ಗದಗ, 09 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯಗಜೇಂದ್ರಗಡ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿಕಾರರ ಇ-ಕೆವೈಸಿ ಕಾರ್ಯ ಪ್ರಗತಿಯನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಅವರು ಪರಿಶೀಲಿಸಿದರು.
ಇಟಗಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಇಒ ಅವರು, ನರೇಗಾ ಕೂಲಿಕಾರರ ಆಧಾರ್ ಆಧಾರಿತ ಇ-ಕೆವೈಸಿ ಪ್ರಕ್ರಿಯೆ ಹೇಗೆ ನಡೆಯುತ್ತಿದೆ ಎಂಬುದನ್ನು ಸ್ಥಳದಲ್ಲೇ ಪರಿಶೀಲಿಸಿ, ಕಾರ್ಯನಿರ್ವಹಿಸುತ್ತಿದ್ದ ಬಿಎಫ್ಟಿ, ಡಿಇಒ ಮತ್ತು ಗ್ರಾಮ ಕಾಯಕ ಮಿತ್ರರ ಕೆಲಸವನ್ನು ಅವಲೋಕಿಸಿದರು.
ಕಾರ್ಯನಿರ್ವಾಹಕ ಅಧಿಕಾರಿ ಅವರು ಪ್ರತಿದಿನ ನಿಗದಿತ ಗುರಿಯಂತೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು.
“ನರೇಗಾ ಯೋಜನೆಯಡಿ ಮುಂದಿನ ದಿನಗಳಲ್ಲಿ ಕೂಲಿಕಾರರು ಕೆಲಸ ಪಡೆಯಬೇಕಾದರೆ ಇ-ಕೆವೈಸಿ ಕಡ್ಡಾಯವಾಗಿದೆ. ನಮ್ಮ ಗ್ರಾಮ ಪಂಚಾಯತ್ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಈ ಕಾರ್ಯವನ್ನು ಶ್ರಮಪೂರ್ವಕವಾಗಿ ಮಾಡುತ್ತಿದ್ದಾರೆ. ಇದರ ಪ್ರಯೋಜನ ಎಲ್ಲ ಕೂಲಿಕಾರರು ಪಡೆಯಬೇಕು” ಎಂದು ಅವರು ಹೇಳಿದರು.
ಇದೇ ವೇಳೆ, ನರೇಗಾ ಕೂಲಿಕಾರರೊಂದಿಗೆ ನೇರವಾಗಿ ಮಾತನಾಡಿ, ಇ-ಕೆವೈಸಿ ಪ್ರಕ್ರಿಯೆಯ ಪ್ರಯೋಜನಗಳು ಹಾಗೂ ಭದ್ರತೆ ಕ್ರಮಗಳು ಕುರಿತು ವಿವರಿಸಿದರು.
“ಇ-ಕೆವೈಸಿ ಮಾಡಿದರೆ ಕೂಲಿಕಾರರಿಗೆ ಪಾರದರ್ಶಕ ಪಾವತಿ ವ್ಯವಸ್ಥೆ, ವೇತನದಲ್ಲಿ ವಿಳಂಬ ತಪ್ಪುವುದು ಹಾಗೂ ಕೇಂದ್ರ ಸರ್ಕಾರದ ವಿವಿಧ ಸೌಲಭ್ಯಗಳು ದೊರೆಯುತ್ತವೆ,” ಎಂದು ಇಒ ಚಂದ್ರಶೇಖರ ಅವರು ಹೇಳಿದರು.
ಅವರು ಮುಂದುವರಿದು, “ಗ್ರಾಮ ಪಂಚಾಯತ್ ಸಿಬ್ಬಂದಿ ಮನೆಗೆ ಬರುವಾಗ ಅಗತ್ಯ ದಾಖಲೆ, ಆಧಾರ್ ಮತ್ತು ಬ್ಯಾಂಕ್ ವಿವರ ನೀಡುವ ಮೂಲಕ ಎಲ್ಲರೂ ಸಹಕಾರ ನೀಡಬೇಕು. ತಾಲೂಕಿನಲ್ಲಿ ಶೇಕಡಾ 100ರಷ್ಟು ಇ-ಕೆವೈಸಿ ಸಾಧಿಸುವುದು ನಮ್ಮ ಗುರಿ” ಎಂದು ಕೂಲಿಕಾರರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಇಟಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪಂಚಾಯತ್ ಸದಸ್ಯರು, ನರೇಗಾ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP