ಕಲಬುರಗಿ, 12 ಜೂನ್ (ಹಿ.ಸ.) :
ಆ್ಯಂಕರ್ : ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಪತನ ದುರಂತದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ವಿಮಾನ ಜನವಸತಿ ಪ್ರದೇಶದಲ್ಲಿ ಬಿದ್ದು ಬೆಂಕಿ ಹೊತ್ತಿಕೊಂಡು ಹಲವರ ಸಾವಿಗೆ ಕಾರಣವಾಗಿರುವ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಅಹ್ಮದಾಬಾದ್ನಿಂದ ಲಂಡನ್ಗೆ ಹೊರಟ್ಟಿದ್ದ ವಿಮಾನ ಪತನವಾಗಲು ತಾಂತ್ರಿಕ ದೋಷವೋ ಅಥವಾ ಇತರೆ ಕಾರಣವೋ ಗೊತ್ತಾಗಿಲ್ಲ. ಈ ದುರ್ಘಟನೆಯಲ್ಲಿ 69ಕ್ಕೂ ಅಧಿಕ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರತೀಯರು ಮತ್ತು ಬ್ರಿಟಿಷ್ ಪ್ರಜೆಗಳು ಇದ್ದರು ಎಂಬುದೂ ತಿಳಿದುಬಂದಿದೆ. ದುರ್ಘಟನೆ ದೇಶದ ಜನತೆಗೆ ತೀವ್ರ ಆಘಾತ ನೀಡಿದೆ ಎಂದು ಖರ್ಗೆ ಹೇಳಿದ್ದಾರೆ.
ಇದೆ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿದ ಖರ್ಗೆ, ಬದುಕುಳಿದವರಿಗೆ ತುರ್ತು ಚಿಕಿತ್ಸೆ ನೀಡುವ ಕೆಲಸ ಆಗಬೇಕು. ನೊಂದವರಿಗೆ ಸರ್ಕಾರದಿಂದ ತಕ್ಷಣ ಅಗತ್ಯ ನೆರವು ಸಿಗಬೇಕು ಎಂದು ಆಗ್ರಹಿಸಿ, ದುಃಖಿತ ಕುಟುಂಬಗಳಿಗೆ ಸಹಾಯ ಮಾಡುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೂ ಕರೆ ನೀಡಿದ್ದಾರೆ.
ಇನ್ನು ಸರ್ಕಾರ ಸ್ಥಳೀಯ ಹಾನಿಗೆ ಕೂಡ ಪರಿಹಾರ ನೀಡಬೇಕು. ಈ ದುರಂತದ ಪೂರ್ಣ ತನಿಖೆ ಕೈಗೊಳ್ಳಬೇಕು. ನಿಷ್ಪಕ್ಷಪಾತವಾಗಿ, ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಥವಾ ಹಾಲಿ ನ್ಯಾಯಮೂರ್ತಿಯ ನೇತೃತ್ವದಲ್ಲಿ ಹೈಯರ್ ಲೆವೆಲ್ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ವಿಮಾನ ಬೇಗ ಹೊರಡುವಂತೆ ಒತ್ತಡವಿತ್ತು ಎಂಬ ಮಾಹಿತಿ ಲಭ್ಯವಾಗಿದ್ದು, ಈ ಆಯಾಮದಲ್ಲೂ ತನಿಖೆ ಮಾಡಬೇಕು. ಪೈಲಟ್ ತಪ್ಪೋ, ತಾಂತ್ರಿಕ ದೋಷವೋ, ಮತ್ತೇನಾದರೂ ಕಾರಣವಾಗಿರಬಹುದೆಂಬ ಬಗ್ಗೆ ಸಂಪೂರ್ಣ ಸ್ಪಷ್ಟತೆ ಹೊರ ಬರಬೇಕಾಗಿದೆ ಎಂದು ಖರ್ಗೆ ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Samarth biral