





ಬಳ್ಳಾರಿ, 08 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಪ್ರಜಾಪ್ರಭುತ್ವದಲ್ಲಿ ಜನಪರವಾದ ಯಾವುದೇ ರೀತಿ ಹೋರಾಟಗಳನ್ನು ಹತ್ತಿಕ್ಕಲು ಸರ್ಕಾರ ಇಲ್ಲವೇ ಮುಖ್ಯಮಂತ್ರಿಗಳು ಮುಂದಾಗಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿದ್ದಾರೆ.
ಬಳ್ಳಾರಿ ಚಲೋ ಪಾದಯಾತ್ರೆಯ ಸಮಾರೋಪಕ್ಕೆ ಬಳ್ಳಾರಿ ಮುನ್ಸಿಪಲ್ ಮೈದಾನದಲ್ಲಿ ಮೊದಲಿಗೆ ಅನುಮತಿ ನಿರಾಕರಿಸಿದ್ದನ್ನು ಖಂಡಿಸಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಈಗ ನಮ್ಮ ಹೋರಾಟಕ್ಕೆ ಮಣಿದ ಸರ್ಕಾರ ಸಮಾರೋಪ ಸಮಾರಂಭಕ್ಕೆ ಅನುಮತಿ ನೀಡಿದೆ. ನಮ್ಮದು ನ್ಯಾಯ ಸಮ್ಮತ ಹೋರಾಟ. ಯಾವುದೇ ಗಲಾಟೆ, ಗೊಂದಲ ಇಲ್ಲ. ಶಾಂತಿಯುತವಾಗಿ ಮಾಡುವ ಸಮಾರಂಭಕ್ಕೂ ವಿರೋಧ ಮಾಡುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದರು.
ಇದೇ 10ಕ್ಕೆ ಮುನ್ಸಿಪಲ್ ಮೈದಾನದಲ್ಲಿ ಬೃಹತ್ ಸಮಾವೇಶ ಮಾಡಲು ಮನವಿ ಮಾಡಿದ್ದೇವು. ಆದರೆ ಜಿಲ್ಲಾಧಿಕಾರಿ ಅವಕಾಶ ನೀಡಿರಲಿಲ್ಲ. ಅನುಮತಿ ನೀಡದಂತೆ ಅವರ ಮೇಲೆ ಸರ್ಕಾರದ ಒತ್ತಡವಿತ್ತು. ಸಮಾವೇಶವನ್ನು ಎಲ್ಲಾದರೂ ಮಾಡಿಕೊಳ್ಳಲಿ ಎಂಬುದು ಸರ್ಕಾರದ ಧೋರಣೆಯಾಗಿತ್ತು. ಇಂತಹದ್ದನ್ನು ಖಂಡಿಸಿ ನಾವು ಹೋರಾಟ ಮಾಡಲು ಮುಂದಾಗಿದ್ದೆವು. ಈಗ ನಮ್ಮ ಒತ್ತಡಕ್ಕೆ ಮಣಿದು ಅನುಮತಿ ನೀಡಿದ್ದಾರೆ ಎಂದು ಹೇಳಿದರು.
ಜನಪರವಾದ ಹೋರಾಟಕ್ಕೆ ಸರ್ಕಾರ ಯಾವುದೇ ಷರತ್ತು ಹಾಕುವಂತಿಲ್ಲ. ಬೆಂಗಳೂರಿನಲ್ಲಾದರೆ ಹೈಕೋರ್ಟ್ ಮಾರ್ಗಸೂಚಿ ಇದೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆಗೆ ಯಾವುದಾದರೂ ಷರತ್ತು ಹಾಕಿದ್ದರೇ ಎಂದು ಪ್ರಶ್ನಿಸಿದರು. ಭ್ರಮೆಯಲ್ಲಿರುವ ಈ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಅದನ್ನೆಲ್ಲ ಬಿಡಬೇಕು ಎಂದರು.
ಉಸ್ತುವಾರಿ ಸಚಿವರು ಕ್ಷಮೆ ಯಾಚಿಸಲಿ...
ದಾವಣಗೆರೆ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಹರಿಹರ ಶಾಸಕ ಬಿ.ಪಿ ಹರೀಶ್ ಅವರ ಬಗ್ಗೆ ಕೆಟ್ಟ ಕೆಟ್ಟ ಪದ ಬಳಸಿ ಮಾತನಾಡಿದ್ದಾರೆ. ದೊಡ್ಡ ಕುಟುಂಬದ ಹಿನ್ನೆಲೆಯ ವ್ಯಕ್ತಿಯೊಬ್ಬರು ಶಾಸಕರ ಬಗ್ಗೆ ಈ ರೀತಿ ಅಸಂಬದ್ಧವಾಗಿ ಮಾತನಾಡುವುದು ಕೇವಲ ಹರೀಶ್ ಅವರಿಗೆ ಮಾಡಿದ ಅಪಮಾನ ಅಲ್ಲ. ಇಡೀ ಕ್ಷೇತ್ರದ ಕ್ಷೇತ್ರದ ಜನರಿಗೆ ಮಾಡಿದ ಅವಮಾನ. ತಕ್ಷಣ ಸಚಿವ ಮಲ್ಲಿಕಾರ್ಜುನ್ ಅವರು ಬಹಿರಂಗವಾಗಿ ಶಾಸಕರು ಮತ್ತು ಕ್ಷೇತ್ರದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಮಂತ್ರಿ ಇದ್ದೇನೆ ಎಂದು ಅಧಿಕಾರದ ಮದದಲ್ಲಿ ಈ ರೀತಿ ಚುನಾಯಿತ ಶಾಸಕರ ಬಗ್ಗೆ ಅವಾಚ್ಯವಾಗಿ ಮಾತನಾಡಿದರೆ ನೀವು ಎಂತಹವರು ಎಂದು ಜನ ತಿಳಿಯುತ್ತಾರೆ. ಇಂತಹ ಕೆಟ್ಟ ಸ್ಥಿತಿಗೆ ರಾಜ್ಯದ ರಾಜಕಾರಣ ಇಳಿದಿರಲಿಲ್ಲ. ಇದೇ ವರಸೆ ಮುಂದುವರಿದರೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ. ಈ ರೀತಿ ಮಾತನಾಡುವುದು ಸಚಿವರ ಸಂಸ್ಕøತಿ ತೋರಿಸುತ್ತದೆ. ರಾಜಕಾರಣದಲ್ಲಿ ಟೀಕೆ ಮಾಡುವುದು ಸಹಜ. ಆದರೆ ಶಾಸಕರ ಬಗ್ಗೆ ತುಚ್ಛವಾಗಿ ಮಾತನಾಡುವುದು ಸರಿಯಲ್ಲ ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್