ನಕಲಿ ವೈದ್ಯರ ಬಗ್ಗೆ ಎಚ್ಚರ : ಡಿಹೆಚ್‍ಓ ಡಾ.ಯಲ್ಲಾ ರಮೇಶಬಾಬು
ಬಳ್ಳಾರಿ, 20 ಜನವರಿ (ಹಿ.ಸ.) : ಆ್ಯಂಕರ್ : ಬಳ್ಳಾರಿ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ಎಚ್ಚರವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್‍ಬಾಬು ಅವರು ತಿಳಿಸಿದ್ದಾರೆ. ಆರೋಗ್ಯ ಇಲಾಖೆಯು ಕಾರ್ಯಾಚರಣೆ ನಡೆಸಿ ಹ
ನಕಲಿ ವೈದ್ಯರ ಬಗ್ಗೆ ಎಚ್ಚರ : ಡಿಹೆಚ್‍ಓ ಡಾ.ಯಲ್ಲಾ ರಮೇಶಬಾಬು


ಬಳ್ಳಾರಿ, 20 ಜನವರಿ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ಎಚ್ಚರವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್‍ಬಾಬು ಅವರು ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯು ಕಾರ್ಯಾಚರಣೆ ನಡೆಸಿ ಹಲವರನ್ನು ಪತ್ತೆಹಚ್ಚಿ ಕ್ರಮ ಕೈಗೊಂಡಿದೆ. ಈ ನಕಲಿ ವೈದ್ಯರು ಕನಿಷ್ಠ ಶೈಕ್ಷಣಿಕ ಅರ್ಹತೆ ಇಲ್ಲದಿದ್ದರೂ ಕ್ಲಿನಿಕ್‍ಗಳನ್ನು ತೆರೆದು ಬಡ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದರು.

ಸರಿಯಾದ ವೈದ್ಯಕೀಯ ಪದವಿ (ಎಂಬಿಬಿಎಸ್, ಬಿಎಎಂಎಸ್, ಬಿಎಚ್‍ಎಂಎಸ್, ಬಿಡಿಎಸ್ ಮುಂತಾದವು) ಅಥವಾ ವೈದ್ಯಕೀಯ ಮಂಡಳಿಯ ನೋಂದಣಿ ಇಲ್ಲದೆ ಚಿಕಿತ್ಸೆ ನೀಡುವವರೇ ನಕಲಿ ವೈದ್ಯರಾಗಿರುತ್ತಾರೆ.

ತಪ್ಪಾದ ರೋಗನಿರ್ಣಯ ಅಥವಾ ಅಪಾಯಕಾರಿ ಔಷಧಿಗಳಿಂದ ರೋಗ ಗಂಭೀರವಾಗುವ ಸಾಧ್ಯತೆ ಮತ್ತು ಶಾಶ್ವತ ಹಾನಿ ಅಥವಾ ಮರಣಕ್ಕೂ ಕಾರಣವಾಗಬಹುದು. ಸಾರ್ವಜನಿಕರು ಕ್ಲಿನಿಕ್‍ನಲ್ಲಿ ರಿಜಿಸ್ಟ್ರೇಶನ್ ನಂಬರ್ ಪ್ರದರ್ಶಿಸಿಲ್ಲ, ಪದವಿ ಪ್ರಮಾಣಪತ್ರಗಳು ಸ್ಪಷ್ಟವಾಗಿ ಇಲ್ಲ ಎಂದಾದರೆ ಅವರು ನಕಲಿ ವೈದ್ಯರು ಎಂದು ಗಮನಿಸಬಹುದು.

ನಕಲಿ ವೈದ್ಯರು ಸಾಮಾನ್ಯವಾಗಿ ಎಲ್ಲಾ ರೋಗಕ್ಕೂ ಒಂದೇ ಔಷಧಿ ಎಂದು ಹೇಳುವುದು, ಅತೀ ಕಡಿಮೆ ಶುಲ್ಕಕ್ಕೆ ಗ್ಯಾರಂಟಿ ಚಿಕಿತ್ಸೆ ಎನ್ನುವುದು, ಇಂಜೆಕ್ಷನ್/ಡ್ರಿಪ್‍ಗಳನ್ನು ಅಗತ್ಯವಿಲ್ಲದೆ ನೀಡುವುದು ಮಾಡುವುದು ಕಂಡು ಬರುತ್ತದೆ.

ಸಾರ್ವಜನಿಕರು ವೈದ್ಯರನ್ನು ಭೇಟಿಯಾಗುವ ಮೊದಲು ನೋಂದಣಿ ಸಂಖ್ಯೆ ಪರಿಶೀಲಿಸಿ. ಸರ್ಕಾರದ ಅಥವಾ ಮಾನ್ಯತೆ ಪಡೆದ ಆಸ್ಪತ್ರೆಗಳನ್ನು ಆಯ್ಕೆ ಮಾಡಬೇಕು. ಅನುಮಾನಾಸ್ಪದ ಚಿಕಿತ್ಸೆ ಕಂಡರೆ ದೂರು ನೀಡಿ, ಇತರರಿಗೆ ಜಾಗೃತಿ ಮೂಡಿಸಬೇಕು ಎಂದು ಡಿಹೆಚ್‍ಓ ಅವರು ತಿಳಿಸಿದ್ದಾರೆ.

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಅಧಿಕೃತ ವೈದ್ಯ ಪದವಿ ಪಡೆದ ವೈದ್ಯರ ಬಳಿ ತಪಾಸಣೆ ಮಾಡಿಸುವ ಮೂಲಕ ಚಿಕಿತ್ಸೆ ಪಡೆಯುವುದರಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ಗಂಭೀರ ಪರಿಣಾಮಗಳನ್ನು ತಡೆಯಬಹುದಾಗಿದೆ.

ನಗರ, ಗ್ರಾಮಗಳಲ್ಲಿ ವೈದ್ಯ ವೃತ್ತಿ ಮಾಡುತ್ತಿರುವವರು ಕಂಡುಬಂದಲ್ಲಿ ದಯವಿಟ್ಟು ಅವರ ವೈದ್ಯಕೀಯ ಪದವಿಯ ಮಾಹಿತಿಯನ್ನು ಪಡೆದುಕೊಂಡು ಚಿಕಿತ್ಸೆ ಪಡೆಯಿರಿ, ಒಂದು ವೇಳೆ ನಕಲಿ ವೈದ್ಯರು ಎಂದು ಕಂಡುಬಂದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯಕ್ಕೆ ದೂರು ನೀಡಿದರೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ರ ಅಡಿಯಲ್ಲಿ ಕ್ರಮ ಜರುಗಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande