ರಾಯಚೂರು, 24 ಜುಲೈ (ಹಿ.ಸ.) :
ಆ್ಯಂಕರ್ : ಮಹಾನಗರಪಾಲಿಕೆಯೊಂದಿಗೆ ಉದ್ದೇಶಿತ ಸ್ವ ಸಹಾಯ ಸಂಘಗಳು ಚಟುವಟಿಕೆಗಳ ಬಗ್ಗೆ ಒಡಂಬಡಿಕೆಯಂತೆ ಮಹಾನಗರಪಾಲಿಕೆಯಿಂದ ನಿಗದಿಪಡಿಸಲಾದ ಕರ ವಸೂಲಿಯ ಗುರಿ ಸಾಧನೆಗೆ ಶ್ರಮಿಸಬೇಕು. ಪಾಲಿಕೆಯ ಅಭಿವೃದ್ಧಿಯಲ್ಲಿ ಸ್ವ-ಸಹಾಯ ಸಂಘದ ಸದಸ್ಯರ ಪಾತ್ರ ಮಹತ್ವ ಪಡೆದುಕೊಳ್ಳಲಿ ಎಂದು ರಾಯಚೂರು ಮಹಾನಗರ ಪಾಲಿಕೆಯ ಪ್ರಭಾರ ಅಧ್ಯಕ್ಷರಾದ ಸಾಜೀದ್ ಸಮೀರ್ ಅವರು ಹೇಳಿದ್ದಾರೆ.
ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ, ಸಮರ್ಪಕ ವಸೂಲಾತಿಗಾಗಿ ಸಮಿತಿಯ ಮೂಲಕ ಆಯ್ಕೆ ಮಾಡಿದ 25 ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಬಹಳಷ್ಟು ಕಾರ್ಯಗಳು ನಡೆಯುತ್ತಿವೆ. ಅಧಿಕಾರಿಗಳು ಮತ್ತು ಸಿಬ್ಬಂದಿಯ ಮಾರ್ಗದರ್ಶನದಲ್ಲಿ ಸ್ವ-ಸಹಾಯ ಸಂಘದ ಸದಸ್ಯರು ಕಾರ್ಯ ನಿರ್ವಹಿಸಬೇಕು. ಪಾಲಿಕೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಈ ವೇಳೆ ಪಾಲಿಕೆಯ ಆಯುಕ್ತರಾದ ಜುಬೀನ್ ಮೊಹಪಾತ್ರ ಅವರು ಮಾತನಾಡಿ, ಸ್ವ-ಸಹಾಯ ಸಂಘದ ಸದಸ್ಯರು ಕರ ವಸೂಲಾತಿಯ ಬಗ್ಗೆ ಸಂಬಂಧಪಟ್ಟ ಕಂದಾಯ ಶಾಖೆಯ ಅಧಿಕಾರಿ ಅಥವಾ ಸಿಬ್ಬಂದಿಗೆ ವರದಿ ಸಲ್ಲಿಸಬೇಕು. ಕ್ಷೇತ್ರದಲ್ಲಿ ಯಾವುದೇ ಅಡೆತಡೆ ಅಥವಾ ತೊಂದರೆಗಳು ಕಂಡುಬಂದಲ್ಲಿ ಮಹಾನಗರಪಾಲಿಕೆಯ ಸಂಬಂಧಪಟ್ಟ ಕಂದಾಯ ಶಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕೆಂದರು.
ಸ್ವೀಕೃತ ತೆರಿಗೆ ಹಾಗೂ ಶುಲ್ಕ ದುರುಪಯೋಗ ಆಗದಂತೆ ನೋಡಿಕೊಳ್ಳಬೇಕು. ಮಹಾನಗರ ಪಾಲಿಕೆಯಿಂದ ಸೂಚಿಸಲಾಗುವ ದಾಖಲಾತಿಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಕರ ವಸೂಲಾತಿಗಾಗಿ ಕ್ಷೇತ್ರ ಭೇಟಿ ನೀಡುವಾಗ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಬೇಕೆಂದರು.
ಆಯ್ಕೆಯಾದ ಸ್ವ-ಸಹಾಯ ಗುಂಪಿನ ಮೂಲಕವೇ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆವರೆಗೂ ಕರ ವಸೂಲಾತಿ ಕಾರ್ಯ ಮಾಡಬೇಕು. ಯಾವುದೇ ಉಪಗುತ್ತಿಗೆ ನೀಡತಕದ್ದಲ್ಲ. ಆಯ್ಕೆಯಾದ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು ಮಾತ್ರ ವಸೂಲಾತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಇತರೆ ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಇತರೆ ವ್ಯಕ್ತಿ ಅಥವಾ ಸಂಸ್ಥೆ ತೊಡಗಿಸಿಕೊಂಡು ವಸೂಲಾತಿ ಮಾಡಲು ಅವಕಾಶ ಇರುವುದಿಲ್ಲ ಎಂದರು.
ಆಯ್ಕೆಯಾದ ಮಹಿಳಾ ಸ್ವ-ಸಹಾಯ ಗುಂಪಿನ ಅಧ್ಯಕ್ಷರು ಕರ ವಸೂಲಾತಿಯಲ್ಲಿ ತೊಡಗಿಸಿಕೊಳ್ಳುವ ಗುಂಪಿನ ಸದಸ್ಯರ ಹೆಸರು, ದೂರವಾಣಿ ಸಂಖ್ಯೆ ಇತ್ಯಾದಿ ವಿವರವನ್ನು ಲಿಖಿತ ರೂಪದಲ್ಲಿ ನಗರ ಸ್ಥಳೀಯ ಸಂಸ್ಥೆಯ ಕಂದಾಯ ಶಾಖೆಗೆ ಸಲ್ಲಿಸುವುದು. ಮಹಾನಗರಪಾಲಿಕೆಯ ಆಯೋಜಿಸಲಾಗುವ ಪ್ರಗತಿ ಪರಿಶೀಲನಾ ಸಭೆಗೆ ನಿಯಮಿತವಾಗಿ ಹಾಜರಾಗಬೇಕು ಎಂದರು.
ಕರ ವಸೂಲಾತಿಗೆ ತೊಡಗಿಸಿಕೊಳ್ಳುವ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರು ಪೆÇ್ರೀತ್ಸಾಹಧನವನ್ನು ಹೊರತುಪಡಿಸಿ ಇತರೆ ಯಾವುದೇ ಭತ್ಯೆ ಸೇವೆ ಇತ್ಯಾದಿಗಳಿಗೆ ಅರ್ಹರಿರುವುದಿಲ್ಲ. ಬೇಡಿಕೆ ನೋಟಿಸ್ ನೀಡಿ ಆನ್ಲೈನ್ ಮೂಲಕ ವಸೂಲಾತಿ ಮಾಡುವುದು. ನಗದು ರೂಪದಲ್ಲಿ ವಸೂಲಾತಿ ಮಾಡಬಾರದು ಎಂದು ಸಂಬಂಧಿಸಿದ ಸದಸ್ಯರಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಡಳಿತ ಉಪ ಆಯುಕ್ತರಾದ ಸಂತೋಷ ರಾಣಿ, ಮಹಾನಗರ ಪಾಲಿಕೆ ಸಮುದಾಯ ಸಂಘಟನಾಧಿಕಾರಿ ಕೃಷ್ಣ ಕಟ್ಟಿಮನಿ ಸೇರಿದಂತೆ 14 ಸ್ವ-ಸಹಾಯ ಸಂಘದ 25 ಸದಸ್ಯರು ಇದ್ದರು. ಇದಕ್ಕೂ ಮುಂಚೆ ಸ್ವ-ಸಹಾಯ ಸಂಘದ ಸದಸ್ಯರಿಂದ ಅಧ್ಯಕ್ಷರಿಗೆ ಆಯುಕ್ತರಿಗೆ ಹಾಗೂ ಉಪ ಆಯುಕ್ತರಿಗೆ ಸನ್ಮಾನ ಮಾಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್