ನವದೆಹಲಿ, 05 ಆಗಸ್ಟ್ (ಹಿ.ಸ.) :
ಆ್ಯಂಕರ್ : ದೇಶದ ಪ್ರಮುಖ ಉದ್ಯಮಿ ಮತ್ತು ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ನವದೆಹಲಿಯ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ಹಾಜರಾಗಿ ತನಿಖೆ ಎದುರಿಸಿದ್ದಾರೆ.
₹17,000 ಕೋಟಿಗೂ ಅಧಿಕ ಮೊತ್ತದ ಬ್ಯಾಂಕ್ ಸಾಲ ವಂಚನೆ ಪ್ರಕರಣ ಸಂಬಂಧವಾಗಿ ಈ ವಿಚಾರಣೆ ನಡೆದಿದೆ.
ಅಧಿಕೃತ ಮೂಲಗಳ ಪ್ರಕಾರ, ಅಕ್ರಮ ಹಣ ವಹಿವಾಟು ತಡೆ ಕಾಯ್ದೆ , 2002ರ ಅಡಿಯಲ್ಲಿ 66 ವರ್ಷದ ಅನಿಲ್ ಅಂಬಾನಿಯ ಹೇಳಿಕೆ ದಾಖಲಿಸಲಾಗುತ್ತಿದೆ. ಈ ಸಂಬಂಧ ಇಡಿ ಕಚೇರಿಯಿಂದ ಸಮನ್ಸ್ ಜಾರಿ ಮಾಡಲಾದ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿ ವಿಚಾರಣೆಗೆ ಹಾಜರಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಕಳೆದ ತಿಂಗಳು ಮುಂಬೈ ಮತ್ತು ಇತರ ಸ್ಥಳಗಳಲ್ಲಿ 35ಕ್ಕೂ ಹೆಚ್ಚು ಜಾಗಗಳಲ್ಲಿ ದಾಳಿ ನಡೆಸಿತ್ತು. ದಾಳಿಯು ಅನಿಲ್ ಅಂಬಾನಿ ಸಂಬಂಧಿತ 25 ಮಂದಿ ವ್ಯಕ್ತಿಗಳು ಮತ್ತು 50ಕ್ಕೂ ಹೆಚ್ಚು ಕಂಪನಿಗಳನ್ನು ಒಳಗೊಂಡಿದ್ದು, ಈ ಸಂದರ್ಭದಲ್ಲಿ ಲೆಕ್ಕಪತ್ರಗಳು, ಡಿಜಿಟಲ್ ದಾಖಲೆಗಳು ಸೇರಿದಂತೆ ಮಹತ್ವದ ಸಾಕ್ಷ್ಯಾಧಾರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ಇಡಿಯ ತನಿಖೆಯ ಪ್ರಕಾರ, 2017 ರಿಂದ 2019ರ ಅವಧಿಯಲ್ಲಿ ಅನಿಲ್ ಅಂಬಾನಿಯ ಸಂಸ್ಥೆಗಳು ಯೆಸ್ ಬ್ಯಾಂಕ್ನಿಂದ ಸುಮಾರು ₹3,000 ಕೋಟಿ ಮೌಲ್ಯದ ಅಕ್ರಮ ಸಾಲಗಳನ್ನು ಪಡೆದಿದ್ದವು. ಈ ಹಣದ ಬಳಕೆ ಕುರಿತಂತೆ ಅಕ್ರಮ, ಹಣಕಾಸಿನ ದುರಪಯೋಗ ಮತ್ತು ಲಾಭಾಂಶ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಗಂಭೀರ ಆರೋಪಗಳು ಕೇಳಿ ಬಂದಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa