119 ನೇ ದಿನದ ಬಲ್ಡೋಟ ಹಟಾವೋ ಧರಣಿಗೆ ಸಾಹಿತಿ ಹಿರೇಮಠ ಬೆಂಬಲ
ಕೊಪ್ಪಳ, 26 ಫೆಬ್ರವರಿ (ಹಿ.ಸ.) : ಆ್ಯಂಕರ್ : ಭಾಗ್ಯನಗರ ಬಂದ್ ಯಶಸ್ವಿಗೊಳಿಸಿದ ಎಲ್ಲರಿಗೂ ಕೃತಜ್ಞತಾ ಪತ್ರ ಬರೆದು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಅಭಿನಂದಿಸಿದೆ. ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಅ
Sahitya Hiremath supports the 119th day of Baldota Hatao Dharani


ಕೊಪ್ಪಳ, 26 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಭಾಗ್ಯನಗರ ಬಂದ್ ಯಶಸ್ವಿಗೊಳಿಸಿದ ಎಲ್ಲರಿಗೂ ಕೃತಜ್ಞತಾ ಪತ್ರ ಬರೆದು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಅಭಿನಂದಿಸಿದೆ. ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಅವರು ಕೃತಜ್ಞತೆ ಸಲ್ಲಿಸಿದರು.

ಇದೇ ವೇಳೆ 119ನೇ ದಿನದಂದು ಮುಂಡರಗಿ ನಿವಾಸಿ, ಹಿರಿಯ ಸಾಹಿತಿ ಎ.ಬಿ. ಹಿರೇಮಠ ಅವರು ಧರಣಿಗೆ ಬೆಂಬಲಿಸಿ, ಕಾರ್ಖಾನೆ ಕಟ್ಟಲು ಅಭಿವೃದ್ಧಿ ಹೆಸರೇಳುವುದು ನಾಚಿಕೆಗೇಡಿನ ಸಂಗತಿ. ಜೀವ ಹಾರಿ ಹೋಗುವಾಗ ಆರ್ಥಿಕ ಅಭಿವೃದ್ಧಿ ಎಂದರೆ ಏನರ್ಥ. ಜನರು ಇಷ್ಟೊಂದು ಕೆಟ್ಟ ಪರಸ್ಥಿತಿ ಎದುರಿಸಲಾಗದೆ ಪರಿತಪಿಸುವ ಚಿತ್ರಣ ರಾಜ್ಯದ ಜನ ನೋಡುತ್ತಿದ್ದಾರೆ, ಈಗಲಾದರೂ ಸರ್ಕಾರ ಕರುಣೆ ತೋರದೆ ಹೋದರೆ ಬಾಧಿತರು ಏನು ಮಾಡಬೇಕು ಎಂದರು. ಇನ್ನಷ್ಟು ಜನರ ಪರೀಕ್ಷೆ ಸರ್ಕಾರ ಮಾಡಬಾರದು. ನಿಮ್ಮ ರಾಜಕೀಯ ಏನೇ ಇರಲಿ. ಜನರ ಜೀವ, ಆರೋಗ್ಯ ಕಾಪಾಡುವುದು ಸರ್ಕಾರದ ಆದ್ಯತೆಯಾಗಲಿ ಎಂದರು.

ಬಂದ್ ಗೆ ಸಹಕರಿಸಿ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿದ ಎಲ್ಲ ವರ್ತಕರಿಗೆ, ಬೀದಿಬದಿ ವ್ಯಾಪಾರಿಗಳಿಗೆ, ಎ.ಪಿ.ಎಂ.ಸಿ ಗಂಜ್ ವರ್ತಕರ ಸಂಘಕ್ಕೆ, ಗಂಜ್ ಖರೀದಿದಾರರ ಸಂಘಕ್ಕೆ, ಜಿಲ್ಲಾ ವಕೀಲರ ಸಂಘಕ್ಕೆ, ಕಿರಾಣಿ ವರ್ತಕರ ಸಂಘಕ್ಕೆ, ಮಾಲ್ ಮಾಲೀಕರಿಗೆ, ಹೋಟೆಲ್ ಮತ್ತು ಖಾನಾವಳಿಗಳ ಮಾಲೀಕರಿಗೆ, 117 ದಿನ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ ಸಂಘ ಸಂಸ್ಥೆಗಳಿಗೆ, ಅನ್ನದಾಸೋಹ ಮಾಡಿದ ಖಾನಾವಳಿ, ಹೋಟೆಲ್ ಮಾಲೀಕರಿಗೆ, 60 ದಿನ ದಾಸೋಹ ಮಾಡಿದ ಸುಪ್ತ ದಾನಿಗಳಿಗೆ, ಮೆರವಣಿಗೆಯಲ್ಲಿ ಪಾಲ್ಗೊಂಡ, ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ಎಲ್ಲರಿಗೂ, ಶಾಲಾ, ಕಾಲೇಜು ಮುಚ್ಚಿ ಸಹಕರಿಸಿದ ಕೊಪ್ಪಳ ಭಾಗ್ಯನಗರದ ಶಿಕ್ಷಣ ಸಂಸ್ಥೆಗಳ (ಎರಡು ಒಕ್ಕೂಟಗಳಿಗೆ) ಮುಖ್ಯಸ್ಥರಿಗೆ, ಪರೀಕ್ಷೆ ಮುಂದೂಡಿ ಸಹಕರಿಸಿದ ಕೊಪ್ಪಳ ವಿಶ್ವ ವಿದ್ಯಾಲಯಕ್ಕೆ, ಸಾರಿಗೆ ಬಂದ್ ಮಾಡಿ ಸಹಕಾರ ನೀಡಿದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮತ್ತು ಚಾಲಕ, ನಿರ್ವಾಹಕರುಗಳಿಗೆ, 10 ಸಾವಿರ ಬಣ್ಣದ ಕರಪತ್ರ ಉಚಿತವಾಗಿ ಮುದ್ರಿಸಿಕೊಟ್ಟ ಕೊಪ್ಪಳ ಆಫ್ ಸೆಟ್ ಪ್ರಿಂಟರ್ಸ್ ಅಸೋಸಿಯೇಶನ್ ಮತ್ತು ಆರಂಭದಿಂದ ಅನೇಕ ಸಲ ಉಚಿತವಾಗಿ ಕರಪತ್ರ ಮುದ್ರಿಸಿ ಸೇವೆ ಮಾಡಿದ ಐಶ್ವರ್ಯ ಪ್ರಿಂಟರ್ಸ್ ಗೊಂಡಬಾಳ ಸಹೋದರರಿಗೆ, ಟೀ ಶರ್ಟ್ ಸೇವೆ, ಘೋಷಣಾ ಫಲಕ ಸೇವೆ, ಅಂಚೆ ಪತ್ರ ಸೇವೆ ಮಾಡಿದ ಮಹನೀಯರಿಗೆ ವೇದಿಕೆಯಿಂದ ಕೃತಜ್ಞತೆಗಳು ಸಲ್ಲುತ್ತವೆ.

ಕೊಪ್ಪಳ ಭಾಗ್ಯನಗರದ ಪ್ರಮುಖರು, ಮಾಲಿನ್ಯಕಾರಕ ಕಾರ್ಖಾನೆಗಳಿಂದ ಬಾಧಿತರಾದ 20 ಗ್ರಾಮಗಳ ರೈತರು ಹತ್ತಾರು ಟ್ರ್ಯಾಕ್ಟರ್ ಸಮೇತ ಬಂದು ಮೆರವಣಿಗೆಯಲ್ಲಿ ಭಾಗವಹಿಸಿ ದೊಡ್ಡ ಬೆಂಬಲ ನೀಡಿದ, ಎಲೆಮರೆ ಕಾಯಿಯಂತೆ ಹೋರಾಟ ವೇದಿಕೆಗೆ ಗೊತ್ತಿಲ್ಲದಂತೆ ಕೆಲಸ ಮಾಡಿದ, ಬಾಧಿತ ಸುತ್ತಲ ಗ್ರಾಮಗಳ ಜನರಿಗೆ, ಕೊಪ್ಪಳ ಭಾಗ್ಯನಗರದ ಜಾಗೃತ ಮಹಿಳೆಯರು, ಸರ್ವ ಧರ್ಮದವರು, ಎಲ್ಲ ರಾಜಕೀಯ ಪಕ್ಷಗಳು, ಎಲ್ಲ ಜನಪ್ರತಿನಿಧಿಗಳು ಪರಿಸರ ಧರ್ಮ ಪರಿಪಾಲಿಸಿದ್ದಾರೆ.

ಎಲ್ಲ ದಾನಿಗಳಿಗೆ, ಹೆಸರು ಬಹಿರಂಗಪಡಿಸಲು ಇಚ್ಛಿಸದ ದಾನಿಗಳಿಗೆ, ಇಡೀ ಹೋರಾಟಕ್ಕೆ ದೊಡ್ಡ ಆರ್ಥಿಕ ಶಕ್ತಿಯಾಗಿ 2 ಲಕ್ಷ ರೂಪಾಯಿ ನೀಡಿದ ಮಾಜಿ ಸಚಿವರು, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರಿಗೆ, 100ನೇ ದಿನದ ಸಮಾವೇಶ ಮತ್ತು ಬಂದ್ ದಿನದ ಮುಂಜಾನೆ ಮತ್ತು ಮಧ್ಯಾಹ್ನ ದಾಸೋಹ ನಡೆಸಿದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳಿಗೆ, ಅಲ್ಲಿಯ ಪದಾಧಿಕಾರಿಗಳಿಗೆ, ಶ್ರೀಮಠದ ಸೇವಕರಿಗೆ ವಂದಿಸುತ್ತೇವೆ.

ನಮ್ಮ ಹೋರಾಟಕ್ಕೆ ಶಕ್ತಿ ಕುಂದದಂತೆ ನೋಡಿಕೊಳ್ಳುತ್ತಾ ಬಂದಿರುವ ಎಲ್ಲಾ ಪತ್ರಿಕಾ, ಟಿವಿ ಮಾಧ್ಯಮದವರಿಗೆ, ಸೋಸಿಯಲ್ ಮೀಡಿಯಾ ಬಳಸಿ ಪ್ರಚಾರ ಕೈಗೊಂಡ ಎಲ್ಲರಿಗೂ, ಪೊಲೀಸ್ ಮುಖ್ಯಾಧಿಕಾರಿಗಳು, ನಿರಂತರ ಹೋರಾಟ ಸಮಿತಿಯೊಂದಿಗೆ ಸಂಪರ್ಕ ಇಟ್ಟುಕೊಂಡು ನಿಭಾಯಿಸಿದ ರೀತಿ ಗಮನಾರ್ಹ. ಸಭೆ ಶಾಂತಿಯುತವಾಗಿ ನಡೆಯಲು ಸಹಕರಿಸಿದ ಪೊಲೀಸರಿಗೆ ಹೋರಾಟ ಸಮಿತಿ ಕೃತಜ್ಞವಾಗಿದೆ.

ಹೋರಾಟಕ್ಕೆ ಅಡೆತಡೆಗಳು ಎದುರಾದಾಗ ಸಹಾಯಕ್ಕೆ ಬಂದ ಜನಪ್ರತಿನಿಧಿಗಳಿಗೆ, ಹೋರಾಟ ಸಮಿತಿಯ ಬೆನ್ನೆಲುಬಾದ ನಿವೃತ್ತ ನೌಕರರು, ಹಿರಿಯ ಜೀವಗಳು, ಉತ್ಸಾಹದ ಚಿಲುಮೆಯಾದ ಮಹಿಳಾ ನಾಯಕಿಯರಿಗೆ ಮತ್ತು ಹಿರಿಯ ನಾಗರಿಕರಿಗೆ, ಗಾಂಧಿನಗರದ ಬಂಧುಗಳಿಗೆ, ಸ್ವಚ್ಚತೆ ಸೇವೆ ಮಾಡಿದ ಪುರಸಭೆಯ ಪೌರಾಯುಕ್ತರು ಮತ್ತು ಪೌರ ಸೇವಕರಿಗೆ, ಪ್ರತಿದಿನ ಧರಣಿ ಸತ್ಯಾಗ್ರಹದ ಶಿಬಿರ ಸ್ವಚ್ಛಗೊಳಿಸಿ, ಕುರ್ಚಿ ಹಾಕಿ ದಣಿವರಿಯದ ಸೇವೆ ಸಲ್ಲಿಸುತ್ತಿರುವ ಮಕ್ಬೂಲ್ ಸಾಬ್ ರಾಯಚೂರು ಅವರಿಗೆ, ಆಟೋ ಸಂಚಾರ ನಿಲ್ಲಿಸಿ ಸಹಕಾರ ನೀಡಿದ ಆಟೋ ಚಾಲಕರು, ಮಾಲಿಕರಿಗೆ, ಹಮಾಲಿ ಕೆಲಸ ಸ್ಥಗಿತ ಮಾಡಿದ, ಎಲ್ಲಾ ದುಡಿಯುವ ಹಮಾಲರುಗಳಿಗೆ, ಶ್ರಮಿಕರಾದ ಕಾರ್ಮಿಕರಿಗೆ, ರೈತರಿಗೆ ಹೋರಾಟ ಸಮಿತಿ ಋಣಿಯಾಗಿದೆ. ಕುಡಿಯುವ ನೀರಿನ ಸೇವೆ ಒದಗಿಸಿದ ಮಾನವ ಬಂಧುತ್ವ ವೇದಿಕೆಗೆ, ಆರಂಭದ ದಿನದಿಂದ ಧರಣಿಗೆ ನೀರಿನ ಸೇವೆ ಮಾಡುತ್ತಿರುವ ಮಹಾಂತೇಶ ಕೊತಬಾಳ ಅವರಿಗೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಎಲ್ಲ ಅತಿಥಿಗಳಿಗೆ, ಸ್ವಾಮಿಗಳಿಗೆ, ಹೋರಾಟದ ಐಕ್ಯ ಶಕ್ತಿಯಾದ ಭಾಗ್ಯನಗರ ಬಂಧುಗಳಿಗೆ, ಸರ್ವ ಧರ್ಮಗಳ, ಸರ್ವ ಸಮಾಜದ, ಸರ್ವ ಸಮುದಾಯದ ಜನಗಳಿಗೆ ಹೋರಾಟ ಬೆಂಬಲಿಸಿದ್ದಕ್ಕಾಗಿ ವಂದಿಸಿದರು.

119ನೇ ದಿನದ ಧರಣಿಯಲ್ಲಿ ಸಾಹಿತಿ ಎ.ಎಂ. ಮದರಿ, ಮುಂಡರಗಿಯ ಎ.ಕೆ. ಮುಲ್ಲಾನವರ, ವೀರೇಶ ಬ. ಕಟಗಾಲಿ, ನಿವೃತ್ತ ಇಂಜಿನೀಯರ್ ಡಿ.ವಿ. ಪಾಟೀಲ್, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಎನ್.ಕೆ.ಪಿ.ಎಂ. ಶಾಲೆಯ ಸಂಸ್ಥಾಪಕ ಬಿ.ಕೆ. ಪಟ್ಟಣಶೆಟ್ಟಿ, ಪ್ರಕಾಶಕ ಡಿ.ಎಂ. ಬಡಿಗೇರ, ಮಹಾಂತೇಶ ಕೊತಬಾಳ, ಯಮನೂರಪ್ಪ ಹಳ್ಳಿಕೇರಿ, ರವಿ ಕಾಂತನವರ, ಬಿ. ಜಿ ಕರಿಗಾರ, ಜಿಬಿ. ಪಾಟೀಲ್, ಬೆಟ್ಟಪ್ಪ ಯತ್ನಟ್ಟಿ ಮೂಕಪ್ಪ ಮೇಸ್ತ್ರಿ ಬಸಾಪುರ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande