ಹಾವೇರಿ, 17 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸಮಗ್ರವಾಗಿ ಎಲ್ಲರ ಆರೋಗ್ಯ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಆಯುಷ್ಮಾನ ಭಾರತ ಯೋಜನೆ ಯಶಸ್ವಿಯಾಗಬೇಕಾದರೆ ಎಲ್ಲರ ಸಹಕಾರ ಅಗತ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ತಾವರಗಿ, ದೂದಹಳ್ಳಿ, ಶ್ರೀರಾಮನಕೊಪ್ಪ, ಬೋಗಾವಿ, ಗ್ರಾಮಗಳಲ್ಲಿ ನೂತನ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದರು.
ಆರೋಗ್ಯ ಬಹಳ ಮುಖ್ಯ. ನಮಗೆ ವಯಸ್ಸಿದ್ದಾಗ ಆರೊಗ್ಯದ ಕಡೆಗೆ ಗಮನ ಹರಿಸುವುದಿಲ್ಲ. ಆದರೆ, ವಯಸ್ಸಾದ ಮೇಲೆ ಆ ಬಗ್ಗೆ ಯೋಚನೆ ಮಾಡುತ್ತೇವೆ. ಆದರೆ ನಾವು ಆರಂಭದಲ್ಲಿಯೇ ಆರೊಗ್ಯದ ಬಗ್ಗೆ ಗಮನ ಹರಿಸಿದರೆ ವಯಸ್ಸಾದ ಮೇಲೆ ತೊಂದರೆಗೀಡಾಗುವ ಅವಶ್ಯಕತೆ ಇರುವುದಿಲ್ಲ ಎಂದರು.
ಆರೋಗ್ಯಕ್ಕೆ ಆಹಾರಕ್ಕೆ ನೇರವಾದ ಸಂಬಂಧ ಇದೆ. ಶುಚಿಯಾಗಿರುವ, ಪೌಷ್ಟಿಕವಾಗಿರುವ ಆಹಾರವನ್ನು ತೆಗೆದುಕೊಂಡರೆ ಆರೋಗ್ಯಯುತವಾಗಿರುತ್ತೇವೆ. ದೇವರ ಸೃಷ್ಟಿಯಲ್ಲಿ ನಮ್ಮಲ್ಲಿ ಏನಾದರೂ ರೋಗರುಜಿನಗಳಿದ್ದರೆ ರೋಗ ನಿರೋಧಕ ಶಕ್ತಿ ಭಗವಂತ ನಮಗೆ ಕೊಟ್ಟಿದ್ದಾನೆ. ಪ್ರತಿಯೊಬ್ಬರ ದೇಹದಲ್ಲಿ ಡಾಕ್ಟರ್ ಇರುತ್ತಾನೆ. ಡಾಕ್ಟರ್ ಗೆ ನಾವು ಸಹಕಾರ ಕೊಡಬೇಕು. ಒಳಗಡೆ ಡಾಕ್ಟರನ್ನು ಕಡೆಗಣಿಸಿದರೆ ಹೊರಗಡೆ ಡಾಕ್ಟರನ್ನು ಅವಲಂಬಿಸಬೇಕಾಗುತ್ತದೆ. ಆಹಾರದಿಂದ ಒಳ್ಳೆ ಆರೋಗ್ಯ ದೊರೆಯುತ್ತದೆ. ಭಾರತದಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ದೊಡ್ಡ ಸವಾಲು, ನಮ್ಮ ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇದೆ. ಇಷ್ಟು ಜನಸಂಖ್ಯೆ ಇರುವ ದೇಶದಲ್ಲಿ ಎಲ್ಲರಿಗೂ ಆರೊಗ್ಯ ಕೊಡುವುದು ಸುಲಭದ ಮಾತಲ್ಲ. ಆದರೆ, ಸಣ್ಣ ಸಣ್ಣ ದೇಶಗಳಲ್ಲಿ ಆರೋಗ್ಯ ಕಾಪಾಡುವುದು ಸುಲಭ. ಇದನ್ನು ಮನಗಂಡು 2018 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಡಿ ದೇಶಕ್ಕೆ ಆರೋಗ್ಯದ ವಿಮಾ ಯೋಜನೆ ಮಾಡಿ, ಪ್ರತಿಯೊಬ್ಬ ನಾಗರಿಕರಿಗೆ ವಿಶೇಷವಾಗಿ ಬಡವರಿಗೆ ಆರೋಗ್ಯ ಕೊಡಲು ಐದು ಲಕ್ಷ ರೂ ವರೆಗೆ ಉಚಿತ ಚಿಕಿತ್ಸೆ ನೀಡುವ ಆಯುಷ್ಮಾನ ಭಾರತ ಯೋಜನೆ ಜಾರಿಗೆ ತಂದರು. ಇದರಿಂದ 10 ಕೋಟಿ ಕುಟುಂಬಗಳು ಪ್ರಯೋಜನ ಪಡೆದಿವೆ. ರಾಜ್ಯಗಳು ಕೂಡ ಈ ಯೋಜನೆಗೆ ಕೈ ಜೋಡಿಸಿವೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa