ರಾಯಚೂರು, 23 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಯ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಶಿಸ್ತು ಮತ್ತು ಬದ್ಧತೆಯನ್ನು ರೂಢಿಸಿಕೊಂಡಲ್ಲಿ ಗುಣಮಟ್ಟದ ಸಂಶೋಧನೆಗಳು ನಡೆದು, ಆ ಫಲಿತಾಂಶದಿಂದ ರೈತರ ಹಾಗೂ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಹನುಮಂತಪ್ಪ ಅವರು ತಿಳಿಸಿದ್ದಾರೆ.
ನಗರದ ಕೃಷಿ ವಿವಿಯ ಪ್ರೇಕ್ಷಾಗೃಹದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ನಿರ್ದೇಶನಾಲಯದ ವತಿಯಿಂದ ಮಂಗಳವಾರ ರಾಷ್ಟ್ರೀಯ ಸ್ನಾತಕೋತ್ತರ ಸಂಶೋಧನಾ ಸಮ್ಮೇಳನ ಹಾಗೂ ಖ್ಯಾತ ಕೃಷಿ ವಿಜ್ಞಾನಿ ದಿ.ಡಾ.ಎಸ್.ಎ. ಪಾಟೀಲ್ ಅವರ ಸ್ಮರಣಾರ್ಥ ವಿಶೇಷ ಉಪನ್ಯಾಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಸಂಶೋಧನೆಗಳಿಂದ ಗಳಿಸಿದ ಜ್ಞಾನ ಹಾಗೂ ಕೌಶಲ್ಯಗಳನ್ನು ಇತರರ ಜೊತೆ ವಿನಿಮಯ ಮಾಡಿಕೊಂಡು ಸಂಶೋಧನೆಗೆ ಸಂಬಂಧಿಸಿದ ಜ್ಞಾನವನ್ನು ಸಂಪೂರ್ಣವಾಗಿ ಪಡೆದುಕೊಳ್ಳಬೇಕು. ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಕೈಗೊಳ್ಳಲು ಅನೇಕ ಸೌಕರ್ಯಗಳನ್ನು ಒದಗಿಸಲಾಗಿದ್ದು, ಅವುಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಹವಮಾನ ವೈಫರಿತ್ಯ, ಸೆನ್ಸಾರ್ ಆಧಾರಿತ ನೀರಾವರಿ, ಕೃತಕ ಬುದ್ಧಿಮತ್ತೆ, ಭೌಗೋಳಿಕ ಸೂಚನೆ ಆಧಾರಿತ ತಂತ್ರಜ್ಞಾನ, ಇ-ಸ್ಯಾಪ್, ಇತ್ಯಾದಿ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಸಂಶೋಧನೆ ಕೈಗೊಳ್ಳಬೇಕು ಎಂದರು.
ವಿಶ್ವವಿದ್ಯಾಲಯದ ನಿವೃತ್ತ ಶಿಕ್ಷಣ ನಿರ್ದೇಶಕ ಡಾ.ಎಂ.ಜಿ.ಪಾಟೀಲ್ ಅವರು ಮಾತನಾಡಿ, ಗುಣಮಟ್ಟದ ಸಂಶೋಧನಾ ಫಲಿತಾಂಶಗಳನ್ನು ಮಂಡಿಸುವುದರ ಜೊತೆಗೆ ಆ ಸಂಶೋಧನೆಗಳು ಮುಂದೆ ರೈತರ ಕ್ಷೇತ್ರದಲ್ಲಿ ಅಳವಡಿಕೆಯಾಗಲು ಸಹಕಾರಿಯಾಗುವಂತಿರಬೇಕು ಎಂದರು.
ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಮಲ್ಲಿಕಾರ್ಜುನ ಅವರು, ಡಾ. ಎಸ್.ಎ ಪಾಟೀಲ್ ಅವರು ಅಭಿವೃದ್ಧಿಪಡಿಸಿದ ಹತ್ತಿಯ ತಳಿ ವರಲಕ್ಷ್ಮೀಯು ರೈತರಿಗೆ ಇಂದಿಗೂ ಕೂಡ ವರದಾನವಾಗಿ, ಡಾ.ಎಸ್ ಎ ಪಾಟೀಲರು ರೈತರ ಮನಸಿನಲ್ಲಿ ಅಜರಾಮರವಾಗಿ ಉಳಿಯಲಿದ್ದಾರೆ. ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಕಾರ್ಯಗತವಾಗಬೇಕೆಂದು ತಿಳಿಸಿದರು.
ಡಾ. ನಾರಾಯಣರಾವ್, ಡಾ. ಜಾಗೃತಿ ದೇಶಮಾನ್ಯ, ಡಾ.ಮಲ್ಲಿಕಾರ್ಜುನ, ಅಯ್ಯನಗೌಡರ, ಸಮ್ಮೇಳನದ ಆಯೋಜನಾ ಕಾರ್ಯದರ್ಶಿ ಹಾಗೂ ಡೀನ್ (ಸ್ನಾತಕೋತ್ತರ) ಡಾ. ಗುರುರಾಜ ಸುಂಕದ, ಡಾ. ಮಹಾದೇವಸ್ವಾಮಿ ಸೇರಿದಂತೆ ಇತರರು ಇದ್ದರು.
ಡಾ.ಸುಮಾ ನಿರೂಪಿಸಿದರು. ಸುಮಾರು 200ಕ್ಕಿಂತ ಹೆಚ್ಚು ಜನ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್