ಕೋಲಾರ, ಜೂ.೦೯ (ಹಿ.ಸ) :
ಆ್ಯಂಕರ್ : ಕೋಲಾರ-ಚಿಕ್ಕಬಳ್ಳಾಪುರ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ (ಡಿಸಿಸಿ ಬ್ಯಾಂಕ್ ಕೋಲಾರ) ಕಳೆದ ೨ ವರ್ಷಗಳಿಂದ ಆಡಳಿತ ಮಂಡಳಿ ಇಲ್ಲದೇ ಸರ್ಕಾರವು ಆಡಳಿತಾಧಿಕಾರಿಯನ್ನು ನೇಮಕ ಮಾಡಿರುತ್ತದೆ. ಆದರೆ ನೇಮಕಗೊಂಡಿರುವ ಆಡಳಿತಾಧಿಕಾರಿ ಬ್ಯಾಂಕ್ ಬಗ್ಗೆ ತನಗೇನು ಗೊತ್ತಿಲ್ಲ. ನಾನೊಬ್ಬ ಸರ್ಕಾರದಿಂದ ನೇಮಕಗೊಂಡಿರುವ ಅಧಿಕಾರಿಯಂತೆ ವರ್ತಿಸುತ್ತಿರುವುದರಿಂದ ಎರಡು ಜಿಲ್ಲೆಯ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ರೈತ ಸಂಘ ಆರೋಪಿಸಿದೆ.
ಅವಿಭಜಿತ ಕೋಲಾರ ಜಿಲ್ಲೆಯ ರೈತರು ಕೃಷಿ ಸಾಲ ಪಡೆಯಲು ಸಹಕಾರ ಸಂಘಗಳನ್ನೇ ನಂಬಿರುತ್ತಾರೆ. ಹೀಗಿರುವಲ್ಲಿ ರೈತರು ಸರ್ಕಾರ ನೀಡುವ ಬಡ್ಡಿ ಸಹಾಯಧನ ಪಡೆಯಲು ಖಾಸಗಿಯವರ ಬಳಿ ಸಾಲ ಮಾಡಿ ಬ್ಯಾಂಕ್ಗೆ ನಿಗಧಿತ ಸಮಯಕ್ಕೆ ಪಾವತಿ ಮಾಡಿ ಸಾಲವನ್ನು ನವೀಕರಣ ಮಾಡಲು ಬ್ಯಾಂಕ್ಗೆ ದಾಖಲೆಗಳನ್ನು ಸಲ್ಲಿಸಿದರೆ ಈಗಿನ ಆಡಳಿತಾಧಿಕಾರಿ ಸದರಿ ಕಡತಗಳನ್ನು ಪರಿಶೀಲನೆ ಮಾಡದೆ ಉದಾಸೀನ ಹಾಗೂ ಬೇಜವಾಬ್ದಾರಿತನವನ್ನು ಪ್ರದರ್ಶಿಸುತ್ತಿರುವುದರಿಂದ ಎರಡು ಜಿಲ್ಲೆಗಳ ರೈತರು ಖಾಸಗಿಯವರ ಸಾಲದ ಸುಳಿಗೆ ಬೀಳುತ್ತಿದ್ದಾರೆ ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ೨ ವರ್ಷಗಳಿಂದ ಬ್ಯಾಂಕು ಎರಡು ಜಿಲ್ಲೆಗಳ ರೈತರಿಗೆ ಹೊಸ ಸಾಲ ನೀಡಿರುವುದಿಲ್ಲ. ಬಾಕಿ ಇರುವ ಹಳೆ ಸಾಲವನ್ನು ರೈತರು ಪ್ರಾಮಾಣಿಕವಾಗಿ ಸರಿಯಾದ ಸಮಯಕ್ಕೆ ಪಾವತಿ ಮಾಡಿದರೂ ಸಾಲ ನವೀಕರಿಸದೇ ಇರುವುದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಮುಂಗಾರು ಆರಂಭವಾಗಿರುವುದರಿAದ ರೈತರು ಬಿತ್ತನೆ ಬೀಜ, ಕೃಷಿಪರಿಕರಗಳು, ರಸಗೊಬ್ಬರು, ಕೀಟನಾಶಕಗಳು ಸೇರಿದಂತೆ ಇನ್ನಿತರೆ ಕೃಷಿ ಕಾರ್ಯಗಳಿಗೆ ಅವಶ್ಯಕ ವಸ್ತುಗಳನ್ನು ಖರೀದಿಸಲು ಹಣದ ಕೊರತೆ ಹೆಚ್ಚಾಗಿರುವುದರಿಂದ ಬ್ಯಾಂಕ್ ಆಡಳಿತಾಧಿಕಾರಿ ಕೂಡಲೇ ಗಮನಹರಿಸಿ ಎರಡು ಜಿಲ್ಲೆಗಳ ರೈತರಿಗೆ ಅನುಕೂಲವಾಗುವಂತೆ ಅತಿ ಜರೂರಾಗಿ ಸಾಲ ನೀಡಬೇಕು ತಪ್ಪಿದಲ್ಲಿ ಬ್ಯಾಂಕಿನ ಮುಂದೆ ಎರಡು ಜಿಲ್ಲೆಯ ರೈತರೊಂದಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಬೃಹತ್ ಪ್ರತಿಭಟನೆ ನಡೆಸುವ ತೀರ್ಮಾನವನ್ನು ರೈತ ಸಂಘದ ಕಚೇರಿಯಲ್ಲಿ ನಡೆದ ಡಿಸಿಸಿ ಬ್ಯಾಂಕ್ ಅವ್ಯವಸ್ಥೆ ಹಾಗೂ ರೈತರಿಗೆ ಸಾಲ ವಿತರಣೆಯಲ್ಲಿ ಆಗುತ್ತಿರುವ ವಿಳಂಭ ಖಂಡಿಸಿ ನಡೆದ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಬಿಸನಹಳ್ಳಿ ಬೈಚೇಗೌಡ, ಹಸಿರು ಸೇನೆ ಸಂಚಾಲಕ ಕೆ. ಆನಂದಕುಮಾರ, ಬಯಲುಸೀಮೆ ಕಾರ್ಯದರ್ಶಿ ಪ್ರಭಾಕರಗೌಡ, ಜಿಲ್ಲಾಧ್ಯಕ್ಷ ಬೆಡಶೆಟ್ಟಿಹಳ್ಳಿ ರಮೇಶ್, ಜಿಲ್ಲಾ ಕಾರ್ಯಾಧ್ಯಕ್ಷ ದಿನ್ನೇಹೊಸಹಳ್ಳಿ ರಮೇಶ್, ಪಡವನಹಳ್ಳ ನರಸಿಂಹಯ್ಯ, ತಿಪ್ಪಸಂದ್ರ ಹರೀಶ್, ಅಬ್ಬಣಿ ಶ್ರೀನಿವಾಸ, ಕೋಲಾರ ತಾಲ್ಲೂಕು ಅಧ್ಯಕ್ಷ ಚಿನ್ನಾಪುರ ಮಂಜುನಾಥ ಭಾಗವಹಿಸಿದ್ದರು.
ಚಿತ್ರ : ಕೋಲಾರ - ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ನಿಂದ ಸಾಲ ವಿತರಿಸುವಂತೆ ಒತ್ತಾಯಿಸಿ ಕೋಲಾರದಲ್ಲಿ ರೈತ ಸಂಘಟನೆಯ ಪದಾಧಿಕಾರಿಗಳು ಸಭೆ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್