ಬಳ್ಳಾರಿ, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಸೆ.29 ರಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್.ಜಮೀರ್ ಖಾನ್ ಅವರ ಅಧ್ಯಕ್ಷತೆಯಲ್ಲಿ ಈ ವರ್ಷದ ಜಿಲ್ಲಾ ಮಟ್ಟದ ಕೆಡಿಪಿ ಸಭೆ ನಡೆಯಲಿದ್ದು, ಅಧಿಕಾರಿಗಳು ತಮ್ಮ ಇಲಾಖೆಗಳ ಸಂಬ0ಧಿಸಿದ ಅಗತ್ಯ ಪೂರಕ ಮಾಹಿತಿ ಸಿದ್ಧತೆಯಲ್ಲಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಹೊಸ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವರ್ಷಗಳ ಬಳಿಕ ಪೂರ್ಣ ಪ್ರಮಾಣದ ಕೆಡಿಪಿ ಸಭೆ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಶಾಸಕರು ಸಹ ಭಾಗವಹಿಸಲಿದ್ದಾರೆ. ಹಾಗಾಗಿ ಯಾವುದೇ ರೀತಿಯ ಮಾಹಿತಿ ಕೊರತೆಯಾಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಅಧಿಕಾರಿಗಳು ತಮ್ಮ ಇಲಾಖೆಗಳಿಂದ ಅನುಷ್ಠಾನಗೊಳಿಸಿದ ವಿವಿಧ ಯೋಜನೆಗಳು, ಅವುಗಳ ಪ್ರಗತಿ, ಶೇಕಡವಾರು ಗುರಿ ಸಾಧನೆ ಸೇರಿದಂತೆ ಎಲ್ಲಾ ವಿಧದ ಮಾಹಿತಿಯೂ ಸಹ ಒಳಗೊಂಡಿರುವ0ತೆ ಮಾಹಿತಿ ಕೈಪಿಡಿ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಕೃಷಿಗೆ ರಸಗೊಬ್ಬರ ಪೂರೈಕೆ, ಬೇಡಿಕೆ ಮತ್ತು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಮೆಣಸಿನಕಾಯಿ ಬೆಳೆಯಿಂದ ರೈತರು ಮುಸುಕಿನ ಜೋಳ, ತೊಗರಿ ಬೆಳೆ ಬೆಳೆಯಲು ಕಾರಣವೇನು, ಬೆಳೆಗಳ ವಿಮೆಗೆ ರೈತರ ನೋಂದಣಿ ಕ್ರಮ ಕುರಿತ ಮಾಹಿತಿ ಚರ್ಚೆಯಾಗಬಹುದು. ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಇಲ್ಲಿಯವರೆಗಿನ ಎಲ್ಲಾ ಮಾಹಿತಿ ನಮೂದಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಹೈನುಗಾರಿಕೆಗೆ ಉತ್ತೇಜನ, ಹಾಲು ಉತ್ಪಾದಕರ ಸಹಕಾರ ಸಂಘಗಳ ರಚನೆ ಹಾಗೂ ಹಾಲು ಉತ್ಪಾದನೆಗೆ ರೈತರಿಗೆ ನೀಡಬೇಕಾದ ಪ್ರೋತ್ಸಾಹ-ಬೆಂಬಲ ಮತ್ತು ಗುಣಮಟ್ಟದ ಹಾಲು ಸರಬರಾಜು ಕುರಿತಂತೆ ಸಚಿವರು ಚರ್ಚೆ ನಡೆಸುವುದಲ್ಲದೇ, ಜಿಲ್ಲೆಯಲ್ಲಿ ನಿರ್ಮಾಣಗೊಳ್ಳಲಿರುವ ಮೆಗಾಡೈರಿ ಸ್ಥಾಪನೆಯ ಇಲ್ಲಿವರೆಗಿನ ಬೆಳವಣಿಗೆಯ ಕುರಿತು ಚರ್ಚಿಸುವರು. ಹಾಗಾಗಿ ಸವಿಸ್ತಾರ ಮಾಹಿತಿಯೊಂದಿಗೆ ಅಧಿಕಾರಿಗಳು ಸಿದ್ಧತೆಯಲ್ಲಿರಬೇಕು ಎಂದು ಪಶು ವೈದ್ಯಾಧಿಕಾರಿಗಳು, ಕೆಎಂಎಫ್ ವ್ಯವಸ್ಥಾಪಕರಿಗೆ ಹೇಳಿದರು.
ಅದೇರೀತಿಯಾಗಿ, ರೇಷ್ಮೆ ಮತ್ತು ಮೀನುಗಾರಿಕೆ ಇಲಾಖೆಗಳು ಇಲ್ಲಿಯವರಿಗೆ ಅನುಷ್ಠಾನಗೊಳಿಸಿದ ಸೌಲಭ್ಯ, ಜಿಲ್ಲೆಯಲ್ಲಿ ಅಪೌಷ್ಟಿಕತೆ ಮಕ್ಕಳ ಆರೋಗ್ಯ ಸುಧಾರಣೆಯ ಕ್ರಮ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಆರೋಗ್ಯ ಸೌಲಭ್ಯ ವಿತರಣೆ, ಆಸ್ಪತ್ರೆಗಳ ನಿರ್ವಹಣೆ, ಔಷಧಗಳ ದಾಸ್ತಾನು ಸಂಬAಧಿಸಿದAತೆ ಜಿಲ್ಲಾ ಆರೋಗ್ಯಾಧಿಕಾರಿಗಳು, ಬಿಎಂಸಿಆರ್ಸಿ ನಿರ್ದೇಶಕರು ಮಾಹಿತಿ ನೀಡಲು ಸಿದ್ಧರಿರಬೇಕು ಎಂದರು.
ಸಭೆಯಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಗತಿ, ಈಗಾಗಲೇ ನಡೆಯುತ್ತಿರುವ ಮಾಜಿ ದೇವದಾಸಿಯರ ಮರು ಸಮೀಕ್ಷೆ, ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ಮತ್ತು ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ವರದಿಯ ಪೂರಕ ಮಾಹಿತಿ ಇರಬೇಕು ಎಂದು ತಿಳಿಸಿದರು.
ಮುಖ್ಯವಾಗಿ ಅಧಿಕಾರಿಗಳು ಸಭೆಯಲ್ಲಿ ಅಂಕಿ-ಸ0ಖ್ಯೆ ಮಂಡಿಸುವ ಬದಲು, ಯೋಜನೆ, ಸೌಲಭ್ಯ, ಕಟ್ಟಡ ನಿರ್ಮಾಣ, ಸ್ಥಳ ಬೇಡಿಕೆ, ಬೇಕಾದ ಸಾಮಾಗ್ರಿ-ಸಲಕರಣೆ, ಕುಡಿಯುವ ನೀರಿನ ವ್ಯವಸ್ಥೆ, ಎಸ್ಎಸ್ಎಲ್ಸಿ ಯಲ್ಲಿ ಜಿಲ್ಲೆಯ ಮುಂಚೂಣಿ, ವಸತಿ ನಿಲಯಗಳ ಸ್ಥಿತಿ, ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಸೇರಿದಂತೆ ಅಗತ್ಯ ಮಾಹಿತಿ ನೀಡಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್, ಬಳ್ಳಾರಿ ವಲಯ ಉಪಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಸೇರಿದಂತೆ ಜಿಲ್ಲಾ ಮಟ್ಟದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್