




ಸಂಡೂರು, 23 ಮೇ (ಹಿ.ಸ.) :
ಆ್ಯಂಕರ್ : ತಾಲೂಕಿನ ಸರಕಾರಿ ಐಟಿಐ ಕಾಲೇಜಿನಲ್ಲಿ ಜೆ ಎಸ್ ಡಬ್ಲ್ಯೂ ಫೌಂಡೇಶನ್ ವತಿಯಿಂದ ಗ್ರಾಮೀಣ ಯುವಕರಿಗಾಗಿ ವಿದ್ಯುತ್ ತಂತ್ರಜ್ಞ ತರಬೇತಿ ಕಾರ್ಯಕ್ರಮವನ್ನು ಕಳೆದ ಡಿಸೆಂಬರ್ ನಲ್ಲಿ ಪ್ರಾರಂಭಿಸಿತ್ತು.
ಪ್ರಸ್ತುತದಲ್ಲಿ ಮೊದಲ ಹಂತದ ತರಬೇತಿ ಪೂರ್ಣಗೊಂಡಿದ್ದು, ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಉದ್ಯೋಗ ಪತ್ರ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ ಜೆ ಎಸ್ ಡಬ್ಲ್ಯೂ ಗ್ರಾಮೀಣ ಯುವಕರಿಗೆ ಉತ್ತಮ ಗುಣಮಟ್ಟದ ತರಬೇತಿ ಕೇಂದ್ರ ಸ್ಥಾಪಿಸಿ ತರಬೇತಿ ನೀಡಿ ಇಂದು ಉದ್ಯೋಗ ಪ್ರಮಾಣ ಪತ್ರ ವಿತರಿಸುತ್ತಿರುವುದು ಶ್ಲಾಘನೀಯ, ಮತ್ತು ಯುವಕರು ಕೌಶಲ್ಯವಂತರಾಗಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಜೆ ಎಸ್ ಡಬ್ಲ್ಯೂ ಫೌಂಡೇಶನ್ ದಕ್ಷಿಣ ವಿಭಾಗದ ಮುಖ್ಯಸ್ಥ ಪೆದ್ದಣ್ಣ ಬೀಡಲಾ ಮಾತನಾಡಿ “ಇಲೆಕ್ಟ್ರಿಕಲ್ ಟೆಕ್ನಿಷಿಯನ್ ತರಬೇತಿ ಕಾರ್ಯಕ್ರಮವು 3 ತಿಂಗಳುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇದರಲ್ಲಿ ಒಟ್ಟು 120 ವಿದ್ಯಾರ್ಥಿಗಳು ದಾಖಲಾಗಿ ತರಬೇತಿ ಪಡೆದು ಪ್ರಮಾಣಪತ್ರಗಳನ್ನು ಪಡೆದಿದ್ದಾರೆ. ಇವರಲ್ಲಿ 66 ವಿದ್ಯಾರ್ಥಿಗಳಿಗೆ ಸ್ನಾಯ್ದರ್ ಎಲೆಕ್ಟ್ರಿಕಲ್, ಟೊಯೋಟಾ ಮತ್ತು ಸ್ಟೋರ್ ಕ್ರಾಫ್ಟ್ ಬೆಂಗಳೂರು ಸಂಸ್ಥೆಗಳಲ್ಲಿ ಉದ್ಯೋಗ ದೊರೆತಿದೆ. ಅವರಿಗೆ ಸರಾಸರಿ ₹18,000 ವೇತನ ದೊರೆಯುತ್ತಿದೆ. ಈ ಮೂಲಕ ಜೆಎಸ್ಡಬ್ಲ್ಯೂ ಫೌಂಡೇಶನ್ ಕೈಗಾರಿಕಾ ಕೌಶಲ್ಯಾಭಿವೃದ್ಧಿಯನ್ನು ಹೆಚ್ಚಿಸಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ,” ಎಂದು ತಿಳಿಸಿದರು.
ಜೆ ಎಸ್ ಡಬ್ಲ್ಯೂ ಸ್ಟೀಲ್ ಲಿಮಿಟೆಡ್ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮಯೂರೇಶ್ ಬಾಪತ್ ಮಾತಾಡಿ “ಜೆ ಎಸ್ ಡಬ್ಲ್ಯೂ ಯುವಕರಲ್ಲಿ ಕೌಶಲ್ಯ, ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯನ್ನು ಬೆಳೆಸುವ ಮೂಲಕ, ಕೈಗಾರಿಕೆಗಳ ಅಗತ್ಯಗಳಿಗೆ ತಕ್ಕ ಪರಿಣತ ಮಾನವ ಸಂಪನ್ಮೂಲವನ್ನು ಸಿದ್ಧಗೊಳಿಸುತ್ತಿದೆ. ಈ ಕಾರ್ಯಕ್ರಮಗಳು ಗ್ರಾಮೀಣ ಯುವಕರನ್ನು ಆರ್ಥಿಕವಾಗಿ ಸದೃಢ ಹಾಗೂ ಸ್ವಾವಲಂಬಿ ನಾಗರಿಕರನ್ನಾಗಿ ರೂಪಿಸುವ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತಿವೆ,” ಎಂದರು
ಕಾರ್ಯಕ್ರಮದಲ್ಲಿ ಜೆ ಎಸ್ ಡಬ್ಲ್ಯೂ ಎನರ್ಜಿ ಲಿಮಿಟೆಡ್ ನ ಶ್ರೀಕಾಂತ ಹೆಗಡೆ, ಸಿ ಎಸ್ ಆರ್ ವಿಭಾಗದ ಶ್ರೇಷ್ಠ ಮತ್ತು ಅನುಷ್ಠಾನ ಸಂಸ್ಥೆ ಗ್ರಾಮ ವಿಕಾಸ ಸೊಸೈಟಿಯ ಸಚಿನ್ ಅಳವಟಗಿ ಮತ್ತು ಕಾಲೇಜಿನ ಆಡಳಿತಾಧಿಕಾರಿ ಶಾಂತಪ್ಪ ಹೆಚ್, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್