ನವದೆಹಲಿ, 15 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಿಷನ್ ಸುದರ್ಶನ ಚಕ್ರ ಎಂಬ ಪ್ರಬಲ ಶಸ್ತ್ರಾಸ್ತ್ರ ಅಭಿವೃದ್ಧಿ ಯೋಜನೆ ಘೋಷಿಸಿದರು.
ಮಿಷನ್ ಉದ್ದೇಶ ಶತ್ರುಗಳ ದಾಳಿಯನ್ನು ತಡೆಯುವುದಷ್ಟೇ ಅಲ್ಲ, ಅವರಿಗೆ ಸೂಕ್ತ ಪ್ರತ್ಯುತ್ತರ ನೀಡುವುದು. ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನೆಯ ಮೂಲಕ ಸಿದ್ಧಪಡಿಸಲಾಗುವುದು. ಯುವಕರ ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗುವುದು ಎಂದು ಪ್ರಧಾನಿ ತಿಳಿಸಿದರು.
ಆಪರೇಷನ್ ಸಿಂಧೂರ್ ಯಶಸ್ಸಿನ ಉದಾಹರಣೆ ನೀಡಿದ ಮೋದಿ, ಪಾಕಿಸ್ತಾನದ ಇತ್ತೀಚಿನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಭಾರತ ಹೇಗೆ ಸಂಪೂರ್ಣ ವಿಫಲಗೊಳಿಸಿತು ಎಂದು ವಿವರಿಸಿದರು. 2035ರೊಳಗೆ ಆಸ್ಪತ್ರೆಗಳು, ರೈಲು ನಿಲ್ದಾಣಗಳು, ಧಾರ್ಮಿಕ ಸ್ಥಳಗಳು ಸೇರಿದಂತೆ ದೇಶದ ಎಲ್ಲಾ ಪ್ರಮುಖ ಸ್ಥಳಗಳಿಗೆ ತಂತ್ರಜ್ಞಾನ ಆಧಾರಿತ ಭದ್ರತಾ ರಕ್ಷಣೆಯನ್ನು ಒದಗಿಸಲಾಗುವುದು ಎಂದು ಘೋಷಿಸಿದರು.
ಮಿಷನ್ ಸುದರ್ಶನ ಚಕ್ರದ ಮಾಹಿತಿ:
ಸ್ಥಳೀಯ ತಂತ್ರಜ್ಞಾನ – ಭಾರತದಲ್ಲೇ ಸಂಶೋಧನೆ, ಉತ್ಪಾದನೆ, ಪರೀಕ್ಷೆ.
ಭವಿಷ್ಯದ ಯುದ್ಧ ತಂತ್ರ – ಸಾಧ್ಯ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಪ್ಲಸ್ ಒನ್ ತಂತ್ರ.
ನಿಖರತೆ – ಸುದರ್ಶನ ಚಕ್ರದಂತೆ ಗುರಿ ತಲುಪಿ ಸುರಕ್ಷಿತ ಹಿಂತಿರುಗುವ ಶಕ್ತಿ.
ಮಹಾಭಾರತದ ಶ್ರೀಕೃಷ್ಣನ ಸುದರ್ಶನ ಚಕ್ರವನ್ನು ಉಲ್ಲೇಖಿಸಿದ ಪ್ರಧಾನಿ, “ಭದ್ರತೆ ಇಲ್ಲದ ಸಮೃದ್ಧಿ ವ್ಯರ್ಥ” ಎಂದು ಹೇಳಿ, ಪ್ರತಿಯೊಬ್ಬ ನಾಗರಿಕನು ಸುರಕ್ಷಿತವಾಗಿ ಭಾವಿಸುವ ಭಾರತ ನಿರ್ಮಾಣದ ಸಂಕಲ್ಪ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa