




ಬಳ್ಳಾರಿ, 01 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಏಡ್ಸ್ ಅಪಾಯಕಾರಿ ಕಾಯಿಲೆಯಾಗಿದ್ದು, ಇದಕ್ಕೆ ಚಿಕಿತ್ಸೆಗಿಂತ ಮೊದಲು ಮುಂಜಾಗ್ರತೆ ಕ್ರಮವಹಿಸುವುದು ಅತ್ಯವಶ್ಯಕ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್.ಎನ್ ಹೊಸಮನೆ ಅವರು ತಿಳಿಸಿದ್ದಾರೆ.
ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ ಜಿಲ್ಲಾ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ `ಹೆಚ್ಐವಿ/ಏಡ್ಸ್ ಹರಡುವಿಕೆಯನ್ನು ನಿಯಂತ್ರಿಸಲು ಇರುವ ಅಡೆತಡೆಗಳನ್ನು ಕೊನೆಗಾಣಿಸೋಣ’ ಘೋಷವಾಕ್ಯದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ನಡೆದ ವಿಶ್ವ ಏಡ್ಸ್ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾರಕ ರೋಗಗಳಲ್ಲಿ ಜಗತ್ತನ್ನೇ ಕಾಡಿದ ರೋಗಗಳಲ್ಲಿ ಏಡ್ಸ್ ರೋಗವು ಒಂದು. 1981 ರಲ್ಲಿ ಆಫ್ರಿಕಾ ಖಂಡದಲ್ಲಿ ಕಾಣಿಸಿಕೊಂಡ ಈ ರೋಗ ಕ್ರಮೇಣವಾಗಿ 1984ರಲ್ಲಿ ಭಾರತದಲ್ಲಿಯೂ ಕಂಡುಬಂದಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಈ ಕಾಯಿಲೆಯನ್ನು ಗಂಭೀರವಾಗಿ ಪರಿಗಣಿಸಿ ಹೆಚ್.ಐ.ವಿ ಸೋಂಕಿತರಿಗೆ ಹಲವು ರೀತಿಯ ಸೌಲಭ್ಯಗಳ ಮುಖಾಂತರ ನೆರವಾಗಲು ಮುಂದಾದವು ಎಂದು ಹೇಳಿದರು.
2013 ರ ಅಂಕಿ-ಸಂಖ್ಯೆಗಳ ಪ್ರಕಾರ ದೇಶದಲ್ಲಿ 38 ಲಕ್ಷ ಮಂದಿ ಹೆಚ್ಐವಿ ಸೋಂಕಿತರಿದ್ದು, ಪ್ರಪಂಚದಲ್ಲಿ 3.8 ಕೋಟಿ ಮಂದಿ ಏಡ್ಸ್ ರೋಗದಿಂದ ಬಳಲುತ್ತಿದ್ದಾರೆ. ಸಮಾಜದಲ್ಲಿರುವ ಎಲ್ಲರೂ ಒಂದಾಗಿ ಏಡ್ಸ್ ವಿರುದ್ಧ ಜಾಗೃತಿಯೊಂದಿಗೆ ಹೋರಾಡಿದರೆ ಹೆಚ್.ಐ.ವಿ ವೈರಸ್ ಅನ್ನು ಮುಕ್ತಗೊಳಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಅವರು ಅಧ್ಯಕ್ಷತೆ ವಹಿಸಿ, ಹೆಚ್ಐವಿ/ಏಡ್ಸ್ ನಿರ್ಮೂಲನೆಗಾಗಿ ಶ್ರಮಿಸುತ್ತಿರುವ ಸರ್ಕಾರಿ ಮತ್ತು ಶಾಸಗಿ ಸಂಸ್ಥೆಗಳ ಸೇವೆ ಅಪಾರವಾಗಿದೆ ಎಂದು ಅಭಿನಂದಿಸಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಯೂ ಆದ ಡಾ.ಇಂದ್ರಾಣಿ ವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ 4,53,000 ಜನರಿಗೆ ಹೆಚ್ಐವಿ ಪರೀಕ್ಷೆ ನಡೆಸಲಾಗಿದ್ದು, 13,692 ಮಂದಿಗೆ ಸೋಂಕು ಇರುವುದು ದೃಢವಾಗಿದೆ. 2,127 ಗಂಡು, 2,704 ಹೆಣ್ಣು, 34 ಲಿಂಗತ್ವ ಅಲ್ಪಸಂಖ್ಯಾತರು, 329 ಮಕ್ಕಳು ಒಳಗೊಂಡು 5194 ಮಂದಿ ಎಆರ್ಟಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಅದೇರೀತಿಯಾಗಿ 2025ರ ಏಪ್ರಿಲ್ ನಿಂದ ಇಲ್ಲಿಯವರೆಗೆ 25,099 ಗರ್ಭಿಣಿ ಮಹಿಳೆಯರನ್ನು ಹೆಚ್ಐವಿ ಪರೀಕ್ಷೆಗೆ ಒಳಪಡಿಸಿದ್ದು, ಹೊಸದಾಗಿ 06 ಮಂದಿ ಗರ್ಭೀಣಿ ಮಹಿಳೆಯರಲ್ಲಿ ಸೋಂಕು ಪಾಸಿಟಿವ್ ಆಗಿದೆ. ಎಆರ್ಟಿ ಕೇಂದ್ರದಲ್ಲಿ 28 ಗರ್ಭಿಣಿ ಮಹಿಳೆಯರಿದ್ದು 15 ಜನರ ಮಕ್ಕಳಿಗೆ ಪರೀಕ್ಷೆ ಕೈಗೊಂಡಿದ್ದು, 02 ಮಕ್ಕಳಿಗೆ 18 ತಿಂಗಳ ಕಳೆದ ಮೇಲೆ ಸೋಂಕು ದೃಢಪಟ್ಟಿದೆ. ಇದರಿಂದ ಮುಂದಿನ ದಿನಗಳಲ್ಲಿ ತಾಯಿಯಿಂದ ಮಗುವಿಗೆ ಹರಡುವ ಸೋಂಕನ್ನು ತಡೆಯಬೇಕಿದೆ. ಅದೇರೀತಿಯಾಗಿ 2030ರ ವೇಳೆಗೆ ಹೊಸ ಹೆಚ್ಐವಿ ಸೋಂಕು ಪ್ರಕರಣಗಳನ್ನು ಶೂನ್ಯಕ್ಕೆ ತರಲು ಶ್ರಮಿಸಬೇಕಿದೆ ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು, ಏಡ್ಸ್ ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಎಷ್ಟರ ಮಟ್ಟಿಗೆ ದುರ್ಬಲಗೊಳಿಸುತ್ತದೆಯೆಂದರೆ ದೇಹವು ಸಣ್ಣ ಸೋಂಕುಗಳ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ. ಇದು ಸೋಂಕುಗಳ ಹೆಚ್ಚಳಕ್ಕೆ ಮತ್ತು ಅಂತಿಮವಾಗಿ ಸಾವಿಗೆ ಕಾರಣವಾಗುತ್ತದೆ. ಹಾಗಾಗಿ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣವು ನಿರ್ಣಾಯಕವಾಗಿದೆ ಎಂದು ಹೇಳಿದರು.
ಅಮೇರಿಕಾದ ಗಿಲಿಯಾಡ್ ಸೈನ್ಸಸ್ ಔಷಧ ಸಂಸ್ಥೆ ಲೆನಾಕಪವಿರ್ (ಯೆಜ್ಟುಗೊ) ಚುಚ್ಚುಮದ್ದನ್ನು ಅಭಿವೃದ್ಧಿಪಡಿಸಿದ್ದು, ಪ್ರಾಯೋಗಿಕ ಹಂತದಲ್ಲಿದೆ. ಈ ಕುರಿತು ದಿನಪತ್ರಿಕೆಯೊಂದರಲ್ಲಿ ವರದಿಯಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಜಿಲ್ಲೆಯಲ್ಲಿ ಹೆಚ್.ಐ.ವಿ/ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಗಣನೀಯ ಸೇವೆ ಮತ್ತು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡ ಕೆ.ಎಸ್.ಎ.ಪಿ.ಎಸ್ ಸಿಬ್ಬಂದಿಗಳು, ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಜಿಲ್ಲಾ ಅಸಾಂಕ್ರಾಮಿಕ ಅಧಿಕಾರಿ ಡಾ.ವೀರೇಂದ್ರ ಕುಮಾರ್, ಎಆರ್ ಟಿ ವೈದ್ಯಾಧಿಕಾರಿ ಡಾ.ದಿನೇಶ್ ಗುಡಿ, ರಾಜ್ಯ ಸಂಯೋಜಕ ರಮೇಶ್, ನಿತ್ಯಜೀವನ ಸಂಸ್ಥೆಯ ಅಧ್ಯಕ್ಷರಾದ ಹೇಮಲತ, ಡ್ಯಾಪ್ಕು ಜಿಲ್ಲಾ ಮೇಲ್ವಿಚಾರಕ ಬಿ.ಗಿರೀಶ್, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ಬಿಎಂಸಿಆರ್ ಸಿ ವೈದ್ಯಾಧಿಕಾರಿ ಡಾ.ಸಂಗೀತ ಸೇರಿದಂತೆ ಮೈತ್ರಿ, ಸಂಗಮ, ಸೌಖ್ಯ ಬೆಳಕು ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ರಕ್ತಕೇಂದ್ರದ ಅಧಿಕಾರಿಗಳು, ಐಟಿಸಿಟಿ, ಎನ್ಟಿಪಿ, ಎಆರ್ಟಿ ಸಿಬ್ಬಂದಿ, ಇಲಾಖೆಯ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಗಮನ ಸೆಳೆದ ಜಾಥಾ :
ಏಡ್ಸ್ ತಡೆಗಟ್ಟಲು ಅರಿವು ಮೂಡಿಸುವ ಜಾಥಾವು ನೋಡುಗರ ಗಮನ ಸೆಳೆಯಿತು. ಜಾಥಾವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಮುಂಭಾಗದಿಂದ ಆರಂಭಗೊಂಡು ಸಂಗಂ ವೃತ್ತ- ರಾಘವೇಂದ್ರ ಸಿನಿಮಾ ಮಂದಿರ ರಸ್ತೆ- ಕೆ.ಸಿ.ರಸ್ತೆ- ಮೀನಾಕ್ಷಿ ವೃತ್ತದ ಮೂಲಕ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಗಡಿಗಿ ಚೆನ್ನಪ್ಪ ವೃತ್ತ- ಸಂಗಂ ವೃತ್ತದ ಮಾರ್ಗವಾಗಿ ಮರಳಿ ಜಿಲ್ಲಾ ಆಸ್ಪತ್ರೆಯ ಆವರಣಕ್ಕೆ ತಲುಪಿ ಅಂತ್ಯಗೊಂಡಿತು.
ಈ ವೇಳೆ ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು, ಕಾರ್ಯಕರ್ತರು ಸಾರ್ವಜನಿಕರು ಏಡ್ಸ್ ಕಾಯಿಲೆಯ ವಿರುದ್ದ ಜಾಗೃತಿ ಮೂಡಿಸುವ ಫಲಕಗಳನ್ನು ಹಾಗೂ ಬ್ಯಾನರ್ ಗಳನ್ನು ಪ್ರದರ್ಶಿಸಿದರು. ಈ ವೇಳೆ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸಿ, ಜಾಗೃತಿ ಮೂಡಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್