ಹಂಪಿ, 05 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮುಕ್ತ ಚಿಂತನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಅನೇಕ ಜನರು ಮತ್ತು ಸಂಘಟನೆಗಳು ನಿರಂತರವಾಗಿ ಹೋರಾಡುತ್ತಿದ್ದು, ಚಿಂತನೆಗೆ ಅಪಾಯವಿದೆ ಎಂಬುದನ್ನು ತೋರಿಸುತ್ತಿವೆ. ಹಿಂದೆ ಹಲವು ಚಿಂತಕರು, ಬರಹಗಾರರು, ಮತ್ತು ಪತ್ರಕರ್ತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ದಾಳಿಗೆ ಒಳಗಾಗಿರುವುದು ಜ್ವಲಂತ ನಿದರ್ಶನವಾಗಿದೆಂದು ಲೇಖಕರು ಹಾಗೂ ವಿಮರ್ಶಕರಾದ ಎಸ್. ಸಿರಾಜ್ ಅಹಮದ್ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ಸಾಹಿತ್ಯ ಅಕಾದೆಮಿ ಮತ್ತು ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಸಾಹಿತ್ಯ ವಿಮರ್ಶೆ ವಿಚಾರ ವಿಚಾರಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದರು.
ಮುಕ್ತವಾಗಿ ಮಾತನಾಡಿದವರನ್ನು ಗುರಿಯಾಗಿಸಿ ಅವರನ್ನು ಕೊಲೆ ಮಾಡುವುದು, ಬೆದರಿಕೆ, ದ್ವೇಷಪೂರಿತ ಟೀಕೆಗಳನ್ನು ಮಾಡುವುದು ಹೆಚ್ಚಾಗಿದೆ. ಇದು ವ್ಯಕ್ತಿಗಳ ಮೇಲೆ ಮಾನಸಿಕ ಒತ್ತಡವನ್ನು ಹೇರುತ್ತಿದ್ದು, ಆದರೂ ಈ ಅಪಾಯಗಳ ಹೊರತಾಗಿಯೂ, ಮುಕ್ತ ಚಿಂತನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಅನೇಕ ಜನರು ಮತ್ತು ಸಂಘಟನೆಗಳು ನಿರಂತರವಾಗಿ ಹೋರಾಡುತ್ತಿವೆ. ಇದು ಪ್ರಜಾಪ್ರಭುತ್ವದ ಅಡಿಪಾಯದ ಒಂದು ಭಾಗವಾಗಿದ್ದು, ಸಮಾಜದ ಆರೋಗ್ಯಕರ ಬೆಳವಣಿಗೆಗೆ ಇದು ಅತ್ಯಗತ್ಯವಾಗಿದೆಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಸಾಹಿತ್ಯವು `ಮಾರಾಟದ ಸರಕು' ಆಗಿದ್ದು, ಇಂದು ಯಾವುದೇ ಸಾಹಿತ್ಯಗಳು ವೈಚಾರಿಕ ಪ್ರಜ್ಞೆ ಮೂಲಕ ಕೆಲಸ ಮಾಡುತ್ತಿಲ್ಲ ಎನ್ನುವುದು ನೋವಿನ ಸಂಗತಿಯಾಗಿದೆ. ಪ್ರಮುಖವಾಗಿ ವಿಮರ್ಶಾತ್ಮಕ ಚಿಂತನೆ ಇಲ್ಲದಿದ್ದರೆ ನಾವು ಯಾವ ರೀತಿಯ ಸಮಾಜ ಕಟ್ಟಲು ಸಾಧ್ಯ. ಅಸಮಾನತೆ, ಕೇಂದ್ರೀಕೃತ ಅಧಿಕಾರ ವ್ಯವಸ್ಥೆ ಹಾಗೂ ಸರ್ವಾಧಿಕಾರಿ ಧೋರಣೆಗಳಿಂದ ಮುಕ್ತ ಚಿಂತನೆಗಳು ಮೌನವಾಗಿ, ಅವಕಾಶಗಳು ಮರೆಯಾಗಿವೆ ಎಂದು ಅಭಿಪ್ರಾಯಪಟ್ಟರು.
ಮುಕ್ತ ಚಿಂತನೆ ಅಪಾಯದಲ್ಲಿದ್ದು ಇದನ್ನು ವ್ಯವಸ್ಥಿತವಾಗಿ ನಿಯಂತ್ರಿಸುವ ಹಾಗೂ ಒತ್ತಡ ಇರುವಂತಹ ಸಂಗತಿಗಳು ನಡೆಯುತ್ತಿವೆ. ಸುರಳಿ ಸುದ್ದಿಗಳ ಅಬ್ಬರ ಹೆಚ್ಚಾಗಿದ್ದು, ಅದನ್ನು ವಿಮರ್ಶೆ ಮಾಡುವ ಮನಸ್ಸುಗಳು ಕಡಿಮೆಯಾಗಿವೆ. ಬುದ್ಧಿ ಜೀವಿಗಳ ಕಾಲದಲ್ಲಿ ಗೂಗಲ್ ಸ್ಕಾಲರ್ಗಳು ಮಾತನಾಡುತ್ತಿರುವುದು ದುರಂತವೇ ಸರಿ ಎಂದು ನುಡಿದರು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿಗ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಉದ್ಘಾಟಿಸಿ, ಮಾತನಾಡುತ್ತ ಸಾಹಿತ್ಯದ ಪ್ರಕಾರಗಳು ಯಾವ ದಿಕ್ಕಿನಲ್ಲಿ ನಡೆಯಬೇಕು ಎಂದು ವಿಮರ್ಶೆ ಅವಕಾಶ ನೀಡುತ್ತದೆ. ಹಾಗೆ ಒಂದು ಸಾಹಿತ್ಯ ಜನಮುಖಿಯಾಗಬೇಕಾದರೆ ಅದನ್ನು ವಿಮರ್ಶೆ ಮಾನದಂಡದಲ್ಲಿ ಅಳವಡಿಸಲೇಬೇಕಾಗುತ್ತದೆ. ಕನ್ನಡ ಸಾಹಿತ್ಯ ಮೊದಲಿನಿಂದಲೂ ವಿಮರ್ಶೆ ಮೂಸೆ ಒಳಗಡೆ ಅದು ಕುದಿದು ಕುದಿದು ಅದರ ಕೊನೆ ಪದರದ ಫಲಿತಾಂಶವನ್ನು ಹಾಗಾಗೇ ಪ್ರಕಟಿಸುತ್ತಲೇ ಇದೆ. ಹೊಸ ಹೊಸ ಆಲೋಚನೆಗಳಿರುವ ಸಾಹಿತ್ಯ ರಚನೆಯಾಗಬೇಕಾದರೆ ವಿಮರ್ಶೆಯು ಕೂಡ ಆಧುನಿಕ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗಬೇಕಾಗುತ್ತದೆ ಎಂದು ಹೇಳಿದರು.
ಸಾಹಿತ್ಯ ಅಕಾದೆಮಿ, ದಕ್ಷಿಣ ಪ್ರಾದೇಶಿಕ ಮಂಡಳಿಯ ಸಂಚಾಲಕರಾದ ಸಿ. ಮೃಣಾಳಿನಿ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ, ದಕ್ಷಿಣ ಭಾರತೀಯ ಸಾಹಿತ್ಯವನ್ನು ಇತರೆ ಭಾಷೆಗಳಿಗೆ ಅನುವಾದಗೊಂಡಾಗ ಅದರ ಮೌಲ್ಯ ಹೆಚ್ಚುತ್ತದೆ. ಇನ್ನೂ ಎಲ್ಲ ಭಾಷಿಕರಿಗೆ ಅದು ದೊರೆಯುತ್ತದೆ. ಸಾಹಿತ್ಯದ ಮೂಲಕ ನಮ್ಮ ಕಲೆಯ ಸಂಸ್ಕೃತಿ ಸಾಹಿತ್ಯ ಹಾಗೂ ನುಡಿಗಳ ಗಡಿ ದಾಟಿದಾಗ, ಭಾಷೆಯ ಸಂಬಂಧಗಳು ಹೆಚ್ಚು ಬೆಳೆಯುತ್ತವೆ. ಸಾಹಿತ್ಯ ಮುಕ್ತವಾದಂತೆ ಭಾಷೆ ಅಡೆತಡೆಗಳು ಕಡಿಮೆಯಾಗುತ್ತದೆ. ಸಾಹಿತ್ಯದ ವಿಮರ್ಶೆ ಎನ್ನುವುದು ಸವಾಲಿನ ಕೆಲಸವಾಗಿದ್ದು ಅದರ ಆಳವನ್ನು ಸೂಕ್ತವಾಗಿ ತಿಳಿಯಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬಸವರಾಜ ಕಲ್ಗುಡಿ ಅವರು ಮಾತನಾಡುತ್ತ, ಅನನ್ಯ ಭಾಷೆಗಳನ್ನು ತೌಲನಿಕವಾಗಿ ಅಧ್ಯಯನ ಮಾಡುವುದರಿಂದ ಭಾಷೆ ಮೌಲ್ಯ ತಿಳಿಯುತ್ತದೆ. ಇನ್ನು ಸಾಹಿತ್ಯ ಕೃತಿಯ ವಿಮರ್ಶೆಯು ಭಾಷೆ, ಲಯ, ಆಯಾಮಗಳು ಮತ್ತು ಕಲಾ ಮೀಮಾಂಸೆಗಳನ್ನು ಒಳಗೊಂಡಿರುವುದು ತುಂಬಾ ಮುಖ್ಯ ಎಂದರು. ಕೆ.ವಿ.ನಾರಾಯಣ ಅವರು ಸಂಸ್ಕೃತಿ ಮತ್ತು ವೈಯಕ್ತಿಕ ಪ್ರತಿಭೆ ಲೇಖನದಲ್ಲಿ ಭಾರತದಲ್ಲಿ ಒಂದು ಸಂಸ್ಕೃತಿ ಎನ್ನುವುದು ಇಲ್ಲ, ಹಲವು ಸಂಸ್ಕೃತಿಗಳು ಇವೆ ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು.
ಈ ವಿಚಾರಗೋಷ್ಠಿಯಲ್ಲಿ ಸಾಹಿತ್ಯ ಅಕಾದೆಮಿ ಪ್ರಾದೇಶಿಕ ಮೇಲ್ವಿಚಾರಕರಾದ ಎಲ್. ಸುರೇಶ ಅವರು ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕನ್ನಡ ಸಾಹಿತ್ಯ ವಿಭಾಗದ ಮುಖ್ಯಸ್ಥರಾದ ಡಾ. ವೆಂಕಟಗಿರಿ ದಳವಾಯಿ ಅವರು ಕಾರ್ಯಕ್ರಮವನ್ನು ವಂದಿಸಿದರು, ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್