ಗದಗ, 26 ಜೂನ್ (ಹಿ.ಸ.) :
ಆ್ಯಂಕರ್ : ಚಿನ್ನ, ಖನಿಜ, ಗಿಡಮೂಲಿಕೆ ಸಂಪತ್ತಿನ ಕಪ್ಪತ್ತಗುಡ್ಡ ಐತಿಹಾಸಿಕ ಪರಂಪರೆಯುಳ್ಳದ್ದು, ಪರಿಶುದ್ಧ ವಾಯುವಿಗೆ ದೇಶದಲ್ಲಿಯೇ ಒಂದನೇ ಸ್ಥಾನದಲ್ಲಿರುವ ಕಪ್ಪತ್ತಗುಡ್ಡದ ಮೇಲೆ ಬಂಡವಾಳಶಾಹಿಗಳು ಕಣ್ಣಿಟ್ಟಿದ್ದಾರೆ. ಕಪ್ಪತ್ತಗುಡ್ಡವನ್ನು ಮುಂದಿನ ಜನಾಂಗಕ್ಕೆ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕಪ್ಪತ್ತಗಿರಿಯ ನಂದಿವೇರಿ ಸಂಸ್ಥಾನಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.
ಗದಗ ನಗರದ ಅಕ್ಕನ ಬಳಗ ಏರ್ಪಡಿಸಿದ್ದ ವನಮಹೋತ್ಸವ ಹಾಗೂ ಮಾಸಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿರು, ಕಪ್ಪತ್ತಗುಡ್ಡದ ಸಕಲ ಸಂಪತ್ತನ್ನು ಅರಿತ ಬ್ರಿಟೀಷರು 1892ರಲ್ಲಿ ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶವೆಂದು ಗೆಜೆಟ್ನಲ್ಲಿ ದಾಖಲಿಸಿ 144 ವರ್ಷಗಳೇ ಕಳೆದಿವೆ. ಇಂತಹ ಸಂಪದ್ಭರಿತ ಕಪತ್ರಗುಡ್ಡದ ಮೇಲೆ ನೇತಾಡುತ್ತಿರುವ ತೂಗುಕತ್ತಿಯನ್ನು ತಪ್ಪಿಸಲು, ಬಂಡವಾಳಶಾಹಿಗಳ ಕಣ್ಣಿನಿಂದ ಕಪ್ಪತ್ತಗುಡ್ಡವನ್ನು ಸಂರಕ್ಷಿಸಲು ನಾವೆಲ್ಲರೂ ಬದ್ಧತೆಯಿಂದ ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದರು. ಕಪ್ಪತ್ತಗುಡ್ಡದಿಂದಾಗಿ ಸುತ್ತಲಿನ 15 ಜಿಲ್ಲೆಗಳು ಮಳೆ-ಬೆಳೆ ಕಾಣುವಂತಾಗಿದೆ. ಇಂತಹ ಕಪ್ಪತ್ತಗುಡ್ಡಕ್ಕೆ ನಾವೆಲ್ಲರೂ ವಾರಸುದಾರರಾಗಬೇಕು ಎಂದರು.
ಕಪ್ಪತ್ತಗುಡ್ಡ ಎಲ್ಲರ ಸ್ವತ್ತು, ಗದುಗಿನ ಅಕ್ಕನ ಬಳಗೆ ಕ್ರಿಯಾಶೀಲತೆಯಿಂದ ಕಾರ್ಯಮಾಡುತ್ತಿದ್ದು, ಮಹಿಳಾ ಜಾಗೃತಿ, ಪರಿಸರ ಜಾಗೃತಿ ಮುಂತಾದ ಸಮಾಜಮುಖಿ ಕಾರ್ಯಗಳಿಂದಾಗಿ ತನ್ನ ಹಿರಿಮೆಯನ್ನು ಮೆರೆದಿದೆ. ಅಕ್ಕನ ವಚನ ಸಾಹಿತ್ಯ, ಅನುಭಾವ ಸಾಹಿತ್ಯವನ್ನು ಜನ-ಮನಕ್ಕೆ ತಲುಪಿಸುವ ಕಾರ್ಯವನ್ನು ಅಕ್ಕನ ಬಳಗೆ ಮುಂದುವರೆಸಿಕೊಂಡು ಬಂದಿದೆ ಎಂದರು.
ಅಕ್ಕನ ಬಳಗಕ್ಕೆ 11 ಲಕ್ಷ ರೂ.ಗಳನ್ನು ದೇಣಿಗೆ ನೀಡಿದ ಶಾಂತಾ ಅಂದಾನಪ್ಪ ಗೌಡರ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ವಿಮಲಾ ಪರ್ವತಗೌಡ್ರ, ಜ್ಯೋತಿ ದಾನಪಗೌಡ, ದೀಪಾ ಉಗಲಾಟದ, ಭಾಗ್ಯಾ ಗಡ್ಡಿ, ಸುಮೇದಾ ಕೋಟಿ, ವಿಜಯಲಕ್ಷ್ಮೀ ಬಿರಾದಾರ, ಪ್ರಭಾವತಿ ಚವಡಿ, ಮಂಜುಳಾ ಹೊಳಗುಂದಿ ಅವರನ್ನು ಅಕ್ಕನ ಬಳಗದ ನೂತನ ಸದಸ್ಯರನ್ನಾಗಿ ಬರಮಾಡಿಕೊಳ್ಳಲಾಯಿತು.
ಕೃಷಿ ಪ್ರಧಾನವಾದ ಭಾರತದಲ್ಲಿ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಕೃಷಿಕ ಕುಟುಂಬಗಳು ಉಳಿಯಬೇಕು, ಅವಿಭಕ್ತ ಕುಟುಬಗಳು ಹೆಚ್ಚಾಗಬೇಕು ಎಂದ ಶಿವಕುಮಾರ ಮಹಾಸ್ವಾಮಿಗಳು, ಗಂಡ-ಹೆಂಡತಿ, ಒಂದೆರಡು ಮಕ್ಕಳಿಗೆ ಸ್ಥಿಮಿತಗೊಳ್ಳುತ್ತಿರುವ ಕುಟುಂಬಗಳು ದ್ವೀಪಗಳಾಗದೇ ಮನ-ಮನೆ ಬೆಳಗುವ ದೀಪಗಳಾಗಬೇಕು ಎಂದರು.
ಹಸಿರು ಬಣ್ಣದ ಮ್ಯಾಚಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪವಿತ್ರಾ ಬಿರಾದಾರ ಅವರನ್ನು ಗೌರವಿಸಲಾಯಿತು.
ಡಾ. ಶೇಖರ ಸಜ್ಜನರ, ಆನಂದ ಪೋಸ್, ಡಾ. ಮಹಾಂತೇಶ ಬಾತಾಖಾನಿ ಮಾತನಾಡಿದರು. ರಾಜಕ್ಕೆ ಶೆಟ್ಟರ ಪ್ರಾರ್ಥಿಸಿದರು. ಅಧ್ಯಕ್ಷತೆ ವಹಿಸಿದ್ದ ಆಕ್ಕನ ಬಳಗದ ಅಧ್ಯಕ್ಷೆ ಜಯಶ್ರೀ ಹುಬ್ಬಳ್ಳಿ ಸ್ವಾಗತಿಸಿದರು. ಭಕ್ತಿಸೇವೆಯನ್ನು ಕಸ್ತೂರಿ ಹಿರೇಗೌಡ್ರ ವಹಿಸಿದ್ದರು. ಶಿವಲೀಲಾ ಅಕ್ಕಿ ನಿರೂಪಿಸಿದರು. ಕಾರ್ಯದರ್ಶಿ ಜಯಶ್ರೀ ಪಾಟೀಲ ವಂದಿಸಿದರು. ವೇದಿಕೆಯ ಮೇಲೆ ಖಜಾಂಚಿ ಶಿವಲೀಲಾ ಹಿರೇಮಠ, ಮೃತ್ಯುಂಜಯ ಸಂಕೇಶ್ವರ
ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಟ್ರಸ್ಟಿಗಳಾದ ಅಧ್ಯಕ್ಷೆ ಕಸ್ತೂರಿ ಹಿರೇಗೌಡ, ಅನ್ನಪೂರ್ಣ ಮಾಳೆಕೊಪ್ಪಮಠ, ಶಾಂತಾ ಗೌಡರ, ಉಷಾ ದಡೂತಿ, ಶಿವಲೀಲಾ ಕುರಡಗಿ, ನಾಗರತ್ನ ಹುಬ್ಬಳ್ಳಿಮಠ, ಮೀನಾಕ್ಷಿ ಸಜ್ಜನ, ಪ್ರೇಮಾ ಮೇಟಿ, ಶಾರದಾ ಹಿರೇಮಠ, ಗೀತಾ ಮಾನ್ವಿ, ಸುಜಾತಾ ಮಾನಿ, ಶಶಿರೇಖಾ ಶಿಗ್ಲಿಮಠ, ಶಾಂತಾ ಸಂಕನೂರ, ಸುವರ್ಣ ವಸ್ತ್ರದ, ಲಲಿತಾ ಬಾಳಿಹಳ್ಳಿಮಠ, ಶೈಲಾ ಹಿರೇಮಠ, ಪಾರ್ವತಿದೇವಿ ಮಾಳೆಕೊಪ್ಪಮಠ, ಸುವರ್ಣ ಹೊಸಂಗಡಿ, ಶಾರದಾ ಬೊಮ್ಮಸಾಗರ, ಶಾರದಾ ಎಸ್.ಹಿರೇಮಠ, ವಿಜಯಕುಮಾರ ಮಾಳೆಕೊಪ್ಪಮಠ, ಶಿವಕುಮಾರ ಮಾನ್ವಿ, ವಿಜಯಕುಮಾರ ಬಾಳಿಹಳ್ಳಿಮಠ, ಶಿಗ್ರಿಮಠ, ಲಿಂಗರಾಜ ಶಿಗ್ರಿಮಠ, ಉಮೇಶ ಹುಬ್ಬಳ್ಳಿ ಮುಂತಾದವರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP