ಕಾಶಿ ವಿಶ್ವೇಶ್ವರನ ಕಲ್ಯಾಣೋತ್ಸವ, ತೆಪ್ಪೋತ್ಸವಕ್ಕೆ ಹರಿದು ಬಂದ ಭಕ್ತಸಾಗರ
ಕಾಶಿ ವಿಶ್ವೇಶ್ವರನ ಕಲ್ಯಾಣೋತ್ಸವ,ತೆಪ್ಪೋತ್ಸವಕ್ಕೆ ಹರಿದು ಬಂದ ಭಕ್ತಸಾಗರ
ಚಿತ್ರ: ಕೋಲಾರ ದಕ್ಷಿಣ ಕಾಶಿ ಖ್ಯಾತಿಯ ಅಂತರಗಂಗೆ ಕಾಶೀ ವಿಶ್ವೇಶ್ವರ ಸನ್ನಿಯಲ್ಲಿ ನಡೆದ ಶಿವ ಲಕ್ಷ ದೀಪೋತ್ಸವದಲ್ಲಿ ದೀಪಗಳಿಂದ ಕಂಗೊಳಿಸುತ್ತಿರುವ ಶಿವನ ಸನ್ನಿಧಿ, ಕಲ್ಲಿನ ಬಸವನಿಂದ ನೀರು ಬರುವ ಅಂತರಗಂಗೆಯ ವೈಭವ.


ಕೋಲಾರ, ೦೩ ಡಿಸೆಂಬರ್(ಹಿ.ಸ) :

ಆ್ಯಂಕರ್ : ದಕ್ಷಿಣ ಕಾಶಿ ಎಂದೇ ಖ್ಯಾತವಾಗಿರುವ ನಗರದಲ್ಲಿ ಹೊರವಲಯದ ಅಂತರಗಂಗೆಯಲ್ಲಿ ಕೆಎಸ್‌ಆರ್‌ಪಿ ಪೇದೆ ಗೋಪಾಲ್ ಮತ್ತು ಕುಟುಂಬದವರು ಬುಧವಾರ ರಾತ್ರಿ ನಡೆಸಿಕೊಟ್ಟ ಶಿವ ಲಕ್ಷ ದೀಪೋತ್ಸವ ಮತ್ತು ತೆಪ್ಪೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಹರಿದು ಬಂದ ಭಕ್ತ ಸಾಗರ ಸಾಕ್ಷಿಯಾಯಿತು.

ಅಂತರಗಂಗೆಯಲ್ಲಿ ಕಳೆದ ೨೦ ವರ್ಷಗಳಿಂದಲೂ ಅದ್ದೂರಿಯಾಗಿ ನಡೆಯುತ್ತಿರುವ ಶಿವ ಲಕ್ಷ ದೀಪೋತ್ಸವವನ್ನು ಇಲ್ಲಿನ ಕಾಶೀ ವಿಶ್ವೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ನಡೆಸಿಕೊಂಡು ಬರುತ್ತಿರುವ ಮುಖ್ಯಪೇದೆ ಬಿ.ಗೋಪಾಲ್ ಮತ್ತು ಕುಟುಂಬದವರು ಇದನ್ನು ಸಾರ್ವಜನಿಕ ಉತ್ಸವವನ್ನಾಗಿ ಆಚರಿಸುವ ಮೂಲಕ ಗಮನ ಸೆಳೆದರು.

ತೆಪ್ಪೋತ್ಸವದ ಜತೆಗೆ ವಿಶಾಲಾಕ್ಷಿ ಸಮೇತ ಕಾಶಿ ವಿಶ್ವೇಶ್ವರ ಸ್ವಾಮಿಯ ಕಲ್ಯಾಣೋತ್ಸವವನ್ನು ಸಹಾ ಏರ್ಪಡಿಸಿದ್ದು, ಜನರನ್ನು ಭಕ್ತಿಸಾಗರದಲ್ಲಿ ಮುಳುಗಿಸಿತ್ತು.

ಚಳಿಯ ನಡುವೆಯೂ ಅಂತರಂಗೆಯ ಕ್ಷೇತ್ರವನ್ನು ಒಂದು ಸಾವಿರ ಕೆಜಿ ಎಣ್ಣೆ ಹಾಕಿ ಲಕ್ಷಾಂತರ ಹಣತೆಗಳಿಂದ ಬೆಳಗಿಸಿದ್ದು, ವಿಶೇಷ ಹೂವಿನ ಅಲಂಕಾರವನ್ನು ನಡೆಸಿದ್ದು, ಕಲ್ಲು ಬಸವನ ಬಾಯಿಂದ ಸದಾ ನೀರು ಜಿನುಗುವ ಅಂತರಂಗೆ ದೇವಾಲಯದ ಕಲ್ಯಾಣಿಯಲ್ಲಿ ತೆಪ್ಪೋತ್ಸವವನ್ನು ನಡೆಸಿದ್ದು ನೆರೆದಿದ್ದ ಸಹಸ್ರಾರು ಭಕ್ತರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

ವಿಶಿಷ್ಟ ರೀತಿಯಲ್ಲಿ ಶಿವನಿಗೆ ಅಲಂಕಾರ

ಪ್ರತಿ ವರ್ಷವೂ ಕಾಶಿ ವಿಶ್ವೇಶ್ವರಸ್ವಾಮಿಗೆ ಹೂವಿನ ಅಲಂಕಾರ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಇಡೀ ಗರ್ಭಗುಡಿಯನ್ನು ಕೈಲಾಸ,ಹಿಮ ಪರ್ವತದಂತೆ ಅಲಂಕರಿಸಲಾಗಿದ್ದು, ಗೌರಿಶಂಕರ ಶಿಖರದಲ್ಲಿ ಶಿವನು ಕುಳಿತಂತೆ ಮಾಡಿದ್ದು, ಜನತೆ ಶ್ರದ್ದಾಭಕ್ತಿಗಳಿಂದ ನಮಿಸಿ ಸಂಭ್ರಮಿಸಿದರು.

ಶಿವ ಲಕ್ಷ ದೀಪೋತ್ಸವ, ತೆಪ್ಪೋತ್ಸವಕ್ಕೆ ನಾದಸ್ವರ ಮತ್ತು ಸ್ಯಾಕ್ಯೋಫೋನ್ ವಾದನದ ಹಿಮ್ಮೇಳ ಗಮನ ಸೆಳೆಯಿತು.

ಮಧ್ಯರಾತ್ರಿ ೧ ಗಂಟೆಯವರೆಗೂ ನಡೆದ ನಾದಸ್ವರ ಮತ್ತಿತರ ಕಾರ್ಯಕ್ರಮಗಳು ಭಕ್ತರನ್ನು ರಂಜಿಸಿದ್ದು, ಇಡೀ ಅಂತರಗಂಗೆ ಹಣತೆಗಳಿಂದ ಕಂಗೊಳಿಸುತ್ತಿತ್ತು.

ಸಂಜೆ ಆರು ಗಂಟೆಯಿಂದಲೂ ಅಂತರಂಗೆ ಬೆಟ್ಟದತ್ತ ತೆರಳಿದ ಭಕ್ತರ ಸಮೂಹವನ್ನು ನಿಯಂತ್ರಿಸುವಲ್ಲಿ ಪೊಲೀಸರು ಸಹಕರಿಸಿದರೆ, ಶಿವ ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಂಡ ಎಲ್ಲಾ ಭಕ್ತಾಗಳಿಗೂ ಪ್ರಸಾದ ವಿನಿಯೋಗಿಸಲಾಯಿತು.

ಇಡೀ ರಾತ್ರಿ ಅಂತರಗಂಗೆ ಬೆಟ್ಟದ ತಪ್ಪಲಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿ, ಜಾತ್ರೆಯ ಕಳೆ ಕಂಡು ಬಂತು. ಅರ್ಚಕರಾದ ಮಂಜುನಾಥ ದೀಕ್ಷಿತ್, ಸತ್ಯಸೋಮಶಂಕರ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾಕೈಂಕರ್ಯಗಳು ನಡೆದಿದ್ದು, ಕಿಲಾರಿಪೇಟೆ ಬಿ. ಶ್ರೀನಿವಾಸ್, ರಾಮಕೃಷ್ಣ, ಮಣಿ, ಮುನಿವೆಂಕಟ, ಕೆ.ವಿ.ಮಂಜು, ಆರ್.ರಮೇಶ್, ಡೆಕೋರೇಷನ್ ಶಂಕರ್, ಮಂಜು, ರವಿಪ್ರಿಂಟರ್‍ಸ್ ಮಂಜು, ಪಿ.ವೆಂಕಟೇಶ್, ನಾಗೇಶ್,ಬಜರಂದಳ ಬಾಲಾಜಿ, ಅಪ್ಪಿ, ಕ್ಯಾಪ್ಟನ್ ಮಂಜು,ಮುನಿರಾಜು ಮತ್ತಿತರರಿದ್ದರು.

ಚಿತ್ರ : ಕೋಲಾರ ದಕ್ಷಿಣ ಕಾಶಿ ಖ್ಯಾತಿಯ ಅಂತರಗಂಗೆ ಕಾಶೀ ವಿಶ್ವೇಶ್ವರ ಸನ್ನಿಯಲ್ಲಿ ನಡೆದ ಶಿವ ಲಕ್ಷ ದೀಪೋತ್ಸವದಲ್ಲಿ ದೀಪಗಳಿಂದ ಕಂಗೊಳಿಸುತ್ತಿರುವ ಶಿವನ ಸನ್ನಿಧಿ, ಕಲ್ಲಿನ ಬಸವನಿಂದ ನೀರು ಬರುವ ಅಂತರಗಂಗೆಯ ವೈಭವ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande