ರಾಜಕಾಲುವೆ ಒತ್ತುವರಿ ತೆರವುಗೊಳಿಸಿ : ಮಹಾಬರಿ
ವಿಜಯಪುರ, 09 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಮಳೆ ನೀರು ಬಂದಾಗ ಅನೇಕ ಬಡಾವಣೆಗಳು ಅಕ್ಷರಶ: ನಡುಗಡ್ಡೆಯಾಗುತ್ತವೆ, ಈ ಎಲ್ಲ ಸಮಸ್ಯೆಗಳಿಗೆ ರಾಜಕಾಲುವೆಗಳ ವ್ಯವಸ್ಥೆ ಪುನರುಜ್ಜೀವನಗೊಳಿಸುವುದೇ ಪರಿಹಾರವಾಗಿದೆ ಎಂದು ಹಿರಿಯ ರಾಜಕೀಯ ಮುಖಂಡ ಬಿ.ಎಚ್. ಮಹಾಬರಿ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗ
ಮಹಾಬರಿ


ವಿಜಯಪುರ, 09 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಮಳೆ ನೀರು ಬಂದಾಗ ಅನೇಕ ಬಡಾವಣೆಗಳು ಅಕ್ಷರಶ: ನಡುಗಡ್ಡೆಯಾಗುತ್ತವೆ, ಈ ಎಲ್ಲ ಸಮಸ್ಯೆಗಳಿಗೆ ರಾಜಕಾಲುವೆಗಳ ವ್ಯವಸ್ಥೆ ಪುನರುಜ್ಜೀವನಗೊಳಿಸುವುದೇ ಪರಿಹಾರವಾಗಿದೆ ಎಂದು ಹಿರಿಯ ರಾಜಕೀಯ ಮುಖಂಡ ಬಿ.ಎಚ್. ಮಹಾಬರಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿಲ್‌ಷಾಹಿ ಕಾಲದಲ್ಲಿ ಈಗಿರುವ ಜನಸಂಖ್ಯೆಗಿಂತ ೧೦ ಪಟ್ಟು ಹೆಚ್ಚು ಜನಸಂಖ್ಯೆ ಇತ್ತು, ಅರಸು ನೀರಿನ ಸಮರ್ಥ ಸದ್ಭಳಕೆಯ ಜೊತೆಗೆ ಮಳೆ ನೀರು ಹರಿದು ಹೋಗಲು, ಚರಂಡಿ ನೀರು ಹರಿದು ಹೋಗಲು ರಾಜಕಾಲುವೆ ನಿರ್ಮಿಸಿದ್ದರು. ಈ ವ್ಯವಸ್ಥೆ ಈಗಲೂ ಇದೆ, ಆದರೆ ರಾಜಕಾಲುವೆಗಳ ಒತ್ತುವರಿಯಿಂದಾಗಿ ನಗರದ ನೀರು ಹೊರ ಹೋಗದೇ ಅವೈಜ್ಞಾನಿಕವಾಗಿ ಹರಿದು ಬಡಾವಣೆಗಳಿಗೆ ನುಗ್ಗುತ್ತಿದೆ ಎಂದು ಹೇಳಿದರು.

೬೦/೨೦ ಡೀಪ್ ಇರುವ ರಾಜಕಾಲುವೆ ವಿಜಯಪುರದಲ್ಲಿದ್ದವು ಎಂಬುದನ್ನು ವೈಜ್ಞಾನಿಕ ದಾಖಲಾತಿಗಳಿವೆ, ಆದರೆ ಈಗ ರಾಜಕಾಲುವೆ ಪುನರುಜ್ಜೀವನ ಕಾಮಗಾರಿಗಳು ಸಂಪೂರ್ಣ ಅವೈಜ್ಞಾನಿಕವಾಗಿ ನಡೆಯುತ್ತಿವೆ ಎನ್ನಬಹುದಾಗಿದೆ. ಆರ್‌ಟಿಓ ಆಫೀಸ್‌ನಿಂದ - ನವಭಾಗವರೆಗೆ ೮/೬ ಆಳಕ್ಕೆ ಸೀಮಿತವಾಗಿರುವಂತೆ ರಾಜಕಾಲುವೆಗಳ ಪುನರುಜ್ಜೀವನಗೊಳಿಸುವ ಕಾರ್ಯ ನಡೆಯುತ್ತಿದೆ, ಆದರೆ ಇದು ಸಂಪೂರ್ಣ ಅವೈಜ್ಞಾನಿಕವಾಗಿವೆ ಎಂದು ಆರೋಪಿಸಿದರು.

೨೦೧೩-೧೪ ನೇ ಸಾಲಿನಲ್ಲಿ ಅಂದು ಸಹ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಎಂ.ಬಿ. ಪಾಟೀಲ ಸಾಹೇಬರು ಇಡೀ ಅಧಿಕಾರಿಗಳ ತಂಡ ಕಟ್ಟಿಕೊಂಡು ನಗರ ಪ್ರದಕ್ಷಿಣೆ ಮಾಡಿದ್ದರು, ಮಳೆ ನೀರು ನಿಲ್ಲಲು ರಾಜಕಾಲುವೆಗಳ ಒತ್ತುವರಿಯೇ ಕಾರಣ ಎಂಬುದು ಅವರ ಗಮನಕ್ಕೆ ಬಂದಿತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಸಚಿವರು ವಿಶೇಷ ಕಾಳಜಿ ವಹಿಸಿ ರಾಜಕಾಲುವೆ ಒತ್ತುವರಿ ತೆರವಿಗೆ ಖಡಕ್ ಸೂಚನೆ ನೀಡಿದ್ದರು. ಆದರೆ ಅಧಿಕಾರಿಗಳು ಈ ವಿಷಯವಾಗಿ ನಿರ್ಲಕ್ಷ್ಯ ನೀತಿ ತೋರುತ್ತಲೇ ಇದ್ದಾರೆ, ಅಂದು ಸಚಿವರ ಸುದೀರ್ಘ ಸಭೆ ನಡೆಸಿದ್ದು, ಸಭೆಯ ನಡಾವಳಿಗಳ ಪ್ರತಿ ಸಹ ಅಧಿಕಾರಿಗಳು ನೀಡುತ್ತಿಲ್ಲ ಎಂದು ದೂರಿದರು.

ವಿಜಯಪುರ ಈ ಹಿಂದೆ ಮುಂಬಯಿ ಕರ್ನಾಟಕ ಭಾಗವಾಗಿದ್ದ ಸಂದರ್ಭದಲ್ಲಿ ಸಾತಾರ್ ಜಿಲ್ಲೆಯ ಭಾಗವಾಗಿತ್ತು, ನಂತರ ಕಲಾದಗಿ ಜಿಲ್ಲೆಯ ಭಾಗವಾಯಿತು, ನಂತರ ಮನಗೂಳಿ ತಾಲೂಕು ವ್ಯಾಪ್ತಿಗೆ ಒಳಪಟ್ಟಿತ್ತು, ಆ ಸಂದರ್ಭದಲ್ಲಿದ್ದ ನಗರದ ನಕಾಶೆಗಳು, ಮಹತ್ವದ ದಾಖಲೆಗಳು ಮಹಾರಾಷ್ಟ್ರ ಸರ್ಕಾರದ ಬಳಿ ಇವೆ, ಇವುಗಳನ್ನು ಪುನ: ತಂದು ಅಧ್ಯಯನ ಮಾಡಿ ಅವುಗಳನ್ನು ಮ್ಯೂಸಿಯಂನಲ್ಲಿ ಇರಿಸುವ ನಿಟ್ಟಿನಲ್ಲಿಯೂ ಸಚಿವ ಡಾ.ಎಂ.ಬಿ. ಪಾಟೀಲರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು, ಆದರೆ ಈ ನಿರ್ದೇಶನ ಪಾಲನೆಯಾಗಿಲ್ಲ, ಈ ನಕಾಶೆಗಳು ಬಂದರೆ ರಾಜಕಾಲುವೆಗಳ ಜಾಲ ಸ್ಪಷ್ಟವಾಗಿ ಅರಿವಾಗುತ್ತದೆ, ಆದರೆ ಅಧಿಕಾರಿಗಳು ಮಾತ್ರ ಈ ವಿಷಯದಲ್ಲಿ ಜಾಣಮೌನ ವಹಿಸಿದ್ದಾರೆ ಎಂದರು.

ರಾಮನಗರ, ಶಹಾಪೇಟಿ, ಗಚ್ಚಿನಕಟ್ಟಿ ಕಾಲೋನಿ, ನವಭಾಗ, ತಾಜ್‌ಬಾವಡಿ ಸೇರಿದಂತೆ ಅನೇಕ ಭಾಗದ ಬಡಾವಣೆಗಳು ಮಳೆ ಬಂದರೆ ಸಂಪೂರ್ಣ ಮಳೆ ನೀರು ಮನೆ ಸೇರುತ್ತದೆ, ಮಳೆ ನೀರು ಅಷ್ಟೇ ಅಲ್ಲದೇ ಚರಂಡಿ ನೀರು ಸಹ ಅವರ ಮನೆಗೆ ನುಗ್ಗುತ್ತಿದೆ, ಅವರ ಅವ್ಯವಸ್ಥೆ ನೋಡಿದರೆ ನಮಗೆ ಕಣ್ಣೀರು ಬರುತ್ತದೆ. ರಾಜಕಾಲುವೆಗಳು ಒತ್ತುವರಿಯಾದ ಪರಿಣಾಮವೇ ಮಳೆಗಾಲ ಬಂದರೆ ವಿಜಯಪುರ ನಡುಗಡ್ಡೆಯಾಗುತ್ತಿದೆ ಎಂದು ಹೇಳಿದರು.

ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಜೊತೆ ಪತ್ರ ವ್ಯವಹಾರ ಮಾಡುವುದೇ ಸಾಹಸಮಯ ಕೆಲಸವಾಗಿದೆ, ಇಲಾಖೆಯ ಮುಖ್ಯ ಕಚೇರಿ ಇರುವುದು ಆಗ್ರಾದಲ್ಲಿ, ವೃತ್ತೀಯ ಕಚೇರಿ ಇರುವುದು ಧಾರವಾಡದಲ್ಲಿ, ಜಂಟಿ ನಿರ್ದೇಶಕರ ಕಚೇರಿ ಇರುವುದು ಬೆಂಗಳೂರಿನಲ್ಲಿ. ಹೀಗಾಗಿ ಪತ್ರ ವ್ಯವಹಾರ ನಡೆಸಿ ಅವರಿಂದ ಸ್ಪಂದನೆ ದೊರಕುವುದೇ ಒಂದು ದೊಡ್ಡ ತಲೆನೋವಾಗಿದೆ ಎಂದರು.

ಅತ್ತ ಉದ್ಯಾನವನ ನಿರ್ವಹಣೆಗೆ ಮೊದಲು ಅನೇಕ ಉದ್ಯೋಗಿಗಳು ಇರುತ್ತಿದ್ದರೂ ಆದರೆ ಈಗ ಸೆಕ್ಯೂರಿಟಿಗಳ ಮೇಲೆ ಎಲ್ಲವೂ ನಡಯುತ್ತಿದೆ, ಇಬ್ರಾಹಿಂ ರೋಜಾ, ಅಲಿರೋಜಾದಂತಹ ಕಟ್ಟಡಗಳು ನೀರಿನಲ್ಲಿ ಮುಳುಗಿದರೂ ಸಹ ಎಎಸ್‌ಐ ಮಾತ್ರ ಕಣ್ಣು ಬಿಡುತ್ತಿಲ್ಲ. ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವೃತ್ತೀಯ ಕಚೇರಿಯನ್ನು ವಿಜಯಪುರದಲ್ಲಿಯೇ ಸ್ಥಾಪಿಸಬೇಕು, ಇಲ್ಲಿ ನೂರಾರು ಸ್ಮಾರಕಗಳಿವೆ, ಇವುಗಳ ವ್ಯವಸ್ಥಿತ ನಿರ್ವಹಣೆ, ಅಭಿವೃದ್ಧಿ ದೃಷ್ಟಿಯಿಂದ ಕೂಡಲೇ ಇಲ್ಲಿ ವೃತ್ತೀಯ ಕಚೇರಿ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಬೇಕಿದೆ ಎಂದರು.

ಬಿಹಾರ ಮೌಲ್ವಿಗಳ ಮೇಲೆ ಲೋಕಾಯುಕ್ತರ ದೂರು

ಅನ್ಯಾಯದ ವಿರುದ್ಧ ನಾನು ಧ್ವನಿ ಎತ್ತುವೆ, ತಪ್ಪು ಯಾರೇ ಮಾಡಿರಲಿ ಅದರ ವಿರುದ್ಧ ಧ್ವನಿ ಎತ್ತುವೆ, ವಿಜಯಪುರದಲ್ಲಿ ಬೇರೂ ಬಿಟ್ಟಿರುವ ಕೆಲವು ಬಿಹಾರ ಮೂಲದ ಮೌಲ್ವಿಗಳು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಬಿಹಾರದಲ್ಲಿ ಪ್ರವಾಹ ಹೆಸರಿನಲ್ಲಿ ಈ ಭಾಗದ ಜನರಿಂದ ಹಣ ಪಡೆದುಕೊಂಡು ವೈಯುಕ್ತಿಕವಾಗಿ ಆಸ್ತಿ ಮಾಡಿಕೊಳ್ಳುತ್ತಿದ್ದಾರೆ, ಈ ಬಗ್ಗೆ ಮುಸ್ಲಿಂ ಸಮುದಾಯ ಜಾಗೃತವಾಗಿರಬೇಕು, ಈ ಎಲ್ಲ ವಿಷಯಗಳನ್ನು ಕೂಡಲೇ ಜಿಲ್ಲಾ ಪೊಲಿಸ್ ಅಧೀಕ್ಷಕರು ಹಾಗೂ ಲೋಕಾಯುಕ್ತ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸುವ ಕೆಲಸ ಮಾಡುವೆ ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande