
ಬೆಂಗಳೂರು, 16 ಮಾರ್ಚ್ (ಹಿ.ಸ.)
ಆ್ಯಂಕರ್: ಮಾತೃತ್ವ ರಜೆಯ ನಂತರ ಮಹಿಳಾ ಶಿಕ್ಷಕರು ಕರ್ತವ್ಯಕ್ಕೆ ಮರಳಿ ಹಾಜರಾಗಲು ಮಗುವಿನ ಐದು ವರ್ಷ (05) ಪೂರ್ಣಗೊಳ್ಳುವವರೆಗೂ ಮಗುವಿನ ಆರೈಕೆಗೆ ಅನುಕೂಲ ಆಗುವ ರೀತಿಯಲ್ಲಿ ಶಿಕ್ಷಕಿಯರು ಕೇಳುವ ಸ್ಥಳಕ್ಕೆ ಕೌನ್ಸಿಲಿಂಗ್ ಮೂಲಕ ನಿಯುಕ್ತಿಗೊಳಿ ಆದೇಶ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.
ಬಳ್ಳಾರಿ - ವಿಜಯನಗರ ಜಿಲ್ಲಾ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ಶಾಸಕ ವೈ.ಎಂ. ಸತೀಶ್ ಅವರು, ಮಹಿಳಾ ಶಿಕ್ಷಕರಿಗೆ ಶಿಶುಪಾಲನಾ ರಜೆಯನ್ನು ಮಂಜೂರು ಮಾಡುವ ಕುರಿತು ಪ್ರಶ್ನೆ ಕೇಳಿ, ಅವಧಿ ಪೂರ್ವದಲ್ಲೇ (ಆರು ತಿಂಗಳ ಗರ್ಭದ ಶಿಶು) ಜನಿಸಿದ ಮಗುವಿನ ತಾಯಿಗೆ ಮಗುವನ್ನು ಆರೈಕೆ ಮಾಡುವ ಜವಾಬ್ದಾರಿ ಇದೆ. ಈ ಶಿಕ್ಷಕಿಗೆ ಮಾನವೀಯತೆಯ ಆಧಾರದ ಮೇಲೆ ಅವರು ಕೇಳುವ ಸ್ಥಳಕ್ಕೆ ನಿಯುಕ್ತಿಗೊಳಿಸಿ ಆದೇಶ ನೀಡಲು ಕೋರಿದರು.
ಆಗ, ಸಚಿವ ಎಸ್. ಮಧು ಬಂಗಾರಪ್ಪ ಅವರು, ಶಿಶುಪಾಲನಾ ರಜೆಯನ್ನು ಮಂಜೂರು ಮಾಡಲು ಸರ್ಕಾರದ ಆದೇಶ ಸಂಖ್ಯೆ ಆಇ 4(ಇ) ಶೇನಿಸೇ 2021, ದಿನಾಂಕ 21.06.2021ರಲ್ಲಿ ಸ್ಪಷ್ಟವಾದ ನಿರ್ದೇಶನಗಳನ್ನು ಇಲಾಖೆಯ ಅಧಿಕಾರಿಗಳಿಗೆ ನೀಡಲಾಗಿದೆ. ಶಿಶುಪಾಲನಾ ರಜಾ ಮನವಿ ಸ್ವೀಕೃತಗೊಂಡ 15 ದಿನಗಳೊಳಗಾಗಿ ರಜೆಯನ್ನು ಮಂಜೂರು ಮಾಡಲಾಗುತ್ತದೆ. ಈ ಹುದ್ದೆಗೆ ಅತಿಥಿ ಶಿಕ್ಷಕರನ್ನ ನೇಮಕ ಮಾಡಿಕೊಳ್ಳಲು ಅವಕಾಶವಿದೆ ಎಂದರು.
ಶಾಸಕ ವೈ.ಎಂ. ಸತೀಶ್ ಅವರು ಪ್ರಸ್ತಾಪಿಸಿರುವ ಶಿಕ್ಷಕಿಗೆ ಮಾನವೀಯತೆಯ ಆಧಾರದ ಮೇಲೆ ಐದು ವರ್ಷಗಳ ಅವಧಿಗೆ ಅವರು ಕೇಳಿದ ಸ್ಥಳದಲ್ಲಿಯೇ ಕೌನ್ಸಿಲಿಂಗ್ ಮೂಲಕ ನಿಯುಕ್ತಿಗೊಳಿಸಿ, ಈ ಹುದ್ದೆಗೆ ಮುಂದಿನ ಶೈಕ್ಷಣಿಕ ಅವಧಿಯಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್