



ಬಳ್ಳಾರಿ, 08 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಬಿಜೆಪಿಯ `ಲಿಂಗಸೂಗೂರು - ಬಳ್ಳಾರಿ' ಹತ್ತು ದಿನಗಳ ಪಾದಯಾತ್ರೆಯು ಸೆಪ್ಟಂಬರ್ 10ರ ಗುರುವಾರ ಬಳ್ಳಾರಿಯಲ್ಲಿ ಸಮಾರೋಪಗೊಳ್ಳಲಿದ್ದು ಜಿಲ್ಲಾಡಳಿತವು ಷರತ್ತುಬದ್ಧ ಪರವಾನಿಗೆ ನೀಡಿದ ನಂತರ ವೇದಿಕೆ ಸಿದ್ದತೆಯು ಮಂಗಳವಾರ ಸಂಜೆಯಿಂದಲೇ ಚುರುಕುಗೊಂಡಿದೆ.
ಶಾಸಕರಾದ ವೈ.ಎಂ. ಸತೀಶ್, ಜಿ. ಜನಾರ್ಧನರೆಡ್ಡಿ, ಮಾಜಿ ಶಾಸಕರಾದ ಜಿ. ಸೋಮಶೇಖರರೆಡ್ಡಿ, ಮಾಜಿ ಸಂಸದರಾದ ಪ್ರತಾಪಸಿಂಹ, ಸಣ್ಣ ಪಕ್ಕೀರಪ್ಪ, ಬುಡಾ ಮಾಜಿ ಅಧ್ಯಕ್ಷರಾದ ದಮ್ಮೂರು ಶೇಖರ್ ಸೇರಿ ಅನೇಕ ಮುಖಂಡರು, ಕಾರ್ಯಕರ್ತರು ಮಂಗಳವಾರ ಸಂಜೆಯಿಂದಲೇ ಮೈದಾನದಲ್ಲಿದ್ದುಕೊಂಡು ವೇದಿಕೆ ನಿರ್ಮಾಣದ ಕೆಲಸವನ್ನು ಚುರುಕುಗೊಳಿಸುತ್ತಿದ್ದರು.
ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರು, ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಭಾರತೀಯ ಜನತಾ ಪಕ್ಷದ ಪಾದಯಾತ್ರೆಯ ಸಮಾರೋಪ ಸಮಾರಂಭ ನಡೆಸಲು ಷರತ್ತುಬದ್ಧ ಅನುಮತಿಯನ್ನು ನೀಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬ್ಯಾನರ್, ಫ್ಲೆಕ್ಸ್ ಅಥವಾ ಕಟೌಟ್ಗಳನ್ನು ಅಳವಡಿಸುವಂತಿಲ್ಲ. ಕೇವಲ ಕಾರ್ಯಕ್ರಮ ನಿಗದಿಯಾಗಿರುವ ಮುನ್ಸಿಪಲ್ ಹೈಸ್ಕೂಲ್ ಮೈದಾನದ ಆವರಣದಲ್ಲಿ ಮಾತ್ರ ಬ್ಯಾನರ್ ಹಾಕಲು ಅನುಮತಿ ನೀಡಲಾಗಿದೆ ಎಂದು ಆದೇಶ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಸುನಿತಾ ಡಿ. ಪನ್ನೇಕರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಅಗತ್ಯವಾದ ನಿರ್ದೇಶನಗಳನ್ನು - ಪ್ರವೇಶ ದ್ವಾರಗಳು ಹಾಗೂ ಭದ್ರತೆಯ ವ್ಯವಸ್ಥೆಯನ್ನು ಪರಿಶೀಲಿಸಿ, ಸ್ಥಳದಲ್ಲಿದ್ದ ಬಿಜೆಪಿ ಮುಖಂಡರ ಜೊತೆ ವಿವರಗಳನ್ನು ಪಡೆದರು.
ಶಾಸಕ ಜಿ. ಜನಾರ್ಧನರೆಡ್ಡಿ ಅವರು, ಮುನಿಸಿಪಲ್ ಮೈದಾನದಲ್ಲಿ ಪಾದಯಾತ್ರೆಯ ಸಮಾರೋಪ ಸಮಾರಂಭ ನಡೆಸಬೇಕು ಎನ್ನುವ ಸಂಕಲ್ಪ ನನ್ನದು ಮತ್ತು ಬಿಜೆಪಿಯದ್ದು ಆಗಿತ್ತು. 14 ವರ್ಷಗಳ ನಂತರ ನಾನು ಬಳ್ಳಾರಿಗೆ ಬಂದ ನಂತರ ನಡೆಯುತ್ತಿರುವ ಅತಿ ದೊಡ್ಡ ಸಮಾರಂಭ ಇದಾಗಿದೆ. 1 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. 2028ರಲ್ಲಿ ನಮ್ಮ ಸರ್ಕಾರ ಬರಲಿದೆ. 2028ರ ಮೊದಲೇ ಡಿ.ಕೆ. ಶಿವಕುಮಾರ್ ಅವರು ನವಲಿ ಜಲಾಶಯದ ಪೂಜೆ ನಡೆಸದಿದ್ದಲ್ಲಿ ಬಿಜೆಪಿಯೇ ನವಲಿ ಜಲಾಶಯದ ಭೂಮಿ ಪೂಜೆ ನಡೆಲಿದೆ ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್