ನವದೆಹಲಿ, 13 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರ ಮಣಿಪುರ ಭೇಟಿಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ ಟೀಕಿಸಿದ್ದಾರೆ.
ಸೆಪ್ಟೆಂಬರ್ 13ರಿಂದ 15ರವರೆಗೆ ಮಿಜೋರಾಂ, ಮಣಿಪುರ, ಅಸ್ಸಾಂ ಸೇರಿದಂತೆ ಹಲವು ಈಶಾನ್ಯ ರಾಜ್ಯಗಳಿಗೆ ಪ್ರಧಾನಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಖರ್ಗೆ ಪ್ರಶ್ನೆ ಎತ್ತಿದ್ದು, “ಮಣಿಪುರದಲ್ಲಿ ಮೂರು ಗಂಟೆಗಳ ಕಾಲದ ಪ್ರಧಾನಿಯವರ ವಾಸ್ತವ್ಯ ಕಳವಳದ ಸಂಕೇತವಲ್ಲ, ಕೇವಲ ನೆಪ ಮಾತ್ರ” ಎಂದು ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಹೇಳಿದ್ದಾರೆ.
ಇಂದು ಇಂಫಾಲ ಮತ್ತು ಚುರಚಂದ್ಪುರದಲ್ಲಿ ನಡೆಯುತ್ತಿರುವ ಪ್ರಧಾನಿಯವರ ರೋಡ್ಶೋ ಕುರಿತು ಅವರು ಪ್ರತಿಕ್ರಿಯಿಸಿ, ಪ್ರಧಾನಿ ಪರಿಹಾರ ಶಿಬಿರಗಳಲ್ಲಿ ತಂಗಿರುವ ಸಂತ್ರಸ್ತರನ್ನು ಭೇಟಿಯಾಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮಣಿಪುರ ಹಿಂಸಾಚಾರದ ಬಗ್ಗೆ ಖರ್ಗೆ ಆತಂಕ ವ್ಯಕ್ತಪಡಿಸಿ, ಕಳೆದ 864 ದಿನಗಳಿಂದ ನಡೆದಿರುವ ಹಿಂಸಾಚಾರದಲ್ಲಿ ಸುಮಾರು 300 ಜನರು ಪ್ರಾಣ ಕಳೆದುಕೊಂಡಿದ್ದು, 67 ಸಾವಿರ ಮಂದಿ ಸ್ಥಳಾಂತರಗೊಂಡಿದ್ದಾರೆ ಹಾಗೂ 1,500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಂಕಿಅಂಶ ನೀಡಿದ್ದಾರೆ.
ಹಿಂಸಾಚಾರ ಆರಂಭವಾದ ನಂತರ ಪ್ರಧಾನಿ 46 ವಿದೇಶ ಪ್ರವಾಸಗಳನ್ನು ಮಾಡಿದ್ದಾರೆ. ಆದರೆ ತಮ್ಮದೇ ದೇಶದ ನಾಗರಿಕರ ನೋವು ನೋಡುವ ಸಹಾನುಭೂತಿ ತೋರಿಸಿಲ್ಲ. ಪ್ರಧಾನಿ ಮಣಿಪುರಕ್ಕೆ ಕೊನೆಯ ಬಾರಿಗೆ ಭೇಟಿ ನೀಡಿದ್ದು 2022ರ ಜನವರಿಯಲ್ಲಿ, ಅದು ಕೂಡ ಚುನಾವಣಾ ರ್ಯಾಲಿಗಳಿಗಾಗಿ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂಬುದನ್ನು ನೆನಪಿಸಿದ ಖರ್ಗೆ, ಇನ್ನು ಮತ್ತೆ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ. ಇದು ಮೌನ ಪಶ್ಚಾತ್ತಾಪವಲ್ಲ, ಆದರೆ ಪ್ರಧಾನಿ ಸ್ವತಃ ಭವ್ಯ ಸ್ವಾಗತವನ್ನು ಆಯೋಜಿಸಿಕೊಂಡಿದ್ದಾರೆ. ಇದು ಸಂತ್ರಸ್ತರ ಗಾಯಗಳ ಮೇಲೆ ಉಪ್ಪು ಎರಚಿದಂತಾಗಿದೆ ಎಂದು ಆರೋಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa