
ಧಾರವಾಡ, 23 ಮೇ (ಹಿ.ಸ.) :
ಆ್ಯಂಕರ್ : ಮಕ್ಕಳಿಗೆ ಅತ್ಯುತ್ತಮ ಮತ್ತು ವಿಶೇಷ ಹೃದಯ ಆರೈಕೆ ಸೇವೆ ಒದಗಿಸುವ ಉದ್ದೇಶದಿಂದ ಎಸ್ಡಿಎಂ ನಾರಾಯಣ ಹಾರ್ಟ್ ಸೆಂಟರ್ನಲ್ಲಿ ‘ಲಿಟಲ್ ಹಾರ್ಟ್ ಕ್ಲಿನಿಕ್’ ಆರಂಭಿಸಲಾಗಿದೆ.
ಮಕ್ಕಳಲ್ಲಿ ಹುಟ್ಟಿನಿಂದಲೇ ಕಂಡುಬರುವ ಹೃದಯ ಸಂಬಂಧಿ ತೊಂದರೆಗಳು ಹಾಗೂ ಇತರ ಹೃದ್ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ವಿಶೇಷ ಕ್ಲಿನಿಕ್ ಕಾರ್ಯಾರಂಭ ಮಾಡಿದೆ.
ಪ್ರತಿ ಗುರುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕ್ಲಿನಿಕ್ ಕಾರ್ಯನಿರ್ವಹಿಸಲಿದ್ದು, ಮಕ್ಕಳಿಗೆ ಉಚಿತ ನೋಂದಣಿ, ಉಚಿತ ಎಕೋ ಪರೀಕ್ಷೆ ಹಾಗೂ ಮಕ್ಕಳ ಹೃದ್ರೋಗ ತಜ್ಞರೊಂದಿಗೆ ಉಚಿತ ಸಮಾಲೋಚನೆ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಪ್ರಸಿದ್ಧ ಮಕ್ಕಳ ಹೃದ್ರೋಗ ತಜ್ಞ ಡಾ. ಎಂ.ಎಸ್. ರವೀಂದ್ರ ಹಾಗೂ ಕಾರ್ಡಿಯೋವಾಸ್ಕುಲರ್ ಮತ್ತು ಥೊರಾಸಿಕ್ ಸರ್ಜನ್ ಡಾ. ಸಾಯಿ ಸೂರಜ್ ಕೊಟೆರಾ ಅವರು ಕ್ಲಿನಿಕ್ನ ನೇತೃತ್ವ ವಹಿಸಲಿದ್ದಾರೆ. ಈ ನುರಿತ ವೈದ್ಯಕೀಯ ತಂಡವು ಮಕ್ಕಳ ಆರೋಗ್ಯವನ್ನು ಸಮಗ್ರವಾಗಿ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಮುಂದಿನ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ಕುರಿತು ಪೋಷಕರಿಗೆ ಸೂಕ್ತ ಮಾರ್ಗದರ್ಶನ ನೀಡಲಿದೆ.
ಮಕ್ಕಳಿಗೆ ಗುಣಮಟ್ಟದ ಹೃದಯ ಆರೈಕೆ ಸೇವೆಯನ್ನು ಕೈಗೆಟುಕುವ ದರದಲ್ಲಿ ಹಾಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಈ ಕ್ಲಿನಿಕ್ ಆರಂಭಿಸಲಾಗಿದೆ. ಇದರಿಂದ ಹುಬ್ಬಳ್ಳಿ, ಧಾರವಾಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪೋಷಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು
ಎಸ್ಡಿಎಂ ನಾರಾಯಣ ಹಾರ್ಟ್ ಸೆಂಟರ್ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.