ನವದೆಹಲಿ, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ನಾಡಿನ ದಿಗ್ಗಜ ಸಾಹಿತಿ, ಮಹೋನ್ನತ ಕಾದಂಬರಿಕಾರರಾಗಿ ಕನ್ನಡಕ್ಕೆ ʼಸರಸ್ವತಿ ಸಮ್ಮಾನ್ʼ ಗೌರವ ತಂದುಕೊಟ್ಟ ಪದ್ಮಭೂಷಣ ಡಾ.ಎಸ್.ಎಲ್.ಭೈರಪ್ಪನವರ ಅಗಲಿಕೆ ತೀವ್ರ ಶೋಕವನ್ನುಂಟು ಮಾಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕಂಬನಿ ಮಿಡಿದಿದ್ದಾರೆ.
ಸಾಹಿತಿ ಭೈರಪ್ಪ ಅವರು ಅಗಾಧ ಸಂಶೋಧನೆಗಳಿಂದ, ಇತಿಹಾಸದ ವ್ಯಾಪಕ ಅಧ್ಯಯನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಅರ್ಥಪೂರ್ಣ ಸಾಹಿತ್ಯ ರಚಿಸಿದವರು. ತಮ್ಮ ಪ್ರಖರ ರಾಷ್ಟ್ರೀಯತೆಯ ಚಿಂತನೆ, ಆಳವಾದ ವಿಮರ್ಶೆ ಹೂರಣದ ಸಾಹಿತ್ಯವನ್ನು ನಾಡಿಗೆಲ್ಲ ಹಂಚಿದವರು ಎಂದು ಸಚಿವ ಜೋಶಿ ಸ್ಮರಿಸಿದ್ದಾರೆ.
ಭೈರಪ್ಪ ಅವರ ಕಾದಂಬರಿ-ಕೃತಿಗಳು ಬೇರೆ ಬೇರೆ ಭಾಷೆಗಳಲ್ಲಿ ಸಹ ಭಾಷಾಂತರ ಹೊಂದಿ ಜನಪ್ರಿಯಗೊಂಡಿದ್ದು ಈ ಮೇರು ಸಾಹಿತಿಯ ಅಗಾಧ ಪ್ರತಿಭೆಗೆ ಸಾಕ್ಷಿ. ಭೈರಪ್ಪನವರ ಅಗಲಿಕೆಯಿಂದ ನಮ್ಮ ನಾಡಿನ ಸಾರಸ್ವತ ಲೋಕ ಬಡವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿರುವ ಸಚಿವ ಪ್ರಲ್ಹಾದ ಜೋಶಿ, ಭೈರಪ್ಪ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ದೇವರು ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲೆಂದು ಪ್ರಾರ್ಥಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa