ಬೆಂಗಳೂರು, 15 ಜುಲೈ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಈಗ ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ಜನರು ಆತಂಕ ಪಡುವ ಅಗತ್ಯವಿಲ್ಲ. ಸರಾಸರಿ ಹೃದಯಾಘಾತದ ಪ್ರಕರಣಗಳು ಕಳೆದ ವರ್ಷದಷ್ಟೇ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಆರ್. ಪಾಟೀಲ್ ತಿಳಿಸಿದರು.
ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ವಿಕಾಸ ಸೌಧದಲ್ಲಿ
ಜಂಟಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಸರ್ಕಾರ ಈ ವಿಷಯದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜನರು ಆತಂಕಪಡಬಾರದು ಎಂದು ತಿಳಿಸಿದರು.
ಹಾಸನದಲ್ಲಿ ಹೃದಯಾಘಾತ ಪ್ರಕರಣ ಹೆಚ್ಚುತ್ತಿವೆ ಎನ್ನುವ ಸುದ್ದಿ ಕೇಳಿ ಜಯದೇವ ಆಸ್ಫತ್ರೆ ಸೇರಿದಂತೆ ಆನೇಕ ಆಸ್ಫತ್ರೆಗಳಲ್ಲಿ ರೋಗಿಗಳ ಸಂಖ್ಯೆ ಮತ್ತು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ವಿಚಿತ್ರ ಸನ್ನಿವೇಶ ಎದುರಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಕೋವಿಡ್ ಲಸಿಕೆಗೂ ಹಾಸನದಲ್ಲಿ ಸಂಭವಿಸಿದ ಹೃದಯಾಘಾತ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ. ವ್ಯಾಕ್ಸಿನ್ ಬಗ್ಗೆ ಅನುಮಾನ ಬೇಡ. ಹಾಸನ ಜಿಲ್ಲೆಯಲ್ಲಿ ಮಾತ್ರ ಪ್ರಕರಣ ಬೇರೆ ಆಗಿದೆ ಅನ್ನೋದು ತಪ್ಪು ಎಂದು ಡಾ. ಪಾಟೀಲ್ ವಿವರಿಸಿದರು.
ಹೃದಯಾಘಾತದ ಆತಂಕ ಕೈಬಿಟ್ಟು ಉತ್ತಮ ಜೀವನಶೈಲಿ, ಅಗತ್ಯ ನಿದ್ರೆ ಮತ್ತು ದೈಹಿಕ ವ್ಯಾಯಾಮ ಮಾಡುವುದು ಅಗತ್ಯ. ಹೃದಯಾಘಾತದ ರೋಗ ಲಕ್ಷಣಗಳು ಇದ್ದರೆ ಮಾತ್ರ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಿ. ಸುಖಾಸುಮ್ಮನೆ ಹೋಗಬೇಡಿ, ಎಂದು ಸಚಿವರು ಕಿವಿಮಾತು ಹೇಳಿದರು.
ಹಾಸನ ಪ್ರಕರಣದಲ್ಲಿ 24 ಮಂದಿ ಮೃತರ ಕುರಿತು ಅಧ್ಯಯನ ನಡೆಸಲಾಗುತ್ತಿದೆ. 20 ಪ್ರಕರಣಗಳಲ್ಲಿ 10 ಹಾರ್ಟ್ ಅಟ್ಯಾಕ್ ಆಗಿದೆ. ಇತರೆ ಕಾರಣಗಳಿಂದ ಸಾವು ಸಂಭವಿಸಿವೆ ಎನ್ನುವುದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ ಎಂದು ಪಾಟೀಲ ಹೇಳಿದರು.
ಜಯದೇವ ಆಸ್ಫತ್ರೆಗಳಲ್ಲಿ ಹೃದ್ರೂಗ ತಜ್ಞ ಡಾ ಕೆ. ಎಸ್. ರವೀಂದ್ರನಾಥ್ ಅವರ ನೇತೃತ್ವದಲ್ಲಿ ಅನಾಲಿಸಿಸ್ ಆಗಿದ್ದು. ಹೃದಯಾಘಾತ ಸಂಬಂಧ ಸಾವು ಹೆಚ್ಚಾಗಿಲ್ಲ. ಈ ಹಿಂದೆ ಆಗುತ್ತಿತ್ತು . ಈಗಲೂ ಆಗುತ್ತಿದೆ ಎಂದು ವಿವರಿಸಿದರು.
ಕೋವಿಡ್ ನಂತರದ ಜೀವನ ಶೈಲಿಯಿಂದ ಡಯಾಬಿಟಿಸ್ , ಬಿಪಿ ಹೆಚ್ಚಾಗಿದೆ. ಆಹಾರ ಪದ್ದತಿ ಬದಲಾಗಿದೆ , ಒತ್ತಡ ಜಾಸ್ತಿ ಆಗಿದೆ. ಈ ಮಧ್ಯೆ ಯುವಕರಲ್ಲಿ ಯಾಕೆ ಸಾವು ಆಗ್ತಿದೆ ಅಂತ ಅಧ್ಯಯನ ಮಾಡುತ್ತಿದ್ದೇವೆ ಎಂದು ಡಾ. ಪಾಟೀಲ್ ತಿಳಿಸಿದರು.
ವರ್ಷಕ್ಕೆ ಒಂದು ಬಾರಿ ಹೃದಯ ತಪಾಸಣೆ ಮಾಡಿಸಿದರೆ ಸಾಕು. ಆತಂಕದಿಂದ ಆಸ್ಪತ್ರೆಗೆ ಹೋಗೋದು ಬೇಡ ಎಂದು ಸಚಿವ ಡಾ. ಪಾಟೀಲ್ ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa