ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಶಾಸಕ ಕೊತ್ತೂರು ಮಂಜುನಾಥ್ ಮನವಿ
ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಶಾಸಕ ಕೊತ್ತೂರು ಮಂಜುನಾಥ್ ಮನವಿ
ಚಿತ್ರ ; ಕೋಲಾರ ತಾಲೂಕಿನ ನರಸಾಪುರದಲ್ಲಿ ಸೋಮವಾರ ಕರ್ನಾಟಕ ಪಬ್ಲಿಕ್ ಶಾಲೆಯಶಾಲಾ ಪ್ರಾರಂಭೋತ್ಸವದಲ್ಲಿ ಭಾಗವಹಿಸಿದ್ದರು.


ಕೊಲಾರ, ೧ ಜೂನ್ (ಹಿ.ಸ.)

ಆಂಕರ್ : ಪೋಷಕರು ತಮ್ಮ ಮಕ್ಕಳಿಗೆ ಧರ್ಮಸ್ಥಳ, ತಿರುಪತಿ, ದರ್ಗಾ ಅಥವಾ ಚರ್ಚ್ಗಳಿಗಿಂತಲೂ ತಾವು ಓದುವ ಶಾಲೆಯೇ ನಿಜವಾದ ದೇವಸ್ಥಾನ, ಪುಸ್ತಕವೇ ತಾಯಿ ಮತ್ತು ಪೆನ್ನೇ ತಂದೆ ಎಂಬುದನ್ನು ಮೊದಲು ಕಲಿಸಿ ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಉದ್ಯೋಗದಲ್ಲಿ ವಿಶೇಷ ಮೀಸಲಾತಿಯು ಇರಲಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಪೋಷಕರಿಗೆ ತಿಳಿಸಿದರು.

ಕೋಲಾರ ತಾಲೂಕಿನ ನರಸಾಪುರದಲ್ಲಿ ಸೋಮವಾರ ಕರ್ನಾಟಕ ಪಬ್ಲಿಕ್ ಶಾಲೆಯಶಾಲಾ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು ಖಾಸಗಿ ಶಾಲೆಗಳಲ್ಲಿ ಕೇವಲ ಎಸಿ, ಸುಂದರ ಕೊಠಡಿಗಳಿರಬಹುದು. ಆದರೆ ಸರ್ಕಾರಿ ಶಾಲೆಯಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಓದುವ ಮಕ್ಕಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ವಿಶೇಷ ಮೀಸಲಾತಿ ಸಿಗಲಿದೆ. ಈ ಸೌಲಭ್ಯ ಖಾಸಗಿ ಶಾಲೆಯ ಮಕ್ಕಳಿಗೆ ಸಿಗುವುದಿಲ್ಲ. ಪ್ರತಿದಿನ ನನ್ನ ಕಚೇರಿಗೆ ನೂರಾರು ಪೋಷಕರು ಖಾಸಗಿ ಶಾಲೆಯ ಫೀಸ್ ಕಟ್ಟಲಾಗದೆ ನೆರವಿಗಾಗಿ ಬರುತ್ತಾರೆ. ಸರ್ಕಾರದಿಂದ ಬರುವ ನನ್ನ ಸಂಬಳ ಹಾಗೂ ಗೌರವಧನದ ಒಂದು ರೂಪಾಯಿಯನ್ನೂ ನಾನು ಮನೆಗೆ ತಗೆದುಕೊಂಡು ಹೋಗದೆ, ಇಂತಹ ಬಡ ಮಕ್ಕಳ ಫೀಸ್ ಹಾಗೂ ಆಸ್ಪತ್ರೆ ಖರ್ಚಿಗಾಗಿಯೇ ಚೆಕ್ ಮೂಲಕ ವಿತರಿಸಿ ಬಿಡುತ್ತೇನೆ ಪೋಷಕರು ಖಾಸಗಿ ಶಾಲೆಯ ಭಾರ ಹೊರುವ ಬದಲು ಸರ್ಕಾರಿ ಶಾಲೆಗಳ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ವಿದ್ಯಾಭ್ಯಾಸ ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ ದಾನಿಗಳು ಸದಾ ಹಗಲಿರಳು ಶ್ರಮಿಸುತ್ತಾರೆ. ಸರ್ಕಾರಿ ಶಾಲೆಯ ಮಕ್ಕಳು ತಾವೇನೂ ಖಾಸಗಿ ಶಾಲೆಗಿಂತ ಕಮ್ಮಿ ಇಲ್ಲ ಎನ್ನುವ ಆತ್ಮವಿಶ್ವಾಸದಿಂದ ಓದಬೇಕು ಎಂಬ ಒಂದೇ ಉದ್ದೇಶದಿಂದ ತಮ್ಮ ಸ್ವಂತ ಖರ್ಚಿನಲ್ಲಿ ಇಡೀ ಶಾಲೆಗೆ ಸತ್ಯನಾರಾಯಣ ಜ್ಯೂವೆಲರ್ಸ್ ಮಾಲೀಕ ವೆಂಕಟೇಶ್ ಸುಂದರವಾದ ಬಣ್ಣ ಬಳಿಸಿಕೊಟ್ಟಿದ್ದಾರೆ. ಅವರ ಈ ಜನಪರ ಸೇವೆಗೆ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಇದೇ ವೇಳೆ ನರಸಾಪುರ ಶಾಲೆಯ ಕೊಠಡಿಗಳ ಕೊರತೆ, ಕಾಂಪೌಂಡ್ ಹಾಗೂ ಆಟದ ಮೈದಾನದ ಅಭಿವೃದ್ಧಿ ಕುರಿತು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಕೊತ್ತೂರು ಮಂಜುನಾಥ್ ಅವರು, ನಮ್ಮ ಭಾಗದಲ್ಲಿ ಸಾಕಷ್ಟು ಕೈಗಾರಿಕೆಗಳಿದ್ದು, ಸಿಎ???ರ್ ನಿಧಿ ಲಭ್ಯವಿದೆ. ನಾನು ಖುದ್ದಾಗಿ ಉದ್ಯಮಿಗಳೊಂದಿಗೆ ಮಾತನಾಡಿ ಶೀಘ್ರದಲ್ಲೇ ಶಾಲೆಗೆ ಅಗತ್ಯವಿರುವ ಹೆಚ್ಚುವರಿ ಕೊಠಡಿ ಹಾಗೂ ಮೈದಾನದ ಕಾಮಗಾರಿಯನ್ನು ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳೇ ನಾಳಿನ ದೇಶದ ಭವಿಷ್ಯ. ಈ ಮಕ್ಕಳಲ್ಲಿಯೇ ಮುಂದಿನ ಮಹಾತ್ಮಾ ಗಾಂಧಿ, ಬಾಬಾಸಾಹೇಬ್ ಅಂಬೇಡ್ಕರ್, ಅಬ್ದುಲ್ ಕಲಾಂ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಅವರು ಮೂಡಿಬರಬೇಕು. ರಾಜಕೀಯವಾಗಿ ನಮ್ಮ ಕೋಲಾರದ ಹೆಮ್ಮೆಯ ನಾಯಕರಾದ ಕೆ.ಸಿ. ರೆಡ್ಡಿ, ಬೈರೇಗೌಡರು, ಶ್ರೀನಿವಾಸಗೌಡರು, ಟಿ. ಚನ್ನಯ್ಯ ಹಾಗೂ ಲತೀಫ್ ಸಾಬ್ ಅವರಂತಹ ಮುತ್ಸದ್ದಿ ನಾಯಕರು ಈ ಶಾಲೆಗಳಿಂದಲೇ ಸೃಷ್ಟಿಯಾಗಬೇಕು. ಮಕ್ಕಳನ್ನು ಉನ್ನತ ವಿದ್ಯಾಪ್ರೇಮಿಗಳನ್ನಾಗಿ ಮಾಡಿ ಎಂದು ಕರೆ ನೀಡಿದರು.

ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ಕೋಲಾರದ ಶಾಸಕರು ಇವತ್ತಿನ ರಾಜಕೀಯದ ಸಂದರ್ಭದಲ್ಲಿ ಬೇರೆ ಶಾಸಕರಂತೆ ದೆಹಲಿಗೆ ಹೋಗಿ ಮಂತ್ರಿಗೆ ಲಾಬಿ ಮಾಡಲಿಲ್ಲ ಸರ್ಕಾರಿ ಶಾಲೆಗಳ ಬಗ್ಗೆ ಇರುವ ಕಾಳಜಿಗೆ ಬಂದಿದ್ದಾರೆ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಕೆಪಿಎಸ್ ಶಾಲೆಗಳು ಸಹಕಾರಿಯಾಗಲಿವೆ ಈಗಾಗಲೇ ಕೋಲಾರ ಕ್ಷೇತ್ರದಲ್ಲಿ ಐದು ಶಾಲೆ ಮಾತ್ರ ಇದ್ದು ಮುಂದೆ ಇನ್ನೂ ಅವಶ್ಯಕತೆ ಇರುವ ಕಡೆ ಶಾಲೆ ಮಂಜೂರು ಮಾಡಲಾಗುತ್ತದೆ ಪೋಷಕರು ಖಾಸಗಿ ಶಾಲೆಗಳ ಇಂಗ್ಲಿಷ್ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು

ಈ ಸಂದರ್ಭದಲ್ಲಿ ಶೃಂಗೇರಿ ಮಾದರಿಯಲ್ಲಿ ಮಕ್ಕಳಿಂದ ಅಕ್ಷರ ಅಭ್ಯಾಸ ಮಾಡಿಸಿದರು. ವಿಧ್ಯಾರ್ಥಿಗಳಿಗೆ ನೋಟ್ ಪುಸ್ತಕ ಬ್ಯಾಗ್ ಗಳನ್ನು ದಾನಿಗಳಿಂದ ಮೂಲಕ ವಿತರಿಸಲಾಯಿತು ಬಿಇಒ ಕೆ.ಶೋಭಾ, ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು, ವೇಮಗಲ್ ನರಸಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ,ಕೆಪಿಎಸ್ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀನಿವಾಸ್, ಸತ್ಯನಾರಾಯಣ ಜ್ಯೂವೆಲರ್ಸ್ ಮಾಲೀಕ ಬಿ.ಎಸ್ ವೆಂಕಟೇಶ್, ಮುಖ್ಯೋಪಾಧ್ಯಾಯರಾದ ಗೋಪಿನಾಥ್, ಕೆ.ಎಸ್ ಜಗನ್ನಾಥ್, ಸೇರಿದಂತೆ ಕಾಂಗ್ರೆಸ್ ಮುಖಂಡರು ವಿಧ್ಯಾರ್ಥಿಗಳು ಪೋಷಕರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande