ಹುಬ್ಬಳ್ಳಿ, 25 ಜುಲೈ (ಹಿ.ಸ.) :
ಆ್ಯಂಕರ್ : ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ್ ಅವರು ಕಳಸಾ-ಬಂಡೂರಿ ವಿಷಯವಾಗಿ ನೀಡಿರುವ ಹೇಳಿಕೆ ವೈಯಕ್ತಿಕವಾಗಿದ್ದು, ಕಾನೂನಿನ ಪ್ರಕಾರ ನೀರನ್ನು ಪಡೆಯುವವರೆಗೂ ಇದನ್ನ ರಾಜಕೀಕರಣ ಮಾಡಬೇಡಿ ಎಂದು ಮಾಜಿ ಸಚಿವ ಶಂಕರ ಪಾಟೀಲ, ಮುನೇನಕೊಪ್ಪ ಅವರು ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಮಾಜಿ ಸಚಿವರು, 14.08.2018ರಲ್ಲಿ ಮಹದಾಯಿ ನ್ಯಾಯಮಂಡಳಿಯ ಮೂಲಕ ನೀರಿನ ಹಂಚಿಕೆ ಮಾಡಿದೆ. ಕರ್ನಾಟಕದ ಬೇಡಿಕೆಯಿದ್ದ 7.56 ಟಿಎಂಸಿ ಬದಲಾಗಿ 4ಟಿಎಂಸಿ ನೀರನ್ನ ಕಣಿವೆಯೇತರ ಬಳಕೆಗೆ ಮತ್ತು 8.02 ಟಿಎಂಸಿ ನೀರನ್ನ ವಿದ್ಯುಚ್ಛಕ್ತಿಗೆ, ಒಟ್ಟು 13.07 ಟಿಎಂಸಿ ನೀರನ್ನ ಹಂಚಿಕೆ ಮಾಡಲಾಗಿದೆ. ಇದರ ಜೊತೆಗೆ 1.5 ಟಿಎಂಸಿ ನೀರನ್ನು ಗೋವಾಗೆ ಮರಳಿಸುವ ಕರಾರಿದೆ.
ಮಹದಾಯಿ ನೀರನ್ನ ಕರ್ನಾಟಕಕ್ಕೆ ಕೊಡಬಾರದು ಎಂದು ಸೋನಿಯಾಗಾಂಧಿಯವರು ಹೇಳಿದ್ದಿದೆ. ತದನಂತರ ಕಳಸಾ-ಬಂಡೂರಿ ಯೋಜನೆಯನ್ನ 2000ನೇ ಇಸ್ವಿಯಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ.ಪಾಟೀಲ ಅವರು ರೂಪಿಸಿದ್ದರು. ಇದಾದ ನಂತರ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ ಅವರುಗಳ ಆಸಕ್ತಿಯಿಂದ ಬಿಜೆಪಿ-ಜೆಡಿಎಸ್ ಅಧಿಕಾರಿದಲ್ಲಿದ್ದಾಗ ಈ ಯೋಜನೆಗಾಗಿ 125 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಲ್ಲದೇ, ಜಲ ಸಂಪನ್ಮೂಲ ಸಚಿವರಾಗಿದ್ದ ಕೆ.ಈಶ್ವರಪ್ಪನವರು ಕಾಮಗಾರಿಗೆ ಚಾಲನೆ ನೀಡಿದ್ದರು.
ನಾಲೆಗೆ ಅರಣ್ಯದ ಒಳಗಿಂದಲೇ ನೀರನ್ನ ತರಬೇಕಾಗಿದೆ. ಹಲ್ಸರಾ ಮತ್ತು ಬಂಡೂರಿ ಬಳಿ ಹೊಸದಾಗಿ ಆಣೆಕಟ್ಟುಗಳನ್ನು ಕಟ್ಟಬೇಕಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯಲ್ಲಿರುವ ಕಾನೂನು ತೊಡಕನ್ನು ನಿವಾರಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದು, ಈ ವಿಷಯದಲ್ಲಿ ಅವರು ಸಫಲರಾಗಲಿದ್ದಾರೆ.
ಕಳಸಾ-ಬಂಡೂರಿ ನೀರನ್ನ ತರುವ ಜವಾಬ್ದಾರಿ ಕರ್ನಾಟಕದ ಪ್ರತಿ ರಾಜಕಾರಣಿಗಳ ಮೇಲಿದೆ. ಹಾಗಾಗಿ, ಈ ವಿಷಯದಲ್ಲಿ ಯಾರೂ ಅನಗತ್ಯ ರಾಜಕಾರಣ ಮಾಡುವುದು ರೈತ ಕುಲಕ್ಕೆ ಒಳ್ಳೆಯದಾಗುವುದಿಲ್ಲ.
ರೈತರ ಮೇಲೆ ಗೋಲಿಬಾರ್ ಮಾಡಿದ್ದು ಯಾರೂ..? ಲಾಠಿಚಾರ್ಜ್ ಮಾಡಿಸಿದ್ದು ಯಾರೂ...? ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು ಏನು ಹೇಳಿದ್ರು...? ಹೀಗೆ ಪ್ರಶ್ನಿಸುತ್ತ ಕೂತರೇ ಏನೂ ಆಗುವುದಿಲ್ಲ.
ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಲೋಕ ಸಭಾ ಸದಸ್ಯರಾಗಿ ಈಗ ಕೇಂದ್ರ ಮಂತ್ರಿಗಳಾಗಿರುವವರು ಈ ಹೋರಾಟದಲ್ಲಿ ಇದ್ದವರು. ಅವರಿಗೆ ಎಲ್ಲವೂ ತಿಳಿದಿದೆ.
ಈಗಾಗಲೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಈ ವಿವಾದವನ್ನ ಕಾನೂನಿನ ಮೂಲಕ ಬಗೆಹರಿಸುವ ಭರವಸೆ ನೀಡಿದ್ದು, ಇದು ಶೀಘ್ರದಲ್ಲೇ ಬಗೆಹರಿಯಲಿದೆ ಎಂದಿರುವ ಮಾಜಿ ಸಚಿವ ಶಂಕರ ಪಾಟೀಲ, ಮುನೇನಕೊಪ್ಪ ಅವರು, ರಾಜಕೀಯ ಮಾಡುವುದನ್ನು ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa