ಬಳ್ಳಾರಿ, 03 ಜುಲೈ (ಹಿ.ಸ.) :
ಆ್ಯಂಕರ್ : ಹೆಣ್ಣುಮಕ್ಕಳನ್ನು ಅಪಾರವಾಗಿ ಗೌರವಿಸುವುದಾಗಿ ಮತ್ತು ಪೂಜಿಸುವುದಾಗಿ ಸದಾ ಹೇಳಿಕೊಳ್ಳುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ವಿ. ರವಿಕುಮಾರ್ ಅವರು ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಕುರಿತು ತೀರ ಕೀಳು ಮಟ್ಟದಲ್ಲಿ ಮಾತನಾಡಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದ್ದು, ಪೊಲೀಸರು ತಕ್ಷಣವೇ
ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರರು ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಸಂಯೋಜಕ ವೆಂಕಟೇಶ್ ಹೆಗಡೆ ಅವರು ಆಗ್ರಹಿಸಿದ್ದಾರೆ.
ಪತ್ರಕರ್ತರ ಜೊತೆ ಗುರುವಾರ ಮಾತನಾಡಿದ ಅವರು, ಕಲಬುರ್ಗಿಯ ಮಹಿಳಾ ಜಿಲ್ಲಾಧಿಕಾರಿ ಕುರಿತು ಅಸಂಬದ್ಧವಾಗಿ ಮಾತನಾಡಿ ನ್ಯಾಯಾಲಯಕ್ಕೆ ಅಲೆದಾಡುತ್ತಿರುವ ಶಾಸಕ ವಿ. ರವಿಕುಮಾರ್ ಮೊತ್ತೊಬ್ಬ ಮಹಿಳಾ ಅಧಿಕಾರಿಯ ಕುರಿತು ಅಸಭ್ಯವಾಗಿ ಮಾತನಾಡಿರುವುದು ಅವರಲ್ಲಿರುವ ಮಹಿಳಾ ವಿರೋಧಿ ಚಿಂತನೆಗಳನ್ನು ಸಾಬೀತುಪಡಿಸುತ್ತಿದೆ ಎಂದರು.
ಸ್ವಯಂ ಘೋಷಿತ ಸದ್ಗುಣಿ, ಸಂಭಾವಿತರೆಂದು ಬೊಗಳೆ ಘೋಷಣೆ ಮಾಡಿಕೊಳ್ಳುತ್ತಿರುವ ವಿ. ರವಿಕುಮಾರ್ ಅವರು, ಬಿಜೆಪಿಯಂಥಹಾ ಶಿಸ್ತಿನ ಪಕ್ಷದಲ್ಲಿರುವುದು `ಬಿಜೆಪಿಯ ಅಸಲು ಬಣ್ಣ'ವನ್ನು ಬಯಲು ಮಾಡುತ್ತಿದೆ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಇವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್