ಕೋಲಾರ,ಮೇ.೨೯ (ಹಿ.ಸ) ಆಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ೧೪ ಬೆಳೆಗಳ ಜೊತೆ ರಾಗಿಗೂ ಬೆಂಬಲ ಬೆಲೆ ಹೆಚ್ಚಿಸಿರುವುದು ಕೋಲಾರ ಜಿಲ್ಲೆಯ ರೈತರಿಗೆ ವರದಾನವಾಗಲಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಕರ್ನಾಟಕ ಮಾವು ಮಂಡಳಿ ಅಧ್ಯಕ್ಷ ವಾಸುದೇವ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸಂಪುಟ ಸಭೆಯಲ್ಲಿ ೧೪ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಕೃಷಿಕರ ನೆರವಿಗೆ ಧಾವಿಸಿದೆ ಎಂದ್ರು. ಇನ್ನೂ ೧೪ ಬೆಳೆಗಳ ಜೊತೆ ರಾಗಿಗೆ ಬೆಂಬಲ ಬೆಲೆ ಹೆಚ್ಚಳ ಮಾಡಿರುವುದು ಜಿಲ್ಲೆಯ ರೈತರಿಗೆ ಅನುಕೂಲವಾಗುತ್ತದೆ. ರಾಗಿ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು ಅದರಲ್ಲೂ ಕೋಲಾರ ಜಿಲ್ಲೆಯ ರೈತರು ರಾಗಿ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ.
ರಾಗಿಗೆ ಗರಿಷ್ಠ ಶೇ.೧೩.೮೯ ಅಂದರೆ ಕ್ವಿಂಟಲ್ ಗೆ ೪೮೮೬ ರೂ. ನಿಗದಪಡಿಸಲಾಗಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಜಿಲ್ಲೆಯ ರೈತರಿಗೆ ಸ್ವಲ್ಪ ನೆಮ್ಮದಿ ನೀಡದಂತಾಗಿದೆ ಎಂದರು.
ದೇಶದ ಅನ್ನದಾತರ ಆದಾಯ ದ್ವಿಗುಣಗೊಳಿಸುವ ಸಂಕಲ್ಪಿತ ಹಾದಿಗೆ ಬದ್ಧವಾಗಿರುವ ಮೋದಿ ಜೀ ಅವರ ನೇತೃತ್ವದ ಎನ್.ಡಿ.ಎ ಸರ್ಕಾರ ಹಿಂದಿನ ವರ್ಷಗಳಿಗಿಂತ ಅತಿಹೆಚ್ಚು ಬೆಂಬಲ ಬೆಲೆ ನೀಡಿರುವುದು ಕೃಷಿ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯ ರೂಪಿಸುವ ನಿಟ್ಟಿನಲ್ಲಿನ ಬದ್ಧತೆ ಹಾಗೂ ರೈತ ಪರ ಕಾಳಜಿಯನ್ನು ತೋರಿಸುತ್ತದೆ. ೧೪ ಬೆಳೆಗಳಿಗೆ ಹೆಚ್ಚಿಸಿರುವ ಬೆಂಬಲ ಬೆಲೆಯಲ್ಲಿ ರಾಗಿಗೆ ಹೆಚ್ಚಿನ ಬೆಂಬಲ ಬೆಲೆ ಸಿಕ್ಕಿರುವುದು ರಾಗಿ ಬೆಳೆಯುವ ರೈತರಿಗೆ ಅನುಕೂಲವಾಗಲಿದೆ. ರಾಗಿ ಜೊತೆಗೆ ನ ಭತ್ತ, ಜೋಳ, ಕಡಲೆ, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಹತ್ತಿ ಸೇರಿದಂತೆ ವಿವಿಧ ಬೆಳೆಗಳಿಗೆ ಎಂ.ಎಸ್.ಪಿ ಹೆಚ್ಚಳ ಮಾಡಿರುವುದು ರೈತರಿಗೆ ಮತ್ತಷ್ಟು ಅನುಕೂಲವಾಗಲಿದ್ದು ಕೋಲಾರ ಜಿಲ್ಲೆಯ ರೈತರ ಪರವಾಗಿ ಕೇಂದ್ರ ಸರ್ಕಾರಕ್ಕೆ ವಾಸುದೇವ ಧನ್ಯವಾದಗಳ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್