ರಾಯಚೂರು, 06 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಸೆಪ್ಟೆಂಬರ್ 6ರಂದು ಬೆಳಗಿನ ಅವಧಿಯಲ್ಲಿ ರಾಯಚೂರು ಹೊರವಲಯದಲ್ಲಿ ಸಂಚರಿಸಿ ಚಿಕ್ಕಸೂಗುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಗನೂರ ಗ್ರಾಮದ ಬಳಿಯಲ್ಲಿ ನಿರ್ಮಾಣವಾಗುತ್ತಿರುವ ಜಿ+3 ಮಾದರಿಯ ವಸತಿ ಸಮುಚ್ಛಯದ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿದರು.
ಪ್ರಧಾನಮಂತ್ರಿ ಆವಾಸ್ ನಗರ ಯೋಜನೆಯ ಎಎಚ್ಪಿ ಉಪ ಘಟಕದಡಿ 2419 ಮನೆಗಳು 2021-22 ನೇ ಸಾಲಿನಲ್ಲಿನ ವಸತಿ ಸಮುಚ್ಛಯದ ಕಾಮಗಾರಿಯನ್ನು ಜಿಲ್ಲಾಧಿಕಾರಿಗಳು ಖುದ್ದು ಪರಿಶೀಲಿಸಿದರು.
ಕೇಂದ್ರ ಸರ್ಕಾರದಿಂದ 1.50 ಲಕ್ಷ ಮತ್ತು ರಾಜ್ಯ ಸರ್ಕಾರದಿಂದ 2 ಲಕ್ಷ ಸಬ್ಸಿಡಿ ಸಹಾಯಧನದಡಿ ನಿರ್ಮಾಣವಾಗುತ್ತಿರುವ ಈ ವಸತಿ ಸಮುಚ್ಛಯದಲ್ಲಿ ಜನರಿಗೆ ಅನುಕೂಲವಾಗುವ ಹಾಗೆ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತು ಕೊಡಬೇಕು. ಜನ ಬಳಕೆಗೆ ಅನುಕೂಲವಾಗುವ ಹಾಗೆ ಕುಡಿಯುವ ನೀರಿನ ಪೈಪಲೈನ್ ಅಳವಡಿಕೆ, ವೈಜ್ಞಾನಿಕ ಮಾದರಿಯಲ್ಲಿ ಒಳಚರಂಡಿ ಹಾಗೂ ನಿರ್ಮಾಣಕ್ಕೆ ಒತ್ತು ಕೊಡಬೇಕು. ಕಾಮಗಾರಿ ಸ್ಥಳಕ್ಕೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ಶಿಸ್ತುಬದ್ಧವಾದ ಮೇಲ್ವಿಚಾರಣೆ ಮಾಡಬೇಕು ಎಂದು ಅಧಿಕಾರಿಗಳು ಮತ್ತು ಗುತ್ತಿಗೆ ಪಡೆದ ಏಜೆನ್ಸಿ ಹಾಗೂ ಅಭಿಯಂತರರಿಗೆ
ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ನಗರದಲ್ಲಿ ವಾಸ ಮಾಡಿದ ಬಡವರಿಗೆ ಈ ಯೋಜನೆಯಿಂದ ಒಂದು ಸೂರು ಪಡೆದುಕೊಳ್ಳಲು ಅನುಕೂಲವಾಗಲಿದ್ದು, ಕಾಮಗಾರಿಯಲ್ಲಿ ಗುಣಮಟ್ಟದ ಕಾಯ್ದುಕೊಳ್ಳಬೇಕು. ಮಾರ್ಗಸೂಚಿಯಂತೆ ಗುಣಮಟ್ಟದ ಸಾಮಗ್ರಿ ಬಳಸಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಮೊದಲನೇ ಹಂತದಲ್ಲಿ ಒಟ್ಟು 1191 ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿದ್ದು ಈ ಪೈಕಿ ಬರುವ ದೀಪಾವಳಿ ವೇಳೆಗೆ 300 ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ನೀಡುವುದಾಗಿ ಸಂಬಂಧಿಸಿದ ಗುತ್ತಿಗೆದಾರರು ಇದೆ ವೇಳೆ ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಸಹಾಯಕ ಆಯುಕ್ತರಾದ ಗಜಾನನ ಬಾಳೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಈರಣ್ಣ ಬಿರಾದಾರ, ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಸಂತೋಷ ರಾಣಿ, ಡಿಯುಡಿಸಿಯ ಸಿಎಲ್ಟಿಸಿ ಹಂಪಮ್ಮ ಸೇರಿದಂತೆ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್