
ಕೊಪ್ಪಳ, 03 ಜೂನ್ (ಹಿ.ಸ.) :
ಆ್ಯಂಕರ್ : ನಗರಸಭೆ ಮುಂದೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ 216ನೇ ದಿನದ ಧರಣಿ ಯಶಸ್ವಿಯಾಯಿತು.
ಜಿಲ್ಲಾ ಕೇಂದ್ರ ಪಕ್ಕದಲ್ಲಿ ಬಲ್ಡೋಟ ಸಮೂಹದ ಬಿ.ಎಸ್.ಪಿ.ಎಲ್ ಕಂಪನಿ ರಾಜಧಾನಿಯಲ್ಲಿ ದಿ: 14.02.2025ರಂದು ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 54 ಸಾವಿರ ಕೋಟಿ ಹೂಡಿಕೆಯಲ್ಲಿ ಇಂಟಿಗ್ರೆಟೆಡ್ ಸ್ಟೀಲ್, ಕಲ್ಲಿದ್ದಲು ಸುಟ್ಟು ವಿದ್ಯುತ್ ಮತ್ತು ಕಚ್ಚಾ ಡಾಂಬರು ತಯಾರಿಸುವ ಬೃಹತ್ ಕಾರ್ಖಾನೆ ಘಟಕ ಸ್ಥಾಪನೆ ಮಾಡಲು ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿತು. ಈ ಹೂಡಿಕೆ ಕುರಿತು ಎಚ್ಚೆತ್ತುಕೊ0ಡ ಗವಿಶ್ರೀಗಳು ಫೆ. 24, 2025ರಂದು ನಗರ ಬಂದ್ ಕರೆ ಮಾಡಿ, ಹತ್ತಾರು ಸಾವಿರ ಜನರು, ಸರ್ವ ಧರ್ಮದ ಧರ್ಮಾಧಿಕಾರಿಗಳು, ಪಕ್ಷಾತೀತವಾಗಿ ವೇದಿಕೆ ಮೇಲಿದ್ದ ಎಲ್ಲಾ ಜನಪ್ರತಿನಿಧಿಗಳ ಸಮಕ್ಷಮದಲ್ಲಿ ಧರ್ಮಾದೇಶ ಮಾಡಿ, ಅವಳಿ ನಗರ ಮತ್ತು ಸುತ್ತಲಿನ ಹಳ್ಳಿಗಳ ಜನರ ಆರೋಗ್ಯದ ಮೇಲೆ ಆಗುವ ಭವಿಷ್ಯದ ದುಷ್ಪರಿಣಾಮ ತಡೆಯಲು ಈ ಒಡಂಬಡಿಕೆ ರದ್ದುಗೊಳಿಸಿದ ಆದೇಶ ಪತ್ರವನ್ನು ಸರ್ಕಾರದಿಂದ ಇಲ್ಲಿನ ಜನಪ್ರತಿನಿಧಿಗಳು ತರಬೇಕೆಂದು ಹೇಳಿದ್ದನ್ನು ರಾಜಕಾರಣಿಗಳು ಇದುವರೆಗೆ ತಂದಿಲ್ಲ. ಈ ಆದೇಶ ಪತ್ರ ತರಬೇಕೆಂದು, ನಗರದ ಪೂರ್ವ ಭಾಗದಲ್ಲಿ ಬಲ್ಡೋಟ ಎಂಎಸ್ಪಿಎಲ್ ಪೆಲ್ಲೆಟ್ ಘಟಕ 2011ರಿಂದ ಆರಂಭವಾಗಿದ್ದು, ಇದರ ಕಂದು ಧೂಳು, ಹಾರುಬೂದಿ ನಗರದ ಅರ್ಧ ಭಾಗ ಬಾಧಿಸುತ್ತಿದೆ. ನಗರದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತಿದೆ. ಈ ಘಟಕ ಬಂದ್ ಮಾಡಿ ಜನರ ಆರೋಗ್ಯ ಕಾಪಾಡಬೇಕೆಂದು, ಬಲ್ಡೋಟ ಕಂಪನಿ ಬಸಾಪುರ ಗ್ರಾಮದ ಕೆರೆಯನ್ನು ಅತಿಕ್ರಮಣದಿಂದ ವಶಪಡಿಸಿಕೊಂಡು, ಕೆರೆಯ ಸುತ್ತ ಹಾಕಿದ ಕಾಂಪೌಂಡ್ ತೆರವು ಮಾಡಿ ಜಾನುವಾರು ನೀರು ಕುಡಿಯಲು ಅವಕಾಶ ಮಾಡಿಕೊಡಬೇಕೆಂದು, ತುಂಗಭದ್ರಾ ನೀರು ವಿಷಗೊಳಿಸುತ್ತಿರುವ ಮಾಲಿನ್ಯಕಾರಿ ಕಾರ್ಖಾನೆಗಳನ್ನು ಮುಚ್ಚಬೇಕೆಂದು, ಹಿರೇಬಗನಾಳ, ಅಲ್ಲಾನಗರ ಪಕ್ಕದ ಸ್ಪಾಂಜ್ ಐರನ್ ಕಾರ್ಖಾನೆಗಳನ್ನು ಕೇಂದ್ರ ಪರಿಸರ ಇಲಾಖೆ ವರದಿಯ ಶಿಫಾರಸಿನಂತೆ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು, ಕಾರ್ಖಾನೆ ಧೂಳು ಬಾಧಿತ 22 ಹಳ್ಳಿಗಳ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು, ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎ.ಐ.ಐ.ಎಂ.ಎಸ್) ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ) ಈ ಸ್ವಾಯತ್ತ ಸಂಸ್ಥೆಗಳಿಂದ ಜನರ ಆರೋಗ್ಯ ಮತ್ತು ಪರಿಸರ ಹಾನಿಯ ಸಮೀಕ್ಷೆ ನಡೆಸಬೇಕೆಂದು ಸರ್ಕಾರವನ್ನು ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಹಿರೇಬಗನಾಳ, ಅಲ್ಲಾನಗರ ಹತ್ತಿರ ಮಾಲಿನ್ಯ ಮಾಡುವ ಸ್ಪಾಂಜ್ ಐರನ್ 5 ಕಾರ್ಖಾನೆಗಳಿಗೆ ಮುಚ್ಚುವ ಆದೇಶ ಮಾಡಿದ್ದರ ಪೈಕಿ ಮೂರು ಕಾರ್ಖಾನೆಗಳಿಗೆ ಇದುವರೆಗೆ ಬೀಗಮುದ್ರೆ ಮಾಡಿಲ್ಲ. ಒಂಬತ್ತು ಕಾರ್ಖಾನೆಗಳಿಗೆ ಪ್ರಸ್ತಾಪಿಸಿದ ಮುಚ್ಚುವ ಆದೇಶದಂತೆ ಕ್ರಮವಹಿಸಿ ಶಾಶ್ವತವಾಗಿ ಬೀಗಮುದ್ರೆ ಹಾಕಬೇಕು ಎಂದು ಧರಣಿ ಆಗ್ರಹಿಸುತ್ತದೆ.
ಧರಣಿಯಲ್ಲಿ ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ರಾಜಶೇಖರ ಏಳುಬಾವಿ, ಗಂಂಗಾಧರ ಖಾನಾಪುರ, ಇಂಜಿನಿಯರ್ ವಿನಯ ಸಜ್ಜನ, ಉಮೇಶ ಗಣಪಾ ಕುಣಿಕೇರಿ, ಶಿವಾನಂದಯ್ಯ ಬೀಳಗಿಮಠ, ಮಖಬುಲ್ ರಾಯಚೂರು, ಮಹಾದೇವಪ್ಪ ಮಾವಿನಮಡು, ಬಸವರಾಜಪ್ಪ ಶೆಟ್ಟರ್, ಶಿವಪ್ಪ ಹಲಗೇರಿ, ಗಂಗಮ್ಮ ಕುರುಗೋಡು ಪಾಲ್ಗೊಂಡರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್