
ಮೈಸೂರು, 26 ಮಾರ್ಚ್ (ಹಿ.ಸ.):
ಆ್ಯಂಕರ್:
ಭಾರತೀಯ ವಿಚಾರಧಾರೆ ಸಾವಿರಾರು ವರ್ಷಗಳಿಂದ ನಿರಂತರವಾಗಿ ಹರಿದು ಬರುತ್ತಿರುವ ಜ್ಞಾನಪ್ರವಾಹವಾಗಿದ್ದು, ಕಾಲಾನುಸಾರ ತನ್ನ ರೂಪವನ್ನು ಬದಲಿಸಿಕೊಂಡು ಮುಂದುವರಿಯುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಹೇಳಿದ್ದಾರೆ.
ಪ್ರಜ್ಞಾ ಪ್ರವಾಹ ಕರ್ನಾಟಕ ವತಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಏಕಾತ್ಮ ಮಾನವ ದರ್ಶನ: ಭಾರತದ ವಿಶ್ವದೃಷ್ಟಿ’ ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಎರಡನೇ ದಿನದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತೀಯ ಚಿಂತನೆ ಸಾವಿರಾರು ವರ್ಷಗಳ ನಾಗರಿಕತೆಯ ಅವಿಭಾಜ್ಯ ಅಂಗವಾಗಿದ್ದು, ಅದು ಇಂದಿಗೂ ಕಾಲಕ್ಕೆ ಅನುಗುಣವಾಗಿ ತನ್ನ ಸ್ವರೂಪವನ್ನು ರೂಪಾಂತರಗೊಳಿಸಿಕೊಂಡು ಸಾಗುತ್ತಿದೆ. ಯಾವುದೇ ತತ್ವಕ್ಕೂ ಒಂದು ಕೃತರೂಪವಿದ್ದು, ಭಾರತೀಯ ವಿಶ್ವದರ್ಶನವನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸುವುದು ಅಗತ್ಯ ಎಂದು ಅವರು ಹೇಳಿದರು.
ಸಾರ್ವಜನಿಕ ನೀತಿಗಳ ಬಗ್ಗೆ ಚರ್ಚೆಗಳು ಇಂದಿನ ಕಾಲದಲ್ಲಿ ನಡೆಯುತ್ತಿದರೂ, ಮೈಸೂರು ಸಂಸ್ಥಾನದಲ್ಲಿ ಶತಮಾನಗಳ ಹಿಂದೆ ಇಂತಹ ವಿಚಾರಗಳನ್ನು ಚಿಂತಿಸಿ ಕಾರ್ಯರೂಪಕ್ಕೆ ತಂದಿದ್ದನ್ನು ಅವರು ಉಲ್ಲೇಖಿಸಿದರು. ಪಂಡಿತ ದೀನದಯಾಳ ಉಪಾಧ್ಯಾಯರ ಏಕಾತ್ಮ ಮಾನವ ದರ್ಶನ ಮಾನವನ ಸಮಗ್ರತೆಯನ್ನು ಗುರುತಿಸಿದ್ದು, ಅದರ ಆಧಾರದ ಮೇಲೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘2047ರೊಳಗೆ ಅಭಿವೃದ್ಧಿ ಭಾರತ’ ಗುರಿಯನ್ನು ಉಲ್ಲೇಖಿಸಿ, ಅದನ್ನು ಸಾಧಿಸಲು ಭಾರತೀಯ ಚಿಂತನೆಗಳನ್ನು ಪುನರುಜ್ಜೀವನಗೊಳಿಸುವುದು ಅಗತ್ಯವೆಂದು ತಿಳಿಸಿದರು.
ಭಾರತೀಯತೆಯ ಮೇಲೆ ಪರಿಣಾಮ ಬೀರಿದ ಕಾಲೋನಿಯಲ್ ಶಿಕ್ಷಣ ಪದ್ಧತಿಯನ್ನು ಟೀಕಿಸಿದ ಅವರು, ಸ್ವಾತಂತ್ರ್ಯಾನಂತರವೂ ಅದರ ಮಾನಸಿಕತೆ ಮುಂದುವರೆದಿದ್ದು ದೇಶಕ್ಕೆ ಹಾನಿಯಾಗಿದೆ ಎಂದು ಹೇಳಿದರು. ಇಂದಿನ ಶಿಕ್ಷಣ ವ್ಯವಸ್ಥೆ ಪದವಿ ಮತ್ತು ಪ್ರಮಾಣಪತ್ರಗಳ ಮೇಲೆ ಕೇಂದ್ರೀಕೃತವಾಗಿದ್ದು, ಅದನ್ನು ಭಾರತೀಯ ಚಿಂತನೆಗಳ ಆಧಾರದ ಮೇಲೆ ಮರುಸಂರಚನೆಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.
ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಾತ್ಮಕತೆಯನ್ನು ಉತ್ತೇಜಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳನ್ನು ತರಬೇಕೆಂದು ಅವರು ಒತ್ತಾಯಿಸಿದರು.
ಭಾರತೀಯ ಜ್ಞಾನ ಪರಂಪರೆಯನ್ನು ಆಧುನಿಕ ಕಾಲಕ್ಕೆ ಹೊಂದುವಂತೆ ರೂಪಾಂತರಿಸಿ, ಸಾಮಾನ್ಯ ಜನರೂ ಅಳವಡಿಸಿಕೊಳ್ಳುವಂತೆ ಮಾಡುವ ಜವಾಬ್ದಾರಿ ಎಲ್ಲರ ಮೇಲೂ ಇದೆ ಎಂದು ಧರ್ಮೇಂದ್ರ ಪ್ರಧಾನ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa