
ಕೊಲಾರ, ೧ ಜೂನ್ (ಹಿ.ಸ.):
ಆಂಕರ್ : ಕೆರೆ ಅಭಿವೃದ್ಧಿ, ಮಕ್ಕಳ ಶಿಕ್ಷಣ, ಪೌಷ್ಠಿಕ ಆಹಾರ, ಪರಿಸರ ಸಂರಕ್ಷಣೆ ಮೊದಲಾದ ಕ್ಷೇತ್ರಗಳಲ್ಲಿ ನಾಲ್ಕೈದು ದಶಕಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ ಗ್ರಾಮವಿಕಾಸ ಸಂಸ್ಥೆಯ ಮುಖ್ಯಸ್ಥರಾ ಎಂ.ವಿ.ಎನ್.ರಾವ್ ಸದಾ ನೆನಪಿನಲ್ಲಿ ಉಳಿಯಲಿದ್ದಾರೆ ಎಂದು ಸಮಾಜ ಸೇವಕ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.
ಕೋಲಾರ ನಗರದಲ್ಲಿ ನುಡಿನಮನದಲ್ಲಿ ಮಾತನಾಡಿದ ಅವರು ಗ್ರಾಮವಿಕಾಸ ಸಂಸ್ಥೆಯು ನೂರಾರು ಯುವಕ, ಯುವತಿಯರಿಗೆ ಮಾರ್ಗದರ್ಶನ ನೀಡಿ ಸ್ವಾವಲಂಬಿಗಳನ್ನಾಗಿಸಿದೆ. ಹತ್ತಾರು ಸಂಸ್ಥೆಗಳು ಬೆಳೆಯಲು ಅವರು ನೆರವಾಗಿದ್ದರು. ಅವರ ಆಶಯಗಳನ್ನು ಮುಂದಕ್ಕೆ ತೆಗೆದುಕೊಂಡುಹೋಗಲು ಎಲ್ಲರು ಶ್ರಮಿಸಬೇಕೆಂದು ವಿನಂತಿಸಿದರು.
ಇದೇ ವೇಳೆ ಸಂಸ್ಥೆಯ ಮುಖ್ಯಸ್ಥರಾದ ಡಾ. ಅಕ್ಕೈ ಪದ್ಮಶಾಲಿ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರ ಬಗೆಗೂ ಅಪಾರ ಗೌರವ ಹೊಂದಿದ್ದ ರಾವ್ ಅವರು ಮಂಗಳಮುಖಿಯರ ಸಹಾಯಕ್ಕೆ ನಿಂತಿದ್ದರು. ಟ್ರಾನ್ಸ್ ಜೆಂಡರ್ ಗಾಗಿ ಕೆಲಸ ಮಾಡುವವರು ಬಹಳ ಕಡಿಮೆ. ರಾವ್ ಅವರು ನಮ್ಮ ‘ಒಂದೆಡೆ’ ಸಂಸ್ಥೆಗೂ ಮಾರ್ಗದರ್ಶನ ನೀಡಿ ಬೆಳೆಸಿದ್ದಾರೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಒಕ್ಕೂಟದ ಅಧ್ಯಕ್ಷರಾದ ಕಾಡುಶೆಟ್ಟಿಹಳ್ಳಿ ಸತೀಶ್ ಅವರು ಮಾತನಾಡಿ, ಹಲವರು ಬದುಕಿದ್ದಾಗ ಮಾತ್ರ ನೆನಪಿನಲ್ಲಿರುತ್ತಾರೆ, ಕೆಲವರಷ್ಟೇ ಸತ್ತ ಮೇಲೂ ಸ್ಮರಣೆಯಲ್ಲಿರುತ್ತಾರೆ. ಒಬ್ಬ ವ್ಯಕ್ತಿ ಇತರರಿಗಾಗಿ ಮಿಡಿದರಷ್ಟೇ ಸ್ಮರಣೆಯಲ್ಲಿ ಉಳಿಯುವುದು ಎಂದು ಹೇಳಿದರು.
ಕುಟುಂಬಕ್ಕಿಂತ ಸಮಾಜವನ್ನು ಅತಿಯಾಗಿ ಹಚ್ಚಿಕೊಂಡಿದ್ದರು. ಗ್ರಾಮೀಣಾಭಿವೃದ್ಧಿಗೆ ಅವರ ಕಂಡ ಕನಸುಗಳಿಗೆ ಮಿತಿಯೇ ಇರಲಿಲ್ಲ. ಅವರ ಕನಸುಗಳನ್ನು ಈಡೇರಿಸಲು ಎಲ್ಲರೂ ಸಹಕರಿಸಿ ಎಂದು ರಾವ್ ಅವರ ಪತ್ನಿ ಹಾಗೂ ಗ್ರಾಮೀಣ ಮಹಿಳಾ ಒಕ್ಕೂಟದ ಆಡಳಿತಾಧಿಕಾರಿ ಎಂ.ಎಸ್.ಜಯಲಕ್ಷ್ಮಿ ರಾವ್ ವಿನಂತಿಸಿದರು.
ಮೈಸೂರಿನ ಕ್ರೆಡಿಟ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥರಾದ ಡಾ.ವರ್ಷ ಅವರು ಮಾತನಾಡಿ ರೋಟರಿ ಬಲಗೊಳಿಸಲು ರಾವ್ ಅವರ ಸೇವೆಯೂ ಇದೆ ಎಂದರು. ‘ಮೈಸೂರ್ ಸೇವಾ’ ಹೆಸರಿನ ರೋಟರಿ ಕ್ಲಬ್ ಹುಟ್ಟಿಕೊಳ್ಳಲು ಅವರೇ ಕಾರಣ. ರೋಟರಿ ಕೋಲಾರ್ ಲೇಕ್ ಸೈಡ್ ಸಹಾಯದಿಂದ ಹಲವು ಹೊಸ ರೋಟರಿಗಳು ಹುಟ್ಟಿವೆ, ಕೆಲವು ಬಲವರ್ಧನೆಗೊಂಡಿವೆ ಎಂದು ಅವರು ಹೇಳಿದರು.
ಹುಟ್ಟು ಸಾವುಗಳ ನಡುವಿನ ಸಾಧನೆ ಮಾತ್ರ ನೆನಪಿನಲ್ಲಿರುತ್ತದೆ. ಎಂ.ವಿ.ಎನ್.ರಾವ್ ಅವರು ಸಾಮಾನ್ಯ ವ್ಯಕ್ತಿಯಾಗಿ ಹಳ್ಳಿಯಲ್ಲಿಯೇ ಉಳಿದು ದೊಡ್ಡ ಕೆಲಸಗಳನ್ನು ಮಾಡಿದರು. ಅವರ ಸಾವು ಸಾಮಾಜಿಕ ಕ್ಷೇತ್ರಕ್ಕೆ ದೊಡ್ಡ ನಷ್ಟ ಎಂದು ಫೇವರ್ಸ್ ಸಂಸ್ಥೆಯ ಮಾಜಿ ಆಧ್ಯಕ್ಷರಾದ ಆಂಜನೇಯರೆಡ್ಡಿ ಹೇಳಿದರು.
ಕುವೆಂಪು ಪಾರ್ಕಿನಲ್ಲಿ ಗಿಡ ನೆಟ್ಟು ನುಡಿನಮನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. ರಾವ್ ಅವರ ಬದುಕು ಮತ್ತು ಸಾಧನೆ ಕುರಿತು ಸಾಕ್ಷ ಚಿತ್ರ ಮತ್ತು ಪೋಟೊ ಪ್ರದರ್ಶನ ಏರ್ಪಡಿಸಲಾಗಿತ್ತು. ರಾಮಕೃಷ್ಣೇಗೌಡ ಎಚ್.ಬಿ, ಗಂಗಾಧರ ಸ್ವಾಮಿ, ಪಂಡಿತ್ ಮುನಿವೆಂಕಟಪ್ಪ, ಟಿ.ವಿಜಯಕುಮಾರ್, ವಾರಿಧಿ ಮಂಜುನಾಥರೆಡ್ಡಿ, ಸುದೀಪ್, ರೋಟರಿ ಲೇಕ್ ಸೈಡ್ ಚೌಡಪ್ಪ, ರವಿ, ಹರಿಪ್ರಸಾದ್, ಹಾಡುಗಾರ ಮುನಿರೆಡ್ಡಿ, ಮಂಜುಳ ಕೊಂಡರಾಜನಹಳ್ಳಿ, ಈ ನೆಲ ಈ ಜಲ ವೆಂಕಟಾಚಲಪತಿ, ಹೂವಳ್ಳಿ ನಾಗರಾಜ್, ಕೃಷ್ಣೇಗೌಡ, ಆನೇಕಲ್ ಸಿದ್ಧರಾಜು, ಆಗಸ್ಟೀನ್, ಪೆತ್ತಾಂಡ್ಲಹಳ್ಳಿ ಶಂಕರ್, ಗಮನ ಶಾಂತಮ್ಮ, ಗಿರಿಜಾ ಎಂಎಸ್, ವಸಂತಿ, ಮಂಜುಕನ್ನಿಕಾ, ರಾಧಾಮಣಿ, ಗೌರಿಬಿದನೂರಿನ ಎಸ್.ಎಸ್ ರೆಡ್ಡಿ, ಸುದೀಪ್, ಮಲ್ಲಮ್ಮ, ರಾಜ ಮೈಸೂರು, ರವೀಂದ್ರನಾಥ್, ಅಶೋಕ್, ವಕೀಲ ಸತೀಶ್, ಮಾಲೂರಿನ ಸೂರ್ಯನಾರಾಯಣ, ಡಾ.ಶಿವಪ್ಪ ಅರಿವು, ಅಬ್ದಲ್ ನವೀದ್, ಹರೀಶ್ ನುಡಿನಮನ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್