ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ
ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಶಾಹಿ ಎಕ್ಸ್ಪೋರ್ಟ್ಸ್ ಸಂಸ್ಥೆ ನಿವೃತ್ತ ಜನರಲ್ ಮ್ಯಾನೇಜರ್ ಎಲ್.ರಘುರಾಜ್ ನೋಟ್ ಪುಸ್ತಕ ವಿತರಿಸಿದರು.


ಕೋಲಾರ, 09 ಜೂನ್ (ಹಿ.ಸ) :

ಆ್ಯಂಕರ್ : ಗುಣಾತ್ಮಕ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ದಿಗೆ ಸಮಾಜ, ಸಂಸ್ಥೆಗಳು ಕೈಜೋಡಿಸಬೇಕು, ಕಾನ್ವೆಂಟ್ ವ್ಯಾಮೋಹ ಬಿಟ್ಟು ಮಕ್ಕಳನ್ನು ದಾಖಲಿಸಲು ಪೋಷಕರು ಪಣ ತೊಡಬೇಕು ಎಂದು ಶಾಹಿ ಎಕ್ಸ್ಪೋರ್ಟ್ಸ್ನ ನಿವೃತ್ತ ಜನರಲ್ ಮ್ಯಾನೇಜರ್ ಎಲ್.ರಘುರಾಜ್ ಕರೆ ನೀಡಿದರು.

ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ತಮ್ಮ ನಿಸ್ವಾರ್ಥ ಸೇವೆಯ ಭಾಗವಾಗಿ ಪ್ರತಿವರ್ಷದಂತೆ ಈ ಬಾರಿಯೂ ಮಕ್ಕಳ ಕಲಿಕೆಗೆ ಕೊರತೆಯಾಗದ ರೀತಿ ನೋಟ್‌ಪುಸ್ತಕಗಳು, ಗಣಿತ ಕಲಿಕೆಗೆ ಅನುಕೂಲವಾಗಲು ಜಾಮಿಟ್ರಿ ಬಾಕ್ಸ್, ಗ್ರಾಫ್‌ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ತಿಳಿಸಿದರು.

ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸುವ ಸರ್ಕಾರಿ ಶಾಲೆಗಳ ಶೈಕ್ಷಣಿಕ ಪ್ರಗತಿಗೆ ದಾನಿಗಳ ನೆರವು ಅಗತ್ಯವಿದ್ದು, ಅರಾಭಿಕೊತ್ತನೂರು ಸರ್ಕಾರಿ ಶಾಲೆಯ ಬೆಟ್ಟದ ತಪ್ಪಲಿನ ಸುಂದರ ಪರಿಸರ ಮಕ್ಕಳ ಕಲಿಕೆಗೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಖಾಸಗಿ ಪೈಪೋಟಿ ಇಂದು ಕಾಡುತ್ತಿದೆ, ಇಂತಹ ಸಂದರ್ಭದಲ್ಲಿ ಈ ಶಾಲೆಗಳ ಬಡ ಮಕ್ಕಳಿಗೆ ಅಗತ್ಯ ಸೌಲಭ್ಯ ಒದಗಿಸುವ ಮೂಲಕ ಅವರನ್ನು ಸ್ಪರ್ಧಾತ್ಮಕ ಪೈಪೋಟಿಗೆ ಎದುರಾಗಿ ನಿಲ್ಲುವ ಶಕ್ತಿ ತುಂಬಿ ಬೆಳೆಸುವ ಅಗತ್ಯವಿದೆ ಎಂದರು.

ಶಿಕ್ಷಣದ ಜತೆಗೆ ಸಂಸ್ಕಾರವನ್ನು ಕಲಿಸುವ ಅಗತ್ಯವಿದೆ, ಓದಿನ ಜತೆ ಶಿಸ್ತುಬದ್ದ ಜೀವನದ ಪಾಠ ಮಕ್ಕಳಿಗೆ ನೀಡುತ್ತಿರುವ ಈ ಶಾಲೆ ಆವರಣದಲ್ಲಿ ಧನಾತ್ಮಕ ಶಕ್ತಿಯ ಸಂಚಲನವಾಗುತ್ತಿದೆ, ಇಲ್ಲಿನ ಪರಿಸರ,ಬೆಟ್ಟದ ತಪ್ಪಲಿನ ಸುಂದರ ಪ್ರಕೃತಿಯ ಮಡಿಲು ಕಲಿಕೆಗೆ ಹೇಳಿ ಮಾಡಿಸಿದಂತಿದೆ, ಈ ವಾತಾವರಣದಲ್ಲಿ ಮಕ್ಕಳು ಕಲಿತರೆ ಸಾಧಕರಾಗುವುದರಲ್ಲಿ ಸಂಶಯವಿಲ್ಲ ಎಂದರು.

ದೇಶ ಕಂಡ ಸಾಧಕರೆಲ್ಲಾ ಸರ್ಕಾರಿ ಶಾಲೆಯಲ್ಲೇ ಓದಿದವರು ಎಂದ ಅವರು, ಕೀಳಿರಿಮೆ ತೊರೆದು ಮಕ್ಕಳನ್ನು ಇಲ್ಲಿ ದಾಖಲಿಸುವ ಮೂಲಕ ಸಮಾನ ಶಿಕ್ಷಣಕ್ಕೆ ಹಾನಿಯಾಗುವುದನ್ನು ತಪ್ಪಿಸುವ ಹೊಣೆ ಪೋಷಕರು,ಸರ್ಕಾರ ಮತ್ತು ಸಮಾಜದ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಶಾಲೆಗೆ ಬರುವ ಮಕ್ಕಳು ಶಿಸ್ತು ರೂಢಿಸಿಕೊಳ್ಳಿ,ಪರಸ್ಪರ ದ್ವೇಷ,ಅಸೂಯೆ ತೊರೆದು ಎಲ್ಲರೂ ಸ್ನೇಹಿತರಂತೆ ಇರಬೇಕು, ಜಾತಿ,ಧರ್ಮದ ಎಲ್ಲೆ ಮೀರಿ ನಾವೆಲ್ಲಾ ಒಂದೇ ಎಂಬ ಪವಿತ್ರ ಭಾವನೆಯೊಂದಿಗೆ ಉತ್ತಮ ಸ್ನೇಹಿತರಾಗಿ ಕಲಿಕೆಯ ಧ್ಯೇಯ,ಗುರಿ ಸಾಧನೆಗೆ ಮುನ್ನಡಿ ಬರೆಯಬೇಕು,ಮೊಬೈಲ್,ಟಿವಿ ಅಗತ್ಯಕ್ಕಿಂತ ಹೆಚ್ಚು ಬಳಸದಿರಿ, ಅವುಗಳ ದಾಸರಾಗದಿರಿ ಎಂದು ಕಿವಿಮಾತು ಹೇಳಿದರು.

ಈ ಮಕ್ಕಳು, ಇಲ್ಲಿನ ಕಲಿಕೆಗೆ ಪೂರಕವಾದ ಪರಿಸರ, ಸೌಲಭ್ಯಗಳ ಸದ್ಬಳಕೆ ಕಂಡಾಗ ನೀಡುತ್ತಿರುವ ಸಹಾಯ ಸಾರ್ಥಕವೆನಿಸುತ್ತಿದೆ, ಇಂತಹ ಶಾಲೆಗೆ ಇನ್ನಷ್ಟು ನೆರವು ಒದಗಿಸುವ ಮೂಲಕ ನಿಮ್ಮೊಂದಿಗೆ ಸದಾ ಇರುವುದಾಗಿ ತಿಳಿಸಿದರು.

ಕಲಿಕೆಗೆ ಬಡತನ ಅಡ್ಡಿಯಾಗದು, ನಿಮ್ಮಲ್ಲಿ ಸಾಧನೆಯ ಛಲ ಇರಬೇಕು, ಪರಿಶ್ರಮ,ಶ್ರದ್ಧೆ ಜತೆಗಿದ್ದರೆ ಎಂತಹ ಸಾಧನೆಯೂ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ತಿಳಿಸಿ ಶಾಲೆಗ ಗೈರಾಗದಿರಿ ಎಂದು ಕಿವಿಮಾತು ಹೇಳಿದರು.

ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಸಿದ್ದೇಶ್ವರಿಮಾತನಾಡಿ, ರಘುರಾಜ್ ಅವರು ನಿವೃತ್ತರಾಗಿ ಬೆಂಗಳೂರು ಸೇರಿದ್ದರೂ, ಈ ಸರ್ಕಾರಿ ಶಾಲೆಯ ಕುರಿತು ಹೊಂದಿರುವ ಪ್ರೀತಿ, ಈ ಮಕ್ಕಳ ಮೇಲಿನ ಮಮತೆ ನಿಜಕ್ಕೂ ಅವರಲ್ಲಿನ ಸಾಮಾಜಿಕ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಧನ್ಯವಾದ ಸಲ್ಲಿಸಿದರು.

ರಘುರಾಜ್ ಅವರ ಹೃದಯವಂತಿಕೆ ಎಲ್ಲಾ ಉಳ್ಳವರಲ್ಲೂ ಕಾಣಲು ಸಾಧ್ಯವಿಲ್ಲ, ಅವರು ತಮ್ಮ ಸಂಪಾದನೆಯಲ್ಲಿ ಒಂದಷ್ಟು ಬಡ ಸರ್ಕಾರಿ ಶಾಲಾ ಮಕ್ಕಳಿಗೆ ನೆರವಾಗಬೇಕು ಎಂಬ ನಿಸ್ವಾರ್ಥತೆ ಶ್ಲಾಘನೀಯವಾಗಿದೆ ಎಂದರು.

ಅವರಿAದ ನೆರವು ಪಡೆದ ಶಾಲೆಯ ಮಕ್ಕಳು ಚೆನ್ನಾಗಿ ಓದಿ ಅವರ ನೆರವಿಗೆ ಕೃತಜ್ಞತೆ ಸಲ್ಲಿಸಿ, ನೀವು ಅವರಂತೆ ಉನ್ನತ ಸ್ಥಾನಕ್ಕೇರಿ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ನೆರವಾಗುವ ಸಂಕಲ್ಪದೊ0ದಿಗೆ ಶ್ರದ್ಧೆಯಿಂದ ಓದಿ ಎಂದರು.

ಪ್ರತಿ ವರ್ಷವೂ ಸುಮಾರು ೫೦ ಸಾವಿರದಷ್ಟು ನೋಟ್ ಪುಸ್ತಕಗಳು,ಸ್ಟೇಷನರಿಗಳ ನೆರವು ಒದಗಿಸಿ ನಿಸ್ವಾರ್ಥತೆ ಮೆರೆದಿದ್ದಾರೆ ಅವರಿಗೆ ದೇವರು ಉತ್ತಮ ಆರೋಗ್ಯ,ಐಶ್ವರ್ಯ ನೀಡಲಿ ಎಂದು ಶಾಲೆಯ ಎಲ್ಲಾ ಮಕ್ಕಳ ಪರವಾಗಿ ಹಾರೈಸುವುದಾಗಿ ನುಡಿದರು.

ಶಿಕ್ಷಕ ಶ್ರೀನಿವಾಸಲು ಕಾರ್ಯಕ್ರಮ ನಿರೂಪಿಸಿ,ಸ್ವಾಗತಿಸಿದ್ದು, ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸುಗುಣಾ, ಶ್ವೇತಾ, ಕೆ.ಲೀಲಾ, ವೆಂಕಟರೆಡ್ಡಿ, ರಮಾದೇವಿ, ಡಿ.ಚಂದ್ರಶೇಖರ್ ಮತ್ತಿತರರಿದ್ದರು.

ಚಿತ್ರ ; ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಶಾಹಿ ಎಕ್ಸ್ಪೋರ್ಟ್ಸ್ ಸಂಸ್ಥೆ ನಿವೃತ್ತ ಜನರಲ್ ಮ್ಯಾನೇಜರ್ ಎಲ್.ರಘುರಾಜ್ ನೋಟ್ ಪುಸ್ತಕ ವಿತರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande