
ನವದೆಹಲಿ, 03 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದೇಶದ ಮೊದಲ ರಾಷ್ಟ್ರಪತಿ ಹಾಗೂ ಭಾರತ ರತ್ನ ಡಾ. ರಾಜೇಂದ್ರ ಪ್ರಸಾದ್ ಅವರ ಜನ್ಮ ವಾರ್ಷಿಕೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಅವರಿಗೆ ಗೌರವ ಸಲ್ಲಿಸಿದರು.
ಪ್ರಧಾನಿ ಮೋದಿ ತಮ್ಮ ಎಕ್ಸ್ ಪೋಸ್ಟ್ನಲ್ಲಿ, ಡಾ. ಪ್ರಸಾದ್ ಅವರ ಸ್ವಾತಂತ್ರ್ಯ ಹೋರಾಟದಿಂದ ಸಂವಿಧಾನ ಸಭೆಯ ಅಧ್ಯಕ್ಷರ ಅವಧಿವರೆಗಿನ ಸೇವೆ ಸ್ಪೂರ್ತಿದಾಯಕವಾಗಿದ್ದುದನ್ನು ಸ್ಮರಿಸಿ, ಅವರ ಸರಳತೆ, ತ್ಯಾಗಮಯ ಜೀವನ ಮತ್ತು ರಾಷ್ಟ್ರೀಯ ಏಕತೆಗೆ ಅಚಲವಾದ ಬದ್ಧತೆ ಭವಿಷ್ಯದ ಪೀಳಿಗೆಗಳಿಗೆ ಮಾರ್ಗದರ್ಶಕ ಎಂದು ಹೇಳಿದ್ದಾರೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸಂವಿಧಾನ ಸಭೆಯ ಅಧ್ಯಕ್ಷರಾಗಿ ಡಾ. ಪ್ರಸಾದ್ ತೋರಿದ ದೂರದೃಷ್ಟಿ, ತಾಳ್ಮೆ ಮತ್ತು ಪ್ರಜಾಪ್ರಭುತ್ವ ನಂಬಿಕೆಯು ಭಾರತದ ಆಡಳಿತ ವ್ಯವಸ್ಥೆಯಲ್ಲಿ ಅಳಿಸಲಾಗದ ಗುರುತು ಬಿಟ್ಟಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂವಿಧಾನ ರಚನೆಯಲ್ಲಿ ಡಾ. ಪ್ರಸಾದ್ ಅವರ ಪಾತ್ರವನ್ನು ಅಪ್ರತಿಮ ಎಂದು ಶ್ಲಾಘಿಸಿದ್ದರು. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಅವರ ನೈತಿಕ ನಾಯಕತ್ವ ಹಾಗೂ ಜನಸೇವೆಯ ಪರಂಪರೆ ದೇಶಕ್ಕೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ಡಾ. ರಾಜೇಂದ್ರ ಪ್ರಸಾದ್ ಅವರು 1884ರ ಡಿಸೆಂಬರ್ 3ರಂದು ಬಿಹಾರದ ಸರಣ್ ಜಿಲ್ಲೆಯ ಜಿರಾದೇಯಿಯಲ್ಲಿ ಜನಿಸಿದರು. ಚಂಪಾರಣ್ ಸತ್ಯಾಗ್ರಹದಿಂದ ಸ್ವಾತಂತ್ರ್ಯ ಚಳವಳಿಯ ವಿವಿಧ ಹಂತಗಳವರೆಗೆ ಅವರು ಪ್ರಮುಖ ಪಾತ್ರವಹಿಸಿ ದೇಶಕ್ಕೆ ಅಪಾರ ಸೇವೆ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa