ಕುರುಗೋಡು, 19 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಹಿಳೆಯರು ಅಧಿಕ ಆದಾಯವನ್ನು ಗಳಿಸುವಂತಹ ಸಣ್ಣ ಪ್ರಮಾಣದ ಚಟುವಟಿಕೆಗಳನ್ನು ಮಹಿಳಾ ಸ್ವಸಹಾಯ ಸಂಘಗಳು ಕೈಗೊಳ್ಳಬೇಕು. ಕೇವಲ ಕೃಷಿ ಇಲಾಖೆ ಅಲ್ಲದೇ, ಮೀನುಗಾರಿಕೆ, ತೋಟಗಾರಿಕಾ ಇಲಾಖೆೆಯಲ್ಲೂ ಸಹ ಗುಂಪುಗಾರಿಕೆಗೆ ಅವಕಾಶವಿದ್ದು, ತಾವೆಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಉಪ ಕೃಷಿ ನಿರ್ದೇಶಕ ಎಸ್ ಎನ್ ಮಂಜುನಾಥ ಅವರು ಹೇಳಿದರು.
ನಗರದ ಜಂಟಿ ಕೃಷಿ ನಿರ್ದೇಶಕರ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಮಹಿಳಾ ಕಿಸಾನ್ ದಿವಸ್ ಅಂಗವಾಗಿ ಬಳ್ಳಾರಿ ಹಾಗೂ ಕುರುಗೋಡು ತಾಲ್ಲೂಕಿನ ಮಹಿಳಾ ಸ್ವಸಹಾಯ ಗುಂಪುಗಳಿಗೆ ಕೌಶಲ್ಯಾಭಿವೃದ್ಧಿ ಹಾಗೂ ಬಲವರ್ಧನೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಿಳೆಯರು ಸಣ್ಣ ಒಕ್ಕೂಟಗಳನ್ನು ಮಾಡಿಕೊಂಡು ಕೃಷಿ ಇಲಾಖೆಯಡಿ ದೊರೆಯುವ ಪಿ.ಎಮ್.ಎಫ್.ಎಂ.ಇ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಲಾಗುತ್ತಿರುವ ಜಾಮ್ ತಯಾರಿ ಹಾಗೂ ಕ್ರೋಶೆಟ್ ಚಟುವಟಿಕೆಯನ್ನು ಮುಂದಿನ ಒಂದು ವರ್ಷದೊಳಗೆ ಮಹಿಳಾ ಸ್ವಸಹಾಯ ಸಂಘಗಳು ಅಥವಾ ಕೃಷಿ ಸಖಿಯರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಹಿಳಾ ಸ್ವಸಹಾಯ ಸಂಘಗಳು ತಮ್ಮ ಉತ್ಪನ್ನಗಳನ್ನು ಬ್ರಾö್ಯಂಡಿAಗ್ ಮಾಡಿ ಮಾರಾಟ ಮಾಡಬೇಕು. ಒಳ್ಳೆಯ ಉತ್ಪನ್ನವನ್ನು ತಯಾರಿಸಿದಲ್ಲಿ, ಮಾರ್ಟ್ಗಳು ತಮ್ಮಲ್ಲಿಗೇ ಬಂದು ಖರೀದಿಸುತ್ತಾರೆ. ಇದರಿಂದ ತಮ್ಮ ಉತ್ಪನ್ನದ ಬೇಡಿಕೆ ಕೂಡ ಹೆಚ್ಚಾಗುತ್ತದೆ. ಕೃಷಿ ಸಖಿಯರು ಎಲ್ಲಾ ಇಲಾಖೆಗಳ ಸೌಲಭ್ಯಗಳನ್ನು ತಿಳಿದು ಮಹಿಳಾ ಸ್ವಸಹಾಯ ಸಂಘಗಳಿಗೆ ಹಾಗೂ ರೈತ ಶಕ್ತಿ ಗುಂಪುಗಳಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕರಾದ ನದಾಫ್ ಅವರು ಮಾತನಾಡಿ, ರೈತ ಮಹಿಳೆಯರು ಕೇವಲ ಮನೆಕೆಲಸಕ್ಕಷ್ಟೇ ಸೀಮಿತವಾಗದೆ, ಮನೆಯ ಖರ್ಚನ್ನು ಭರಿಸುವ ಸಣ್ಣ ಉದ್ಯಮಗಳಾದ ಹಸಿಮೆಣಸಿನ ಪುಡಿ, ಅಗಸೆ ಪುಡಿ, ಗುಲಾಬ್ ಜಾಮೂನ್ ಪುಡಿ, ಮಿಕ್ಸ್ಹಣ್ಣಿನ ಜಾಮ್ ಇನ್ನೂ ಮುಂತಾದವುಗಳನ್ನು ಒಂದು ಬ್ರಾö್ಯಂಡ್ ಹೆಸರನ್ನು ನೀಡಿ ತಮ್ಮ ಹಳ್ಳಿಗಳಲ್ಲಿ ಅಥವಾ ತಾಲೂಕಿನ ಮಳಿಗೆಗಳಲ್ಲಿ ಮಾರಬಹುದು. ಇದರಿಂದ ಮಹಿಳೆಯರು ಉಳಿತಾಯದ ಮನೋಭಾವವನ್ನು ಬೆಳೆಸಿಕೊಂಡು ಅಧಿಕ ಲಾಭವನ್ನು ಗಳಿಸಿ ಆರ್ಥಿಕವಾಗಿ ಸಶಕ್ತರಾಗಬೇಕೆಂದು ಮಹಿಳೆಯರಿಗೆ ಹುಮ್ಮಸ್ಸು ನೀಡಿದರು.
ಬಳಿಕ ಮಹೇಶ್ವರಿ ಅವರು ಕಾರ್ಯಕ್ರಮದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಮಹಿಳಾ ಸ್ವಸಹಾಯ ಗುಂಪುಗಳಿಗೆ ಹಾಗೂ ಕೃಷಿ ಸಖಿಯರಿಗೆ ಸೀರೆಗಳಿಗೆ ಕ್ರೋಶೆಟ್ ಕೆಲಸ (ಕೊಂಬೆ ಹೆಣಿಗೆ) ಹಾಗೂ ವೇಸ್ಟ್ ಬಟ್ಟೆಗಳಿಂದ ಮ್ಯಾಟ್ ತಯಾರಿಸುವುದರ ಬಗ್ಗೆ ಪ್ರಾತ್ಯಕ್ಷಿಕೆಯ ಮುಖಾಂತರ ತರಬೇತಿಯನ್ನು ನೀಡಿದರು. ಸುಮಂಗಲ ಅವರು ವಿವಿಧ ಬಗೆಯ ಹಣ್ಣುಗಳಿಂದ ಸೇಬು, ಬಾಳೆಹಣ್ಣು, ಕಿತ್ತಳೆ, ಕರಿದ್ರಾಕ್ಷಿ, ಸಪೋಟ ಮಿಕ್ಸ್ಹಣ್ಣಿನ ಜಾಮ್ ತಯಾರಿಸುವುದನ್ನು ತಿಳಿಸಿ ಎಲ್ಲರಿಗೂ ಸವಿಯಲು ನೀಡಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಕವಿತಾ, ಕೃಷಿ ಅಧಿಕಾರಿಗಳಾದ ಸೌಮ್ಯ, ರೇಖಾ, ಜ್ಯೋತಿ, ಗಾಯಿತ್ರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಅರುಣಾ, ಸುಷ್ಮ, ಆತ್ಮ ಯೋಜನೆಯ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರಾದ ವಾಣಿ ಕೋರಪ್ಪಳ, ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಶಿಲ್ಪಾ ಸೇರಿದಂತೆ ಸ್ವ-ಸಹಾಯ ಗುಂಪಿನ ಸದಸ್ಯರು ಹಾಗೂ ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್