ಕೋಲಾರ, ೦೯ ಜೂನ್ (ಹಿ.ಸ) :
ಆ್ಯಂಕರ್ : ಗಡಿನಾಡು ಕನ್ನಡ ಚಳುವಳಿ ಹೋರಾಟಗಾರ, ಕೋಲಾರ ಜಿಲ್ಲೆಯ ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ ಬಾ.ಹಾ.ಶೇಖರಪ್ಪ ಅವರಿಗೆ ಬೆಂಗಳೂರಿನ ಆತ್ಮಶ್ರೀ ಕನ್ನಡ ಪ್ರತಿಷ್ಠಾನದ ಪ್ರತಿಷ್ಠಿತ ಕರ್ನಾಟಕ ರಾಜ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರು ಕನ್ನಡ ಭವನದಲ್ಲಿ ಆತ್ಮಶ್ರೀ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ.ಗುಣವಂತ ಮಂಜು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಡಾ. ಎನ್. ಸಂತೋಷ್ ಹೆಗ್ಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಪ್ರಶಸ್ತಿ ಪ್ರದಾನ ಮಾಡಿದರು.
ಗಡಿನಾಡು ಕೆಜಿಎಫ್ನಲ್ಲಿ ಕನ್ನಡದ ಅಭಿವೃದ್ದಿಗೆ ಬಾ.ಹಾ.ಶೇಖರಪ್ಪ ಅವರು ಸುಮಾರು ಐದು ದಶಕಗಳ ಕಾಲ ಸಲ್ಲಿಸಿರುವ ಕನ್ನಡದ ಸೇವೆಯನ್ನು ಗುರುತಿಸಿ ಬೆಂಗಳೂರಿನ ಆತ್ಮಶ್ರೀ ಕನ್ನಡ ಪ್ರತಿಷ್ಠಾನವು ಕರ್ನಾಟಕ ರಾಜ್ಯ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿ, ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮತ್ತು ತೋಟಗಾರಿಕೆ ಮಾರಾಟ ಮಹಾಮಂಡಳಿ ಅಧ್ಯಕ್ಷ ಡಾ. ಬಿ.ಡಿ. ಭೂಕಾಂತ, ಆತ್ಮಶ್ರೀ ಕನ್ನಡ ಪ್ರತಿಷ್ಠಾನ ಬಳಗದ ವರಲಕ್ಷಿö್ಮ, ಶಶಿಧರ ಹಿರೇಮಠ, ಚೈತ್ರ ರಮೇಶ್, ಯಶಸ್, ಭಾರತಿ, ಮಹೇಶ್ ಸಾಗರ್ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು ದೂರದರ್ಶನದ ನಿರೂಪಕಿ ಸವಿಪ್ರಕಾಶ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ಕರ್ನಾಟಕ ರಾಜ್ಯ ರತ್ನ ಪ್ರಶಸ್ತಿ ಪಡೆದಂತಹ ಬಾ.ಹಾ.ಶೇಖರಪ್ಪ ಅವರನ್ನು ಗಡಿನಾಡು ಕೆಜಿಎಫ್ನ ಕನ್ನಡ ಸಂಘ, ಬಸವ ಸಮಿತಿ, ಕಸಾಪ, ಬೆಮೆಲ್ ಕನ್ನಡ ಮಿತ್ರರು ಮೊದಲಾದ ಸಂಘ ಸಂಸ್ಥೆಗಳವರು ಅಭಿನಂದಿಸಿದ್ದಾರೆ.
ಚಿತ್ರ : ಗಡಿನಾಡು ಕನ್ನಡ ಚಳುವಳಿ ಹೋರಾಟಗಾರರು ಬಾ.ಹಾ.ಶೇಖರಪ್ಪನವರಿಗೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಡಾ. ಎನ್. ಸಂತೋಷ್ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್