿಲ್ಲ. ಇದನ್ನರಿತು ಕನ್ನಡ ಪುಸ್ತಕ ಪ್ರಾಧಿಕಾರ ಓಗುಗ ಪ್ರತಿ ಮನೆಯಲ್ಲೂ ಇರಲಿ ಎನ್ನುವ ಆಶಯದೊಂದಿಗೆ ಈ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಶಿಕ್ಷಕರಾದ ಶಿವಮ್ಮ, ಉಪನ್ಯಾಸಕರಾದ ನಿಂಗಪ್ಪ ಕಂಬಳಿ, ಮುಖ್ಯೋಪಾಧ್ಯಯರಾದ ವಿಕಯಲಕ್ಷ್ಮೀ ಕೆ.ಎಂ., ಮಾರುತಿ ಕಟ್ಟಿಮನಿ, ಗೆಳೆಯರ ಬಳಗ ಗುಡಿಗ್ರಂಥಾಲಯ ನಿರ್ಮಾಣ ಮಾಡಿದ್ದಕ್ಕಾಗಿ ಈ ಐವರ ಮನೆಗೆ ತೆರಳಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಗ್ರಂಥಾಲಯ ಜಾಗೃತಿ ಸಮಿತಿ ಸಂಚಾಲಕ ಜಿ.ಎಸ್.ಗೋನಾಳ, ಜಿಲ್ಲಾ ಗ್ರಂಥಾಲಯ ಜಾಗೃತಿ ಸಮಿತಿ ಸದಸ್ಯರಾದ ಸಾವಿತ್ರಿ ಮುಜುಂದಾರ, ಫಕೀರಪ್ಪ ವಜ್ರಬಂಡಿ, ನಿವೃತ್ತ ಉಪನ್ಯಾಸಕರಾದ ಎಸ್.ಎ ರಜಪೂತ, ಉಪಪ್ರಾಂಶುಪಾಲರಾದ ಮಂಜುನಾಥ ಚಿತ್ರಗಾರ ಸೇರಿದಂತೆ ಮತ್ತಿತರರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್