ರಾಯಚೂರು, 17 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯಲ್ಲಿನ ಎಲ್ಲಾ ಹೋಟೆಲ್ಗಳು ಶಿಸ್ತುಬದ್ಧವಾಗಿರಬೇಕು. ಅಡುಗೆ ಕೊಠಡಿ ಹಾಗೂ ಆಹಾರ ಧಾನ್ಯ ಸಂಗ್ರಹಣ ಕೊಠಡಿ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಸಾಕಷ್ಟು ಶುಚಿತ್ವ ಕಾಯ್ದುಕೊಳ್ಳಬೇಕು ಎಂದು ರಾಯಚೂರು ಸಹಾಯಕ ಆಯುಕ್ತರಾದ ಗಜಾನನ ಬಾಳೆ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಸಹಾಯಕ ಆಯುಕ್ತರ ಸಭಾಂಗಣದಲ್ಲಿ ನಡೆದ ಹೋಟೆಲ್ ಮಾಲೀಕರು ಹಾಗೂ ಬೀದಿಬದಿ ವ್ಯಾಪಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೊಟೆಲಗಳಲ್ಲಿನ ಎಲ್ಲಾ ಅಡುಗೆ ಸಿಬ್ಬಂದಿ ಹಾಗೂ ಕೆಲಸಗಾರರು ಆರೋಗ್ಯದ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಹೊಂದಿರಬೇಕು. ವರ್ಷದಲ್ಲಿ ಎರಡು ಬಾರಿ ಪರೀಕ್ಷೆ ಮಾಡಿಸಬೇಕು. ತಲೆಗೆ ಟೋಪಿ, ಎಫ್ರಾನ್, ಗ್ಲೌಸ್ಗಳನ್ನು ಧರಿಸಬೇಕು. ಉಗುರುಗಳನ್ನು ಕಟ್ ಮಾಡಿಕೊಳ್ಳಬೇಕು. ಇಲ್ಲಾವಾದಲ್ಲಿ ಉಗುರಿನ ಫಂಗಸ್ ಹಾಗೂ ಕೀಟಾಣು ಆಹಾರ ಪದಾರ್ಥ ಸೇರುತ್ತದೆ. ಇದು ಅನಾರೋಗ್ಯಕ್ಕೆ ಕಾರಣವಾಗಲಿದೆ ಎಂದು ತಿಳಿಸಿದರು.
ಅಡುಗೆ ಮಾಡುವ ಮತ್ತು ಗ್ರಾಹಕರಿಗೆ ಅಡುಗೆ ಕೊಡುವ ಸಿಬ್ಬಂದಿಯು ವೈಯಕ್ತಿಕವಾಗಿ ಶುಚಿತ್ವದ ಕಡೆಗೆ ಗಮನ ಹರಿಸಬೇಕು. ಕೈಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಹೊಟೆಲ್ ಮಾಲೀಕರು ಗ್ರಾಹಕರಿಗೆ ಕುಡಿಯಲು ಫಿಲ್ಟರ್ ನೀರು ಕೊಡಬೇಕು. ಕಡ್ಡಾಯವಾಗಿ ಆಹಾರ ಪರವಾನಿಗೆ ಅಥವಾ ನೋಂದಣಿ ಪಡೆದು ಹೋಟೆಲ್ಗಳನ್ನು ಪ್ರಾರಂಭಿಸಬೇಕು ಎಂದು ಅವರು ಸೂಚನೆ ನೀಡಿದರು.
ಈ ವೇಳೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ನಜೀರ್ ಮಹಮ್ಮದ್ ಅವರು ಮಾತನಾಡಿ, ಹೋಟೆಲ್ನಲ್ಲಿ ಮನಬಂದAತೆ ಸಿಲಿಂಡರ್ಗಳನ್ನು ಬಳಸಕೂಡದು. ನಿಯಮಾನುಸಾರ ಸೂಚಿಸಿರುವ ಸಿಲಿಂಡರಗಳನ್ನು ಮಾತ್ರ ಬಳಸಬೇಕು. ಇಲ್ಲವಾದಲ್ಲಿ ಅಂತವರ ವಿರುದ್ಧ ಎಫ್.ಆರ್.ಐ. ದಾಖಲಿಸಿ ಹೋಟೆಲ್ ಸೀಜ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಹಾನಗರ ಪಾಲಿಕೆಯ ಮುಖ್ಯ ಆಹಾರ ಅಧಿಕಾರಿಗಳಾದ ಡಾ. ಮಹಮದ್ ಶಾಕೀರ್ ಅವರು ಮಾತನಾಡಿ, ಹೋಟೆಲ್ ಮಾಲೀಕರು ಟ್ರೇಡ್ ಲೈಸನ್ಸ್ ತೆಗೆದುಕೊಳ್ಳಬೇಕು. ಹಾಗೂ ಹೋಟೆಲ್ಗಳನ್ನು ಸ್ವಚ್ಚತೆಯಿಂದ ಇಟ್ಟುಕೊಳ್ಳಬೇಕು. ಹೋಟೆಲ್ಗಳಲ್ಲಿ ಸುಡುವ ಪದಾರ್ಥಗಳನ್ನು ಪ್ಲಾಸ್ಟಿಕ್ನಲ್ಲಿ ಹಾಕಿ ನೀಡಬಾರದು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಅಂಕಿತ ಅಧಿಕಾರಿಗಳು ಮಾತನಾಡಿ, ಹೋಟಲ್ಗಳು ಪ್ರಾರಂಭಿಸುವ ಮೊದಲು ಕಡ್ಡಾಯವಾಗಿ ನೋಂದಣಿ ಅಥವಾ ಪರವಾನಿಗೆ ಪಡೆಯಬೇಕು. ಗ್ರಾಹಕರಿಗೆ ಶುಚಿತ್ವ ಹಾಗೂ ಪೌಷ್ಟಿಕಯುಕ್ತ ಆಹಾರವನ್ನು ನೀಡಬೇಕು. ಗ್ರಾಹಕರು ದೇವರೆಂದು ಭಾವಿಸಬೇಕು. ಅಡುಗೆ ಕೋಣೆ ಸಿಬ್ಬಂದಿ ಹಾಗೂ ಕೆಲಸಗಾರರು ವೈದ್ಯಕೀಯ ಪ್ರಮಾಣ ಪತ್ರವನ್ನು ಪಡೆದಿರಬೇಕು ಎಂದು ತಿಳಿಸಿದರು.
ಈ ವೇಳೆ ಹಳ್ಳಿಮನೆ ಹೋಟೆಲ್ ಮಾಲೀಕರಾದ ಹನಮಂತು ಮಾತನಾಡಿ, ಎಲ್ಲಾ ಹೋಟೆಲ್ ಮಾಲೀಕರು ಗ್ರಾಹಕರಿಗೆ ಶುಚಿತ್ವ ಹಾಗೂ ಪೌಷ್ಠಿಕ ಆಹಾರ ನೀಡಬೇಕು. ಅದೇ ರೀತಿಯಾಗಿ ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಂಡು ಒಂದು ತಿಂಗಗಳೊಳಗಾಗಿ ಸರಿಪಡಿಸಿಕೊಂಡು ಗ್ರಾಹಕರಿಗೆ ಶುಚಿಯಾದ ಹಾಗೂ ಪೌಷ್ಟಿಕಯುಕ್ತ ಆಹಾರ ನೀಡಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಮಾಲೀಕರು ಸಭೆಯಲ್ಲಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್