
ನವದೆಹಲಿ, 02 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯ ಸಭೆಯಲ್ಲಿ ಮಂಗಳವಾರ ಎಸ್ಐಆರ್ ವಿಚಾರ ಚರ್ಚೆಗೆ ಒತ್ತಾಯಿಸಿದ ಪ್ರತಿಪಕ್ಷಗಳ ಗದ್ದಲ ಹೆಚ್ಚಿದ ಹಿನ್ನೆಲೆಯಲ್ಲಿ ಸಭೆಯನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.
ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಗದ್ದಲದ ನಡುವೆಯೂ ಶೂನ್ಯ ಸಮಯ ಮುಂದುವರೆಸಿದರು. ಆದರೆ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನಿಯಮ 267 ಅಡಿಯಲ್ಲಿ ಸಲ್ಲಿಸಿದ ನೋಟಿಸ್ಗಳ ಮೇಲೆ ಚರ್ಚೆ ನಡೆಸಬೇಕೆಂದು ಒತ್ತಾಯಿಸಿದರು. ಎಸ್ಐಆರ್ ಚರ್ಚೆಯನ್ನು ತಪ್ಪಿಸುತ್ತಿದ್ದಾರೆ ಎಂದು ಅವರು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ವಿರುದ್ಧ ಆರೋಪಿಸಿದರು.
ಸದನದ ನಾಯಕ ಜೆ.ಪಿ. ನಡ್ಡಾ, ಪ್ರತಿ ಪಕ್ಷದ ನಾಯಕರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವಂತೆ ತಿಳಿಸಿದರು. ಚರ್ಚೆಯನ್ನು ತಡೆಹಿಡಿಯಲು ಯಾವುದೇ ಸೂಕ್ತ ಕಾರಣ ನೀಡಲಾಗಿಲ್ಲ ಎಂದು ಡಿಎಂಕೆ ಸದಸ್ಯ ತಿರುಚಿ ಶಿವ ಕೂಡ ಆಕ್ಷೇಪಿಸಿದರು.
ಗದ್ದಲ ಮುಂದುವರೆದ ಹಿನ್ನೆಲೆಯಲ್ಲಿ ಸಭಾಪತಿಗಳು ಕಲಾಪವನ್ನು 2 ಗಂಟೆಯವರೆಗೆ ಮುಂದೂಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa