ಶಿಮ್ಲಾ, 06 ಆಗಸ್ಟ್ (ಹಿ.ಸ.) :
ಆ್ಯಂಕರ್ : ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ಮಳೆಯ ಪರಿಣಾಮವಾಗಿ ಭೂಕುಸಿತ ಮತ್ತು ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ರಾಜ್ಯದ ಸೋಲನ್, ಶಿಮ್ಲಾ, ಮಂಡಿ, ಕುಲ್ಲು ಮತ್ತು ಸಿರ್ಮೌರ್ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಶಾಲೆಗಳು, ಕಾಲೇಜುಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ.
ಮಂಡಿ, ಶಿಮ್ಲಾ, ಕುಲ್ಲು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಹಾಗೂ 613ಕ್ಕೂ ಅಧಿಕ ಸ್ಥಳೀಯ ರಸ್ತೆಗಳು ಬಂದ್ ಆಗಿವೆ. ವಿದ್ಯುತ್ ಮತ್ತು ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯೂ ತೀವ್ರವಾಗಿ ಅಸ್ತವ್ಯಸ್ತಗೊಂಡಿದ್ದು, 1491 ವಿದ್ಯುತ್ ಪರಿವರ್ತಕಗಳು ಮತ್ತು 265 ನೀರಿನ ಯೋಜನೆಗಳು ಸ್ಥಗಿತಗೊಂಡಿವೆ.
ಮಳೆಯ ಅತಿದೊಡ್ಡ ಪ್ರಮಾಣ ಸೋಲನ್ ಜಿಲ್ಲೆಯ ಕಸೌಲಿಯಲ್ಲಿ 145 ಮಿಮೀ ದಾಖಲಾಗಿದ್ದು, ಧರಂಪುರ್, ಗೋಹರ್, ಸುಂದರನಗರ, ಕಾಂಗ್ರಾ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ.
ಶಿಮ್ಲಾದ ಚಿದ್ಗಾಂವ್ ಬಳಿ ಕಾರು ಪಬ್ಬಾರ್ ನದಿಗೆ ಬಿದ್ದು ಮೂವರು ಮೃತಪಟ್ಟಿದ್ದಾರೆ. ಈ ಮಳೆಯ ಋತುವಿನಲ್ಲಿ ಇದುವರೆಗೆ 194 ಜನರು ಪ್ರಾಣ ಕಳೆದುಕೊಂಡಿದ್ದು, 1738 ಮನೆಗಳಿಗೆ ಹಾನಿಯಾಗಿದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಈಗಾಗಲೇ ₹1852 ಕೋಟಿಗೂ ಅಧಿಕ ಆರ್ಥಿಕ ನಷ್ಟ ಉಂಟಾಗಿದೆ. ಹವಾಮಾನ ಇಲಾಖೆ ಆಗಸ್ಟ್ 12ರವರೆಗೆ ಭಾರೀ ಮಳೆಯ ಮುನ್ಸೂಚನೆ ನೀಡಿದ್ದು, ಸಾರ್ವಜನಿಕರಿಗೆ ಎಚ್ಚರಿಕೆ ವಹಿಸಲು ಸಲಹೆ ನೀಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa