ಕಲಬುರಗಿ, 09 ಜೂನ್ (ಹಿ.ಸ.) :
ಆ್ಯಂಕರ್ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಸಂದರ್ಭದಲ್ಲಿ ಕಾಲ್ತುಳಿತದ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದ ಚಿತ್ತಾಪುರ ತಾಲೂಕಿನ ನಿವಾಸಿ ಸಂಪತಕುಮಾರ ಮಟ್ಟಿ ಅವರನ್ನು ಬಿಜೆಪಿ ನಾಯಕರು ರವಿವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.
ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಮಾಜಿ ಸಚಿವ ಬಾಬುರಾವ ಚವ್ಹಾಣ, ಚಿತ್ತಾಪುರ ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನ್ ಶೆಟ್ಟಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಯುವಕನಿಗೆ ಹಾಗೂ ಕುಟುಂಬಸ್ಥರಿಗೆ ಆತ್ಮಾಸ್ಥೈರ್ಯ ಹೇಳಿದರು.
ಬಳಿಕ ಮಾತನಾಡಿದ ನಾಯಕ ಚಲವಾದಿ ನಾರಾಯಣಸ್ವಾಮಿ, ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರು ಗಾಯಾಳು ಸಂಪತಕುಮಾರ ಅವರನ್ನು ಭೇಟಿ ಮಾಡಿ ಆರೋಗ್ಯ ಕ್ಷೇಮ ವಿಚಾರಿಸಬೇಕಾಗಿತ್ತು. ಈ ಬಡ ಕುಟುಂಬಕ್ಕೆ ನೆರವಾಗಬೇಕಾಗಿತ್ತು. ಆದರೆ, ಆ ಕೆಲಸ ಅವರಿಂದ ಸಾಧ್ಯವಾಗಿಲ್ಲ. ಬೆಂಗಳೂರಿನಲ್ಲಿ ಇದ್ದುಕೊಂಡೇ ತಮ್ಮ ಮತಕ್ಷೇತ್ರದ ಯುವಕನ ಬಗ್ಗೆ ಕಾಳಜಿ ತೋರದೆ ಟೀಕೆಗೆ ಗುರಿಯಾಗಿದ್ದಾರೆ. ಸೌಜನ್ಯಕ್ಕಾದರೂ ಯುವಕನ ಕುಟುಂಬಸ್ಥರಿಗೆ ನೆರವಾಗಬೇಕಾಗಿತ್ತು. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಬಡ ಕುಟುಂಬಕ್ಕೆ ಸರ್ಕಾರ ಹಾಗೂ ಸಚಿವರ ನಿಧಿಯಿಂದ ಪರಿಹಾರ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಪಕ್ಷದ ನಗರದ ಅಧ್ಯಕ್ಷ ಆನಂದ್ ಪಾಟೀಲ್ ನರಿಬೋಳ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ನೂನ್ಯತೆಗಳಿಂದಾಗಿ ಅಮಾಯಕರು ಬಲಿಯಾಗುತ್ತಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಡಜೀವಗಳಿಗೆ ಬೆಲೆ ಇಲ್ಲದಂತಾಗಿದೆ. ವಿಜಯೋತ್ಸವ ಸಂದರ್ಭದಲ್ಲಿ ಕಾಲ್ತುಳಿತದ ಘಟನೆಯಲ್ಲಿ ಗಂಭೀರ ಗಾಯಗಳಾಗಿ ಆತಂಕದಲ್ಲಿರುವ ಈ ಕುಟುಂಬಕ್ಕೆ ನೆರವಿನ ಅಗತ್ಯತೆ ಕಾಡುತ್ತಿದೆ. ದಾನಿಗಳು ಹಾಗೂ ಕ್ಷೇತ್ರದ ಶಾಸಕರು ಪರಿಹಾರ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಪಕ್ಷದ ತಾಲೂಕು ಪ್ರ.ಕಾರ್ಯದರ್ಶಿ ನಾಗರಾಜ ಹೂಗಾರ, ಶ್ರೀನಿವಾಸ ಹಳ್ಳಿ, ಬಾಲಾಜಿ ಬುರಬುರೆ, ರಮೇಶ ಕಾಳನೂರ, ಶಿವರಾಮ ಚವ್ಹಾಣ ಇದ್ದರು.
ಹಿಂದೂಸ್ತಾನ್ ಸಮಾಚಾರ್ / Samarth biral