ಗಂಗಾವತಿ ನ್ಯಾಯಾಲಯದಿಂದ ಆರೋಪಿಗೆ ಶಿಕ್ಷೆ
ಕೊಪ್ಪಳ, 12 ಜೂನ್ (ಹಿ.ಸ.) : ಆ್ಯಂಕರ್ : ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ ಆರೋಪಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗಂಗಾವತಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಗೌರಾವಾನ್ವಿತ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಗಂಗಾವತಿ ನ್ಯಾಯಾಲಯದಿಂದ ಆರೋಪಿಗೆ ಶಿಕ್ಷೆ


ಕೊಪ್ಪಳ, 12 ಜೂನ್ (ಹಿ.ಸ.) :

ಆ್ಯಂಕರ್ : ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ ಆರೋಪಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗಂಗಾವತಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಗೌರಾವಾನ್ವಿತ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಕರಣದ ಫಿರ್ಯಾದುದಾರರು ಹಾಗೂ ಆರೋಪಿಯು ಸ್ನೇಹಿತಾರಾಗಿದ್ದು, ಕಳೆದ ಮೊಹರಂ ಹಬ್ಬದ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಫಿರ್ಯಾದುದಾರರು ಆರೋಪಿಗೆ ಉಳಿದ ಸ್ನೇಹಿತರ ಮುಂದೆ ಅವಮಾನ ಮಾಡಿದರು ಎಂಬ ದ್ವೇಷದಿಂದ ದಿನಾಂಕ: 27-10-2022 ರಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಚಿಕ್ಕಜಂತಕಲ್ ಗ್ರಾಮದ ಶಾದಿ ಮಹಲ್ ಹತ್ತಿರ ಫಿರ್ಯಾದುದಾರರು ಸ್ನೇಹಿತರೊಂದಿಗೆ ಮಾತನಾಡುತ್ತಾ ಕುಳಿತಾಗ ಆರೋಪಿಯು ಫಿರ್ಯಾದುದಾರರ ಕುತ್ತಿಗೆಗೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿರುತ್ತಾನೆ.

ಈ ಸಂಬಂಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖಾಧಿಕಾರಿಗಳಾದ ಮಂಜುನಾಥ ಅವರು ತನಿಖೆಯಲ್ಲಿ ಆರೋಪಿತನು ಭಾರತೀಯ ದಂಡ ಸಂಹಿತೆ ಕಲಂ 307, 504, 506 ಪ್ರಕಾರ ಅಪರಾಧವೆಸಗಿದ್ದು ತನಿಖೆಯಿಂದ ಮತ್ತು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದ್ದರಿಂದ ಆರೋಪಿ ಓಂ ಪ್ರಕಾಶ ತಂದೆ ಹೆಚ್.ಈರಣ್ಣ, ಸಾ|| ಜಂತಕಲ್ ಈತನ ಮೇಲೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಗಂಗಾವತಿಯ 1ನೇ ಹೆಚ್ಚವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಸಾಕ್ಷಿದಾರರು ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಗೌರವಾನ್ವಿತ ನ್ಯಾಯಾಧೀಶರು, ಆರೋಪಿತನು ತಪ್ಪಿತಸ್ಥನೆಂದು ತೀರ್ಪು ನೀಡಿ, ಆರೋಪಿತನಿಗೆ ಭಾರತೀಯ ದಂಡ ಸಂಹಿತೆ ಕಲಂ 307 ಅಪರಾಧಕ್ಕೆ 7 ವರ್ಷ ಕಾರಾಗೃಹ ವಾಸದ ಶಿಕ್ಷೆ, ಹಾಗೂ ರೂ.5000 ಗಳ ದಂಡ, 3 ತಿಂಗಳೊಳಗೆ ದಂಡ ಪಾವತಿಸದಿದ್ದಲ್ಲಿ 3 ತಿಂಗಳು ಸಾದಾ ಕಾರಾಗೃಹ ವಾಸದ ಶಿಕ್ಷೆ ಅನುಭವಿಸುವಂತೆ ಹಾಗೂ ಭಾರತೀಯ ದಂಡ ಸಂಹಿತೆ ಕಲಂ 506 ಅಪರಾಧಕ್ಕೆ 2 ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ಹಾಗೂ ರೂ.2000 ಗಳ ದಂಡ, 2 ತಿಂಗಳೊಳಗೆ ದಂಡ ಪಾವತಿಸದಿದ್ದಲ್ಲಿ 2 ತಿಂಗಳು ಸಾದಾ ಕಾರಾಗೃಹ ವಾಸ ಶಿಕ್ಷೆ ಅನುಭವಿಸುವಂತೆ ದಿನಾಂಕ: 09-06-2025 ರಂದು ತೀರ್ಪು ನೀಡಿದ್ದಾರೆ.

ಪ್ರಕರಣದಲ್ಲಿ ಅಭಿಯೋಜನಾ ಪರವಾಗಿ ಸರ್ಕಾರಿ ಅಭಿಯೋಜಕರಾದ ನಾಗಲಕ್ಷ್ಮೀ ಎಸ್. ಅವರು ವಾದ ಮಂಡಿಸಿರುತ್ತಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ವೆಂಕಟೇಶ ಮತ್ತು ಮಂಜುನಾಥ ರವರು ಪ್ರಕರಣದ ವಿಚಾರಣೆ ಸಮಯದಲ್ಲಿ ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸಹಕಾರ ನೀಡಿದ್ದಾರೆ ಎಂದು ಗಂಗಾವತಿಯ ಸರಕಾರಿ ಅಭಿಯೋಜಕರ ಕಾರ್ಯಾಲಯದ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande