
ಬೆಂಗಳೂರು, 25 ನವೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕದ ಯುವಕರಿಗೆ ಜೀವನೋಪಾಯದ ಅವಕಾಶಗಳನ್ನು ಒದಗಿಸುವ ಗುರಿ ಹೊಂದಿರುವ ಉಬರ್ ಇಂಡಿಯಾ ಈ ಯೋಜನೆ ಜಾರಿಗೆ ತರಲು ಮುಂದಾಗಿದೆ.
ಚಾಲನೆ ತರಬೇತಿ ಜೊತೆಗೆ ಪ್ರಮಾಣೀಕೃತ ಪ್ರವಾಸಿ-ಮಾರ್ಗದರ್ಶಿ ಕೌಶಲ್ಯ ಒದಗಿಸುವ ಯೋಜನೆ ಆರಂಭಿಸಲು ಸಿದ್ಧತೆ ನಡೆಸಿದೆ.
ಈ ನಿಟ್ಟಿನಲ್ಲಿ ವಿಕಾಸ ಸೌಧದಲ್ಲಿ ಮಂಗಳವಾರ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಅವರೊಂದಿಗೆ ಉಬರ್ನ ಏಷ್ಯಾ ಪೆಸಿಫಿಕ್ನ ಸಾರ್ವಜನಿಕ ನೀತಿ ಮುಖ್ಯಸ್ಥ ಮೈಕ್ ಆರ್ಗಿಲ್ ಮಾತುಕತೆ ನಡೆಸಿದರು.
ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕೌಶಲ್ಯಗಳೊಂದಿಗೆ ಚಾಲಕರನ್ನು ಸಜ್ಜುಗೊಳಿಸುವುದು ವಿಶೇಷವಾಗಿ ತಳ ಸಮುದಾಯದ ಯುವಕರಿಗೆ ಆದಾಯದ ಅವಕಾಶಗಳನ್ನು ಒದಗಿಸುವುದು ಹಾಗೂ ಸಬಲೀಕರಣಕ್ಕೆ ಆದ್ಯತೆ ನೀಡುವ ಯೋಜನೆ ಇದಾಗಿದೆ ಎಂದು ಹೇಳಿದರು.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (ಕೆಎಸ್ಡಿಸಿ) ಪ್ರಸ್ತುತ ಅಭ್ಯರ್ಥಿಗಳಿಗೆ ಲಘು ಮತ್ತು ಭಾರೀ ವಾಹನ ಚಾಲನೆ ತರಬೇತಿ ನೀಡುತ್ತದೆ. 100 ಕ್ಕೂ ಹೆಚ್ಚು ತರಬೇತಿ ಪಡೆದ ಚಾಲಕರು ಈಗಾಗಲೇ ಭಾರತ ಮತ್ತು ವಿದೇಶಗಳಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಇದರ ಹಿನ್ನೆಲೆಯಲ್ಲಿ ಉಬರ್ ಸಂಸ್ಥೆ ಗಳಿಕೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಚಾಲಕ-ಕಮ್-ಪ್ರವಾಸಿ ಮಾರ್ಗದರ್ಶಿ ಮಾದರಿಯನ್ನು ಪ್ರಸ್ತಾಪಿಸಿದೆ.
ತಂತ್ರಜ್ಞಾನ ಮತ್ತು ಪ್ರವಾಸೋದ್ಯಮದಾದ್ಯಂತ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸಲು ವಿವಿಧ ಕೌಶಲ್ಯ ಯೋಜನೆಗಳನ್ನು ನಾವು ಚರ್ಚಿಸಿದ್ದೇವೆ, ಕರ್ನಾಟಕದಲ್ಲಿ ಹೇರಳ ಪ್ರವಾಸೋದ್ಯಮ ತಾಣಗಳಿವೆ. ಅಲ್ಲಿ ಉತ್ತಮ ತರಬೇತಿ ಪಡೆದ ಕ್ಯಾಬ್ ಚಾಲಕರು ಇದ್ದರೆ ಪ್ರವಾಸಿ ಮಾರ್ಗದರ್ಶಿಯಾಗಿಯೂ ಕಾರ್ಯನಿರ್ವಹಿಸಬಹುದು ಎಂದು ಆರ್ಗಿಲ್ ಹೇಳಿದರು.
ನಂತರ ಸಚಿವ ಡಾ. ಪಾಟೀಲ್ ಮಾತನಾಡಿ, ಚಾಲಕ ತರಬೇತಿಯಲ್ಲಿ ವಿಶೇಷ ಕೌಶಲ್ಯಗಳನ್ನು ಸಂಯೋಜಿಸುವುದು ಪ್ರಯೋಜನಕಾರಿ. ಇದೊಂದು ಉತ್ತಮ ಯೋಜನೆ ಎಂದು ಸ್ವಾಗತಿಸಿದರು ಮತ್ತು ಮಂಡಳಿಯ ಮುಂದಿನ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಮಂಡಿಸಲಾಗುವುದು ಎಂದು ಭರವಸೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa