ಬಳ್ಳಾರಿ ಜಿಲ್ಲೆಯ 11 ಸೂಕ್ಷ್ಮ ಪ್ರದೇಶಗಳಲ್ಲಿ ಸಾರ್ವಜನಿಕ ಮೊಹರಂ ಆಚರಣೆ ನಿಷೇಧ
ಹಾಕುವುದು
Ban on Muharram celebrations


ಬಳ್ಳಾರಿ, 17 ಜೂನ್ (ಹಿ.ಸ.) :

ಆ್ಯಂಕರ್ : ಜಿಲ್ಲೆಯ ನಾನಾ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ 2026ರ ಮೊಹರಂ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ಆದೇಶ ನೀಡಿದ್ದಾರೆ.

ಜಿಲ್ಲಾ ಪೊಲೀಸ್, ಅಧೀಕ್ಷಕರು ನೀಡಿದ ವರದಿಯನ್ವಯ, ಹಳೆಯ ವೈಷಮ್ಯಗಳ ಕಾರಣದಿಂದಾಗಿ ಹಬ್ಬದ ಸಂದರ್ಭದಲ್ಲಿ ಶಾಂತಿ ಭಂಗ ಉಂಟಾಗುವ ಸಾಧ್ಯತೆಗಳಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೂ.17 ರಿಂದ 26 ರವರೆಗೆ ಒಟ್ಟು 10 ದಿನಗಳ ಕಾಲ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ನಿಷೇಧಾಜ್ಞೆ ಅನ್ವಯವಾಗುವ 11 ಗ್ರಾಮಗಳ ವಿವರ :

ಜಿಲ್ಲೆಯ ಒಟ್ಟು 7 ಪೊಲೀಸ್, ಠಾಣಾ ವ್ಯಾಪ್ತಿಯ 11 ಸೂಕ್ಷ್ಮ ಗ್ರಾಮ/ಪ್ರದೇಶಗಳಲ್ಲಿ ಜನರು ಗುಂಪು ಸೇರುವುದು, ಮೆರವಣಿಗೆ ನಡೆಸುವುದು ಮತ್ತು ಪಂಜಾಗಳನ್ನು ಪ್ರತಿಷ್ಠಾಪಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಸಿರುಗುಪ್ಪ ವ್ಯಾಪ್ತಿ (04 ಗ್ರಾಮಗಳು) : ನಾಡಂಗ, ಕೆ.ಸೂಗೂರು, ದೇಶನೂರು, ಅಲಬನೂರು.

ಪಿ.ಡಿ. ಹಳ್ಳಿ ವ್ಯಾಪ್ತಿ (01 ಗ್ರಾಮ): ಅಸುಂಡಿ.

ಕಂಪ್ಲಿ ವ್ಯಾಪ್ತಿ (02 ಗ್ರಾಮಗಳು): ನಂ.15-ಗೋನಾಳ್, ನಂ-10 ಮುದ್ದಾಪುರ.

ಬಳ್ಳಾರಿ ಗಾಂಧಿನಗರ ವ್ಯಾಪ್ತಿ (01 ಸ್ಥಳ) :

ಮಹಾನಂದಿಕೊಟ್ಟಂ ಒಳಗಡೆ ತಾಳೂರು ರಸ್ತೆಯ ಕನ್ನಡ ನಗರ ಮುಖ್ಯರಸ್ತೆ (ನ್ಯಾಯಾಧೀಶರ ವಸತಿ ಗೃಹ ಕಾಂಪೌಂಡ್ ಪಕ್ಕದಲ್ಲಿ).

ಕುಡತಿನಿ ವ್ಯಾಪ್ತಿ (01 ಗ್ರಾಮ) : ಹೊನ್ನಳ್ಳಿ.

ತೋರಣಗಲ್ಲು ವ್ಯಾಪ್ತಿ (01 ಗ್ರಾಮ): ವಿ.ನಾಗಲಾಪುರ.

ಬಳ್ಳಾರಿ ಗ್ರಾಮೀಣ ವ್ಯಾಪ್ತಿ (01 ಗ್ರಾಮ): ಕೊಳಗಲ್ಲು ಗ್ರಾಮ.

ಕರ್ನಾಟಕ ಪೊಲೀಸ್, ಕಾಯ್ದೆ 1963 ರ ಕಲಂ 35 (ಎ) (ಬಿ) (ಡಿ) (ಇ) ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾಧಿಕಾರಿಯವರು ಈ ಕೆಳಗಿನ ನಿಯಮಗಳನ್ನು ಜಾರಿಗೊಳಿಸಿದ್ದಾರೆ.

ಶಸ್ತ್ರಾಸ್ತ್ರಾಗಳ ನಿಷೇಧ : ಶಸ್ತ್ರ, ಬಡಿಗೆ, ಬರ್ಚಿ, ಗದೆ, ಬಂದೂಕು, ಚೂರಿ, ಕೋಲು, ಲಾಠಿ ಅಥವಾ ಶರೀರಕ್ಕೆ ಗಾಯ ಮಾಡಬಹುದಾದ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ.

ಯಾವುದೇ ತರಹದ ದಾಹಕ (ನಾಶಕಾರಿ) ಪದಾರ್ಥ ಇಲ್ಲವೇ ಸ್ಫೋಟಕ ವಸ್ತುಗಳನ್ನು ಸಾಗಿಸುವಂತಿಲ್ಲ. ಯಾವುದೇ ವ್ಯಕ್ತಿಗಳ ಭಾವಚಿತ್ರಗಳನ್ನು ಅವಮಾನಕಾರಿಯಾದ ರೀತಿಯಲ್ಲಿ ಪ್ರದರ್ಶಿಸುವಂತಿಲ್ಲ.

ಬಹಿರಂಗವಾಗಿ ಪ್ರಚೋದನಾಕಾರಿ ಘೋಷಣೆ ಹಾಕುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ಸಭ್ಯತೆ ಅಥವಾ ನೀತಿಯನ್ನು ಉಲ್ಲಂಘಿಸುವ ಯಾವುದೇ ಸನ್ನೆ ಅಥವಾ ವಸ್ತುಗಳ ಪ್ರದರ್ಶನವನ್ನು ನಿಷೇಧಿಸಲಾಗಿದೆ.

ಗುಂಪುಗೂಡಿ ಸಾರ್ವಜನಿಕವಾಗಿ ಮೆರವಣಿಗೆ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಈ ಆದೇಶವನ್ನು ಉಲ್ಲಂಘಿಸಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ನಿಯಮ ಮೀರಿ ಬಳಸುವ ವಸ್ತುಗಳನ್ನು ಪೊಲೀಸ್, ಅಧಿಕಾರಿಗಳು ಜಪ್ತಿ ಮಾಡಿ ಸರ್ಕಾರಕ್ಕೆ ಜಮಾ ಮಾಡಲಿದ್ದಾರೆ ಎಂದು ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande